16 ವರ್ಷದ ಮಗಳನ್ನು ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿ ಕಾಲುವೆಯಲ್ಲಿ ಎಸೆದ ಅಪ್ಪ!
ಉತ್ತರ ಪ್ರದೇಶದ ಲಕ್ನೋದಲ್ಲಿ ಮಗಳ ಪ್ರೇಮ ಪ್ರಕರಣದಿಂದ ಕೋಪಗೊಂಡ ತಂದೆ ಕ್ರೂರವಾದ ನಿರ್ಧಾರ ತೆಗೆದುಕೊಂಡಿದ್ದಾನೆ. ತನ್ನ ಅಪ್ರಾಪ್ತ ಮಗಳ ಕತ್ತು ಹಿಸುಕಿ ಕೊಂದು, ಗುರುತು ಸಿಗಬಾರದೆಂದು ಆಕೆಯ ಮುಖಕ್ಕೆ ಆ್ಯಸಿಡ್ ಹಾಕಿ ಸುಟ್ಟು ಹಾಕಿದ್ದಾನೆ. ಬಳಿಕ ಕಾಲುವೆಯಲ್ಲಿ ಮಗಳ ಶವ ಬಿಸಾಡಿದ್ದಾನೆ. ಲಕ್ನೋದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಮಾನವೀಯತೆ ಮತ್ತು ಸಂಬಂಧಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಲಕ್ನೋ, ಏಪ್ರಿಲ್ 20: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳನ್ನು ಕೊಂದು, ಆಕೆಯ ಮುಖದ ಮೇಲೆ ಆ್ಯಸಿಡ್ (Acid Attack) ಸುರಿದು ಆಕೆಯ ಗುರುತನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ. ಆರೋಪಿ ನಂತರ ಆಕೆಯ ಶವವನ್ನು ಬಾರಾಬಂಕಿಯ ಶಾರದಾ ಕಾಲುವೆಯಲ್ಲಿ ಎಸೆದಿದ್ದಾನೆ. ಈ ಘಟನೆ ಚಿನ್ಹಾಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಳಿಕ ಆತನೇ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ನಾಪತ್ತೆ ದೂರು ದಾಖಲಿಸಿದ್ದಾನೆ. ಪೊಲೀಸರ ತನಿಖೆ ವೇಳೆ ಅಪ್ಪನೇ ಮಗಳ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಆರೋಪಿ ತಂದೆ ವಿಜಯ್ ಕುಮಾರ್ ಚೌಬೆ 16 ವರ್ಷದ ತನ್ನ ಮಗಳ ಪ್ರೇಮ ಪ್ರಕರಣದಿಂದ ಬೇಸತ್ತಿದ್ದ. ಹೀಗಾಗಿ, ಆಕೆಯಿಂದ ತನ್ನ ಮರ್ಯಾದೆಗೆ ಕುತ್ತು ಬರುತ್ತದೆ ಎಂದು ತನ್ನ ಸ್ನೇಹಿತ ಅಬ್ದುಲ್ ಮನ್ನನ್ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಭೂತೋಚ್ಚಾಟನೆ ಮಾಡುವ ನೆಪದಲ್ಲಿ ಆಕೆಯನ್ನು ತನ್ನ ಕಾರಿನಲ್ಲಿ ಕರೆದೊಯ್ದು, ದಾರಿಯಲ್ಲಿ ಟವಲ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ.
ಇದನ್ನೂ ಓದಿ: ನೆಲಮಂಗಲ: ಪರ ಸ್ತ್ರೀ ವ್ಯಾಮೋಹಕ್ಕಾಗಿ ಪತ್ನಿಗೆ ಕಿರುಕುಳ, ನ್ಯಾಯಕ್ಕಾಗಿ ಡಿವೈಎಸ್ಪಿ ಕಚೇರಿ ಮೆಟ್ಟಿಲೇರಿದ ಮಹಿಳೆ
ಕೊಲೆಯ ನಂತರ, ಆ ಬಾಲಕಿಯ ಗುರುತು ಮರೆಮಾಡಲು ಆಕೆಯ ಮುಖಕ್ಕೆ ಆಸಿಡ್ ಹಚ್ಚಿ ಸುಟ್ಟು ಹಾಕಿದ್ದ. ನಂತರ ಆ ಶವವನ್ನು ಬಾರಾಬಂಕಿಯ ಬದ್ದುಪುರ ಪ್ರದೇಶದ ಶಾರದಾ ಕಾಲುವೆಯ ದಡದಲ್ಲಿ ಎಸೆಯಲಾಗಿತ್ತು. ಕೊಲೆಯ ನಂತರ, ಪೊಲೀಸರ ದಾರಿ ತಪ್ಪಿಸಲು ತಾನೇ ಐಜಿಆರ್ಎಸ್ ಪೋರ್ಟಲ್ನಲ್ಲಿ ನಾಪತ್ತೆ ದೂರು ದಾಖಲಿಸಿ, ತನ್ನ ಮಗಳ ಗೆಳೆಯನೇ ಆಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದ. ಪೊಲೀಸರು ಅನುಮಾನಗೊಂಡು ತನಿಖೆ ಆರಂಭಿಸಿದರು. ತನಿಖೆಯ ಸಮಯದಲ್ಲಿ ಆತ ಪದೇಪದೆ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಾ ಇದ್ದುದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆತನೇ ಮಗಳ ಕೊಲೆ ಮಾಡಿದ್ದು ಬಯಲಾಗಿತ್ತು.
ಇದನ್ನೂ ಓದಿ: ಛತ್ತೀಸ್ಗಢದಲ್ಲಿ ಬೆಟ್ಟಕ್ಕೆ ಡಿಕ್ಕಿಯಾಗಿ ವಿಮಾನ ಪತನ; ಇಬ್ಬರು ಪೈಲಟ್ ಸಾವು
ಚಿನ್ಹಾಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ತಂದೆ ವಿಜಯ್ ಕುಮಾರ್ ಚೌಬೆ ಮತ್ತು ಆತನ ಸಹಚರ ಅಬ್ದುಲ್ ಮನ್ನನ್ ಅವರನ್ನು ಬಂಧಿಸಿದರು. ಕೊಲೆಗೆ ಬಳಸಲಾದ ಟವೆಲ್ ಮತ್ತು ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮಗಳನ್ನು ರಕ್ಷಿಸಬೇಕಾದ ತಂದೆಯೇ ಆಕೆಯ ಸಾವಿಗೆ ಕಾರಣನಾಗಿದ್ದು ತೀವ್ರ ಆಘಾತಕಾರಿ ಸಂಗತಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




