AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ಬೇಗ ಮದುವೆಯಾಗಲು ಇಷ್ಟವಿರಲಿಲ್ಲ, ಮಾನಸಿಕವಾಗಿ ಸಿದ್ಧಳಿರಲಿಲ್ಲ, ಅದಕ್ಕೆ ಕೇತನ್​ನ ಕೊಂದೆ ಎಂದ ಸಿಯಾ

ಪುಣೆ ಲೋಹಗಡ ಕೋಟೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಆತನ ಪ್ರೇಯಸಿ ಸಿಯಾ ಗೋಯಲ್ ಮತ್ತು ಪ್ರಿಯಕರ ಚೇತನ್ ಚೌಧರಿ ಭಾಗಿಯಾಗಿದ್ದಾರೆ. ಮದುವೆಗೆ ಸಿದ್ಧಳಿಲ್ಲದ ಸಿಯಾ, ಕೌಟುಂಬಿಕ ಒತ್ತಡ ಮತ್ತು ತನ್ನ ಅಕ್ರಮ ಸಂಬಂಧದಿಂದಾಗಿ ಕೇತನ್‌ನನ್ನು ಕೊಲೆ ಮಾಡಿದ್ದಾಳೆ. ಇದು ಸುದೀರ್ಘ ಯೋಜನೆಯ ಫಲವಾಗಿದ್ದು, ಮೃತನ ತಂದೆ ಸಿಯಾಳಲ್ಲಿ ಯಾವುದೇ ಪಶ್ಚಾತ್ತಾಪ ಕಂಡಿಲ್ಲ.

ಇಷ್ಟು ಬೇಗ ಮದುವೆಯಾಗಲು ಇಷ್ಟವಿರಲಿಲ್ಲ, ಮಾನಸಿಕವಾಗಿ ಸಿದ್ಧಳಿರಲಿಲ್ಲ, ಅದಕ್ಕೆ ಕೇತನ್​ನ ಕೊಂದೆ ಎಂದ ಸಿಯಾ
ಸಿಯಾ-ಕೇತನ್
ನಯನಾ ರಾಜೀವ್
|

Updated on: Jun 25, 2026 | 7:55 AM

Share

ಮುಖ್ಯಾಂಶಗಳು

  • ಕೌಟುಂಬಿಕ ಒತ್ತಡ ಮತ್ತು ಕಳ್ಳಪ್ರೇಮದ ಕಾರಣಕ್ಕಾಗಿಯೇ ಸಿಯಾಳಿಂದ ಕೇತನ್‌ ಕೊಲೆ
  • ಕೇತನ್ ಮುಗಿಸಲು ಮೇ ತಿಂಗಳಿನಿಂದಲೇ ಸರಣಿ ಸ್ಕೆಚ್‌ ಹಾಕುತ್ತಿದ್ದ ಸಿಯಾ
  • ಮಗನ ಶವ ಕಂಡರೂ ಸಿಯಾ ಮುಖದಲ್ಲಿ ದುಃಖವಿರಲಿಲ್ಲ ಎಂದು ಕೇತನ್ ತಂದೆ ಕಣ್ಣೀರು

ಪುಣೆ, ಜೂನ್ 25: ಮಹಾರಾಷ್ಟ್ರದ ಲೋಹಗಡ ಕೋಟೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಹತ್ಯೆ ಪ್ರಕರಣಕ್ಕೆ ಈಗ ಅತ್ಯಂತ ಪ್ರಮುಖ ತಿರುವು ಸಿಕ್ಕಿದೆ. ತನಿಖೆ ನಡೆಸುತ್ತಿರುವ ಪುಣೆ ಪೊಲೀಸರ ಪ್ರಕಾರ, ಸಿಯಾ ಗೋಯಲ್ ಈ ಮದುವೆಗೆ ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಆದರೆ ಆಕೆಯ ಕುಟುಂಬಸ್ಥರು ಕೇತನ್‌ನನ್ನು ಮದುವೆಯಾಗುವಂತೆ ಭಾರಿ ಒತ್ತಡ ಹೇರುತ್ತಿದ್ದರು. ಈ ಕೌಟುಂಬಿಕ ಒತ್ತಡ ಹಾಗೂ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆಗಿನ ಅಕ್ರಮ ಸಂಬಂಧವೇ ಈ ಭೀಕರ ಹತ್ಯೆಗೆ ಮೂಲ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಜೂನ್ 29 ರವರೆಗೆ ಆರೋಪಿಗಳಿಬ್ಬರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕಳ್ಳಪ್ರೇಮಕ್ಕೆ ಅಡ್ಡಿಯಾಗಿದ್ದ ವರ: ಪೊಲೀಸರ ತನಿಖೆ

ಹಿರಿಯ ಪೊಲೀಸ್ ಅಧಿಕಾರಿಗಳು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿಯ ಪ್ರಕಾರ, ಸಿಯಾ ಕಳೆದ ವರ್ಷದ ದೀಪಾವಳಿ ಪಾರ್ಟಿಯಲ್ಲಿ ಡ್ರೈಫ್ರೂಟ್ಸ್​ ವ್ಯಾಪಾರಿ ಚೇತನ್ ಚೌಧರಿಯನ್ನು ಭೇಟಿಯಾಗಿದ್ದಳು. ಇಬ್ಬರ ನಡುವೆ ಪ್ರೀತಿ ಬೆಳೆದಿದ್ದರಿಂದ ಆಕೆಗೆ ತನಗಾಗಿ ಹೆಚ್ಚಿನ ಸಮಯ ಬೇಕಿತ್ತು ಮತ್ತು ನವೆಂಬರ್‌ನಲ್ಲಿ ನಿಗದಿಯಾಗಿದ್ದ ಅದ್ದೂರಿ ಮದುವೆಯನ್ನು ಮುಂದುವರಿಸಲು ಆಕೆಗೆ ಇಷ್ಟವಿರಲಿಲ್ಲ. ತನ್ನ ಪ್ರೀತಿಯ ಮಧ್ಯೆ ಕೇತನ್ ಒಂದು ದೊಡ್ಡ ‘ಅಡಚಣೆ’ಯಾಗಿದ್ದರಿಂದ, ಆತನನ್ನು ಜಗತ್ತಿನಿಂದಲೇ ಇಲ್ಲದಂತೆ ಮಾಡಲು ಪ್ರಿಯಕರನ ಜೊತೆ ಕೆಫೆಯೊಂದರಲ್ಲಿ ಕುಳಿತು ಸಿಯಾ ಸ್ಕೆಚ್ ಹಾಕಿದ್ದಳು.

ಮೇ ತಿಂಗಳಿನಿಂದಲೇ ನಡೆದಿತ್ತು ಮರ್ಡರ್ ಸ್ಕೆಚ್

ಪೊಲೀಸ್ ಅಧಿಕಾರಿಗಳ ಪ್ರಕಾರ, ಕೇತನ್‌ನನ್ನು ಕಂದಕಕ್ಕೆ ತಳ್ಳುವ ಪ್ಲಾನ್ ಹಠಾತ್ತನೆ ಮಾಡಿದ್ದಲ್ಲ. ಅದರ ಪ್ರಯತ್ನ ತುಂಬಾ ತಿಂಗಳಿನಿಂದ ನಡೆದಿತ್ತು. ಮೇ 31 ರಂದು ಇಬ್ಬರೂ ಕೋಟೆಗೆ ಹೋಗಿದ್ದಾಗ ಕೇತನ್ ಅತ್ಯಂತ ಅಪಾಯಕಾರಿ ಅಂಚಿನಲ್ಲಿ ಕುಳಿತಿರುವುದನ್ನು ಸಿಯಾ ಗಮನಿಸಿದ್ದಳು. ಆ ದಿನವೇ ಆತನನ್ನು ತಳ್ಳಲು ಆಕೆ ಮೊದಲ ಬಾರಿಗೆ ಯೋಚಿಸಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಜೂನ್ 6 ರಂದು ಪ್ರಿ-ವೆಡ್ಡಿಂಗ್ ಶೂಟಿಂಗ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ಹೊರಡುವಾಗ, ಸಿಯಾ ಕಾರಿನಲ್ಲಿ ಪ್ಲಾನ್ ಮಾಡಿ ಕೇತನ್ ಪಾಸ್‌ಪೋರ್ಟ್ ಕದ್ದಿದ್ದಳು. ಇದರಿಂದ ಪ್ರವಾಸ ರದ್ದಾಗಿತ್ತು. ಪ್ರವಾಸ ರದ್ದಾದ ಬೆನ್ನಲ್ಲೇ ಜಗಳವಾಡಿ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದೊಯ್ದು ಸಿಯಾ ಮೊದಲ ಬಾರಿ ತಳ್ಳಿದ್ದಳು. ಆದರೆ ಕೇತನ್ ಪೊದೆ ಹಿಡಿದು ಬದುಕುಳಿದಾಗ, ‘ಹಾವು ಬಂತು’ ಎಂದು ಸುಳ್ಳು ಹೇಳಿ ಅಪ್ಪಿಕೊಂಡು ನಾಟಕವಾಡಿದ್ದಳು.

ಕೊನೆಗೂ ಜೂನ್ 18 ರಂದು ಆಕೆ ಅಂದುಕೊಂಡಂತೆ ಮಾಡಿಬಿಟ್ಲು ಹತ್ಯೆ

ಜೂನ್ 18 ರಂದು ತನ್ನ ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಸಿಯಾ, ಕೇತನ್‌ನನ್ನು ಮತ್ತೆ ಅದೇ ಕೋಟೆಗೆ ಕರೆತಂದಿದ್ದಾಳೆ. ಇವರಿಬ್ಬರು ಬರುವ ಮೊದಲೇ ಪ್ರಿಯಕರ ಚೇತನ್ ಚೌಧರಿ ಕೋಟೆಯ ಜಾಗದಲ್ಲಿ ಅವಿತು ಕುಳಿತಿದ್ದ. ಇಬ್ಬರೂ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ನಂತರ ಇದನ್ನು ಬಲವಾದ ಗಾಳಿಯಿಂದ ನಡೆದ ಅಪಘಾತ ಎಂದು ಬಿಂಬಿಸಲು ಪೊಲೀಸರಿಗೆ ಸುಳ್ಳು ಕಥೆ ಹೇಳಿದ್ದರು.

ಮಗನ ಹೆಣ ಕಂಡರೂ ಅವಳ ಕಣ್ಣಲ್ಲಿ ನೀರಿರಲಿಲ್ಲ: ತಂದೆಯ ಆಕ್ರಂದನ

ಮೃತನ ತಂದೆ ವಿಶಾಲ್ ಅಗರ್ವಾಲ್ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಾ, ನನ್ನ ಮಗನ ಶವದೊಂದಿಗೆ ಪೊಲೀಸರು ಮನೆಗೆ ಬಂದಾಗಲೂ ಸಿಯಾ ಮುಖದಲ್ಲಿ ಯಾವುದೇ ದುಃಖದ ಭಾವನೆ ಇರಲಿಲ್ಲ, ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಇಡೀ ಕೊಲೆ ಸಂಚು ಗೋಯಲ್ ಕುಟುಂಬಕ್ಕೂ ಮೊದಲೇ ತಿಳಿದಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಆದರೆ ಪೊಲೀಸರು ಈ ಆರೋಪವನ್ನು ಇನ್ನು ದೃಢಪಡಿಸಿಲ್ಲ. ಡಿಜಿಟಲ್ ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಚುರುಕಿನಿಂದ ಸಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us