
ನವದೆಹಲಿ, ಜೂನ್ 13: ಭಾರತೀಯ ಸೇನೆಯ (Indian Army) ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಿಸಲಾಗಿದೆ. ಭಾರತ ಸರ್ಕಾರದ ರಕ್ಷಣಾ ಸಚಿವಾಲಯವು ಸೇನೆಯ ಅತ್ಯಂತ ಹಿರಿಯ ಮತ್ತು ಅನುಭವಿ ಅಧಿಕಾರಿಯಾದ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ. ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಭಾರತೀಯ ಸೇನೆಯಲ್ಲಿ ಅತ್ಯಂತ ಸುದೀರ್ಘ ಅನುಭವ ಹೊಂದಿರುವ ಅಧಿಕಾರಿಯಾಗಿದ್ದಾರೆ.
ನೂತನ ಸೇನಾ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮುನ್ನ ಅವರು ಭಾರತೀಯ ಸೇನೆಯ ಅತ್ಯಂತ ಪ್ರಮುಖ ಕಮಾಂಡ್ ಆಯಕಟ್ಟಿನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ವೆಲ್ಲಿಂಗ್ಟನ್ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಧೀರಜ್ ಸೇಠ್ 1986ರಲ್ಲಿ ಭಾರತೀಯ ಸೇನೆಯ ಪ್ರತಿಷ್ಠಿತ ‘ಆರ್ಮರ್ಡ್ ಕಾರ್ಪ್ಸ್’ಗೆ ನಿಯೋಜನೆಗೊಂಡಿದ್ದರು.
ಇದನ್ನೂ ಓದಿ: Operation Sindoor 2.0: ಭಾರತ ಆಪರೇಷನ್ ಸಿಂಧೂರ್ 2.0ಗೆ ತಯಾರಿ ನಡೆಸುತ್ತಿದೆ:ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಧೀರಜ್ ಸೇಠ್ ಅವರು ಭಾರತೀಯ ಸೇನೆಯಲ್ಲಿ ಹಲವಾರು ಪ್ರಮುಖ ಕಾರ್ಯಾಚರಣೆ ಹಾಗೂ ನಾಯಕತ್ವದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಭಾರತದ ಪಶ್ಚಿಮ ಗಡಿಯಲ್ಲಿ ನಡೆದ ಪ್ರಮುಖ ತ್ರಿ-ಸೇವಾ (ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಜಂಟಿ) ಮಿಲಿಟರಿ ಸಮರಾಭ್ಯಾಸಗಳ ಉಸ್ತುವಾರಿಯನ್ನೂ ನೋಡಿಕೊಂಡಿದ್ದರು.
ಇದನ್ನೂ ಓದಿ: ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು
ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಜೂನ್ 30ರಂದು ನಿವೃತ್ತಿ ಹೊಂದಲಿದ್ದು, ಅದೇ ದಿನ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಭಾರತದ 31ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇವರ ಅಧಿಕಾರಾವಧಿ ಆಗಸ್ಟ್ 31, 2028ರವರೆಗೆ ಇರಲಿದೆ. ಪ್ರಸ್ತುತ ಜಾಗತಿಕ ಬಿಕ್ಕಟ್ಟು ಹಾಗೂ ಚೀನಾ-ಭಾರತ ಗಡಿ ಉದ್ವಿಗ್ನತೆಯ ನಡುವೆ, ಭಾರತೀಯ ಸೇನೆಯ ಆಧುನೀಕರಣ ಮತ್ತು ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸುವ ಪ್ರಮುಖ ಜವಾಬ್ದಾರಿ ನೂತನ ಸೇನಾ ಮುಖ್ಯಸ್ಥರ ಹೆಗಲೇರಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ