ಅಮಾನತುಗೊಂಡಿದ್ದ ಲೇಡಿ ತಹಶೀಲ್ದಾರ್ ಮನೆಯಲ್ಲಿ ಕೋಟಿ ಕೋಟಿ ಸಂಪತ್ತು: ವಜ್ರ, ಚಿನ್ನ, ಫ್ಲಾಟ್ಗಳು ಪತ್ತೆ, ಎಸಿಬಿ ಅಧಿಕಾರಿಗಳೇ ಶಾಕ್
ಹೈದರಾಬಾದ್ನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿ ಲೇಡಿ ತಹಶೀಲ್ದಾರ್ ಸುಚರಿತಾ ಅವರ ಮನೆಯಲ್ಲಿ 5.05 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿದೆ. ಚಿನ್ನ, ವಜ್ರ, ಐಷಾರಾಮಿ ಫ್ಲಾಟ್ಗಳು, ಕೃಷಿ ಭೂಮಿ, ಕಾರುಗಳು ಮತ್ತು ನಗದು ಸೇರಿದಂತೆ ಹಲವು ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಂಚ ಪ್ರಕರಣದಲ್ಲಿ ಬಂಧಿತರಾದ ಸುಚರಿತಾ ವಿರುದ್ಧ ಬೇನಾಮಿ ಆಸ್ತಿಗಳ ತನಿಖೆ ಮುಂದುವರಿದಿದೆ.

ಮುಖ್ಯಾಂಶಗಳು
- ಅಮಾನತುಗೊಂಡ ತಹಶೀಲ್ದಾರ್ ಸುಚರಿತ ಮನೆಯಲ್ಲಿ ಕೋಟ್ಯಂತರ ಅಕ್ರಮ ಆಸ್ತಿ ಪತ್ತೆ
- ಈ ಲೇಡಿ ಅಧಿಕಾರಿ ಈಗಾಗಲೇ ಮೂವತ್ತು ಲಕ್ಷ ಲಂಚ ಪ್ರಕರಣದಲ್ಲಿ ಜೈಲುಪಾಲು
- ಎಸಿಬಿ ಅಧಿಕಾರಿಗಳು ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ವಶ
ಹೈದರಾಬಾದ್, ಜೂನ್ 26: ಅಮಾನತುಗೊಂಡಿದ್ದ ತಹಶೀಲ್ದಾರ್ ಮತ್ತು ಜಂಟಿ ಸಬ್ ರಿಜಿಸ್ಟ್ರಾರ್ ತುಮ್ಮಕೊಮ್ಮ ಸುಚರಿತ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ACB) ದಾಳಿ ನಡೆದಿದೆ. ಹೈದರಾಬಾದ್ನ ಶಮೀರ್ಪೇಟೆಯಲ್ಲಿನ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಆದಾಯದ ಮೂಲಗಳಿಗಿಂತಲೂ ಅಧಿಕವಾಗಿ ಸಂಪಾದಿಸಲಾಗಿದ್ದ ಬರೋಬ್ಬರಿ 5.05 ಕೋಟಿ ರೂಪಾಯಿ ಅಧಿಕೃತ ಮೌಲ್ಯದ ಅಕ್ರಮ ಆಸ್ತಿಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಇದರ ಅಸಲಿ ಮೌಲ್ಯ ಇನ್ನೂ ಹಲವು ಪಟ್ಟು ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಆರೋಪಿ ತುಮ್ಮಕೊಮ್ಮ ಸುಚರಿತ ಅವರನ್ನು ಇತ್ತೀಚೆಗಷ್ಟೇ 30 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಪ್ರಸ್ತುತ ಅವರು ಜೈಲು ಪಾಲಾಗಿದ್ದಾರೆ. ಈ ಲಂಚದ ಪ್ರಕರಣದ ಬೆನ್ನಲ್ಲೇ ಆಕೆಯ ಅಕ್ರಮ ಸಂಪತ್ತಿನ ಜಾಡು ಹಿಡಿದ ಅಧಿಕಾರಿಗಳಿಗೆ ಭಾರಿ ಆಸ್ತಿಪಾಸ್ತಿಗಳು ಸಿಕ್ಕಿವೆ.
ಸುಚರಿತ ಅವರ ಸ್ವಂತ ನಿವಾಸ, ಆಕೆಯ ಸಂಬಂಧಿಕರು, ಬೇನಾಮಿಗಳು ಹಾಗೂ ಆಪ್ತರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ ಈ ಕೆಳಗಿನ ಆಸ್ತಿಗಳನ್ನು ವಶಪಡಿಸಿಕೊಂಡಿವೆ.
ಮತ್ತಷ್ಟು ಓದಿ: ಬಿಬಿಎಂಪಿ ಕೇಂದ್ರ ಕಚೇರಿ, ವಲಯ ಕಚೇರಿಗಳ ಮೇಲೆ ಎಸಿಬಿ ದಾಳಿ; 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ
ಚಿನ್ನ ಮತ್ತು ವಜ್ರ: 1.2 ಕೋಟಿ ರೂಪಾಯಿ ಮೌಲ್ಯದ ಭಾರಿ ಚಿನ್ನ ಮತ್ತು ವಜ್ರದ ಆಭರಣಗಳು.
ಕೃಷಿ ಭೂಮಿ: ಸಿದ್ದಿಪೇಟೆಯಲ್ಲಿರುವ 2.17 ಎಕರೆ ಕೃಷಿ ಭೂಮಿ.
ನಿವೇಶನಗಳು: ಹೈದರಾಬಾದ್ನ ಅತ್ಯಂತ ದುಬಾರಿ ಪ್ರದೇಶಗಳಲ್ಲಿರುವ 3 ಐಷಾರಾಮಿ ಫ್ಲಾಟ್ಗಳು ಮತ್ತು 2 ಪ್ಲಾಟ್ಗಳು.
ಕಾರುಗಳು: ಒಂದು ಫೋಕ್ಸ್ವ್ಯಾಗನ್ ಮತ್ತು ಒಂದು ಹುಂಡೈ ಕ್ರೆಟಾ ಕಾರು.
ನಗದು ಮತ್ತು ಠೇವಣಿ: 12 ಲಕ್ಷ ರೂಪಾಯಿ ನಗದು ಹಾಗೂ 38 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ ದಾಖಲೆಗಳು
ಬೇನಾಮಿ ಆಸ್ತಿಗಳ ಬಗ್ಗೆ ತೀವ್ರ ತನಿಖೆ ಸುಚರಿತ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಕೆ ತನ್ನ ಕಪ್ಪು ಹಣವನ್ನು ಬಚ್ಚಿಡಲು ಬೇರೆ ಯಾರ ಹೆಸರಿನಲ್ಲಾದರೂ ಬೇನಾಮಿ ಆಸ್ತಿಗಳನ್ನು ಖರೀದಿ ಮಾಡಿದ್ದಾಳೆಯೇ ಎಂಬ ಬಗ್ಗೆ ಅಧಿಕಾರಿಗಳು ಈಗ ಬ್ಯಾಂಕ್ ಖಾತೆ ಹಾಗೂ ಭೂ ದಾಖಲೆಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಲಂಚ ಪ್ರಕರಣ ಹಾಗೂ ಅಕ್ರಮ ಆಸ್ತಿ ಗಳಿಕೆ ಎರಡೂ ಪ್ರಕರಣಗಳ ತನಿಖೆಯನ್ನು ಎಸಿಬಿ ಈಗ ಮತ್ತಷ್ಟು ಚುರುಕುಗೊಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




