AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ತಿನಲ್ಲಿ ರಾಜಕೀಯ ಸಮರ, ಮಾರ್ಚ್​ 9ರಂದು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯು ಮಾರ್ಚ್ 9 ರಂದು ಮಂಡನೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸ್ಪೀಕರ್‌ಗೆ ನೋಟಿಸ್‌ ನೀಡಿದ್ದು, ರಾಹುಲ್ ಗಾಂಧಿಯವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಮತ್ತು ಸದನದಲ್ಲಿ ಉಂಟಾದ ಗದ್ದಲ ಇದಕ್ಕೆ ಪ್ರಮುಖ ಕಾರಣಗಳು. ಸ್ಪೀಕರ್ ಪದಚ್ಯುತಿ ಪ್ರಕ್ರಿಯೆ ಮತ್ತು ಸಂವಿಧಾನದ ಸಂಬಂಧಿತ ವಿಧಿಗಳನ್ನು ಲೇಖನವು ವಿವರಿಸುತ್ತದೆ.

ಸಂಸತ್ತಿನಲ್ಲಿ ರಾಜಕೀಯ ಸಮರ, ಮಾರ್ಚ್​ 9ರಂದು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ
ಓಂ ಬಿರ್ಲಾImage Credit source: The quint
ನಯನಾ ರಾಜೀವ್
|

Updated on: Feb 11, 2026 | 10:39 AM

Share

ನವದೆಹಲಿ, ಫೆಬ್ರವರಿ 11: ಲೋಕಸಭಾ ಸ್ಪೀಕರ್ ಓಂ ಬಿರ್ಲಾ(Om Birla) ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಮಾರ್ಚ್ 9 ರಂದು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಓಂ ಬಿರ್ಲಾ ಅವರನ್ನು ಲೋಕಸಭಾ ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಆರಂಭಿಸಿರುವಂತೆಯೇ ಈ ಬೆಳವಣಿಗೆ ಸಂಭವಿಸಿದೆ.

ಕಾಂಗ್ರೆಸ್(Congress) ಪಕ್ಷವು ಇತರೆ ವಿರೋಧ ಪಕ್ಷಗಳೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ಗೊತ್ತುವಳಿಯ ನೋಟಿಸ್​ ಅನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಅವರಿಗೆ ಫೆಬ್ರವರಿ 10ರಂದು ಸಲ್ಲಿಸಿತ್ತು. ಇದಾದ ಬಳಿಕ ಓಂ ಬಿರ್ಲಾ ಸದನದಿಂದ ಹಿಂದೆ ಸರಿದಿದ್ದಾರೆ.

ಸಂವಿಧಾನದ 96ನೇ ವಿಧಿ ಏನು ಹೇಳುತ್ತೆ? ಸಂವಿಧಾನದ 94C ವಿಧಿಯು ಲೋಕಸಭೆಯ ಸ್ಪೀಕರ್ ಅಥವಾ ಉಪ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ನಿಬಂಧನೆಗಳ ಬಗ್ಗೆ ಹೇಳುತ್ತದೆ. ಸಂವಿಧಾನದ 96 ನೇ ವಿಧಿಯು ಸ್ಪೀಕರ್‌ಗೆ ಸದನದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಸ್ಪೀಕರ್ ಅನ್ನು ಪದಚ್ಯುತಗೊಳಿಸುವ ನಿರ್ಣಯದ ಮೇಲೆ ಸ್ಪೀಕರ್ ತಮ್ಮ ಮತ ಚಲಾಯಿಸಬಹುದು, ಆದರೆ ಸಮಬಲದ ಸಂದರ್ಭದಲ್ಲಿ ಮತದಾನದಿಂದ ದೂರವಿರಬಹುದು.

ಮತ್ತಷ್ಟು ಓದಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು

ಲೋಕಸಭೆಯಲ್ಲಿ ಗದ್ದಲ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಭಾರತ-ಚೀನಾ ಸಂಘರ್ಷವನ್ನು ಉಲ್ಲೇಖಿಸುವ ಪುಸ್ತಕದ ಆಯ್ದ ಭಾಗವನ್ನು ಓದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಅವಕಾಶ ನೀಡದ ಕಾರಣ ಫೆಬ್ರವರಿ 2 ರಿಂದ ಲೋಕಸಭೆಯಲ್ಲಿ ಗದ್ದಲ ಉಂಟಾಗಿದೆ. ಫೆಬ್ರವರಿ 4 ರಂದು ವಿರೋಧ ಪಕ್ಷಗಳು ಸೃಷ್ಟಿಸಿದ ಗದ್ದಲದಿಂದಾಗಿ, ಪ್ರಧಾನಿ ಮೋದಿಯವರು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಫೆಬ್ರವರಿ 5 ರಂದು ಪ್ರಧಾನಿ ಭಾಷಣವಿಲ್ಲದೆಯೇ ವಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ವಿರೋಧ ಪಕ್ಷದ ಆರೋಪ ಸೇರಿದಂತೆ 4 ಘಟನೆಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಚೀನಾದೊಂದಿಗಿನ 2020 ರ ಬಿಕ್ಕಟ್ಟನ್ನು ಪ್ರಸ್ತಾಪಿಸುವಾಗ ಗಾಂಧಿಯವರು ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ