ಮೈತುಂಬಾ ಒಡವೆ ಹಾಕೊಂಡಿರೋ ಫೋಟೊನಾ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ ಮಹಿಳೆ, ಎಲ್ಲವನ್ನೂ ಕದ್ದೊಯ್ದ ಕಳ್ಳರು
ಮಧ್ಯಪ್ರದೇಶದ ಶಿವಪುರಿಯಲ್ಲಿ ಯೂಟ್ಯೂಬರ್ ರಚನಾ ಗುರ್ಜರ್ ಮನೆಯಲ್ಲಿ ನಡೆದ 8-10 ಲಕ್ಷ ರೂ. ಮೌಲ್ಯದ ಕಳ್ಳತನವು ಸಾಮಾಜಿಕ ಮಾಧ್ಯಮದಲ್ಲಿ ವೈಯಕ್ತಿಕ ಸಂಪತ್ತು ಪ್ರದರ್ಶನದ ಅಪಾಯಗಳನ್ನು ಎತ್ತಿ ತೋರಿಸಿದೆ. ಇನ್ಸ್ಟಾಗ್ರಾಂನಲ್ಲಿ ಒಡವೆಗಳನ್ನು ಪೋಸ್ಟ್ ಮಾಡಿದ್ದೇ ಕಳ್ಳರಿಗೆ ಸುಳಿವು ನೀಡಿದೆ. ಈ ಘಟನೆ ಆನ್ಲೈನ್ನಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸುವ ಮಹತ್ವವನ್ನು ತಿಳಿಸುತ್ತದೆ.

ಶಿವಪುರಿ, ಜೂನ್ 08: ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈಯಕ್ತಿಕ ಸಂಪತ್ತು, ಐಷಾರಾಮಿ ಜೀವನಶೈಲಿ ಮತ್ತು ಆಭರಣ(Jewellery)ಗಳನ್ನು ಅತಿಯಾಗಿ ಪ್ರದರ್ಶಿಸುವುದು ಎಷ್ಟು ದೊಡ್ಡ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದ ಭೀಕರ ಕಳ್ಳತನದ ಘಟನೆಯೇ ಸಾಕ್ಷಿಯಾಗಿದೆ. ಜಿಲ್ಲೆಯ ನರವರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹಾನಿ ಗ್ರಾಮದಲ್ಲಿ ವಾಸಿಸುವ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ಶನಿವಾರ ಬೆಳಗಿನ ಜಾವ ನುಗ್ಗಿದ ಮುಸುಕುಧಾರಿ ಕಳ್ಳರ ಗುಂಪೊಂದು ಸುಮಾರು 8 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿದೆ.
ಈ ಕಳ್ಳತನವು ಇಂಟರ್ನೆಟ್ ಬಳಕೆದಾರರಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾದ ಮಾಹಿತಿ ಹಂಚಿಕೊಳ್ಳುವಿಕೆಯ ಅಪಾಯಗಳ ಬಗ್ಗೆ ಗಂಭೀರ ಎಚ್ಚರಿಕೆಯ ಸಂದೇಶ ನೀಡಿದೆ. ಪೊಲೀಸ್ ದೂರಿನ ಪ್ರಕಾರ, ಶನಿವಾರ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ರಚನಾ ಗುರ್ಜರ್ ಮತ್ತು ಅವರ ಪತಿ ಊದಲ್ ಸಿಂಗ್ ಗುರ್ಜರ್ ಸೇರಿದಂತೆ ಕುಟುಂಬದ ಸದಸ್ಯರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು ಕಾಂಪೌಂಡ್ನ ತಂತಿ ಬೇಲಿಯನ್ನು ಕತ್ತರಿಸಿ ಒಳನುಗ್ಗಿದ್ದಾರೆ.
ಕಳ್ಳರು ಮೊದಲು ದಂಪತಿ ಮಲಗಿದ್ದ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ. ಇದರಿಂದಾಗಿ ಕುಟುಂಬಸ್ಥರು ಒಳಗೆ ಸಿಕ್ಕಿಬಿದ್ದು ಹೊರಬರಲಾರದ ಸ್ಥಿತಿ ನಿರ್ಮಾಣವಾಯಿತು. ಮನೆಯೊಳಗೆ ಸಿಸಿಟಿವಿ ಕ್ಯಾಮೆರಾಗಳಿರುವುದನ್ನು ಅರಿತಿದ್ದ ಮುಸುಕುಧಾರಿ ಕಳ್ಳರು, ತಮ್ಮ ಮುಖಗಳು ಕಾಣದಂತೆ ತಡೆಯಲು ಕ್ಯಾಮರಾವನ್ನು ಕೋಲಿನ ಸಹಾಯದಿಂದ ಮೇಲ್ಮುಖವಾಗಿ ತಿರುಗಿಸಿದ್ದಾರೆ.
ಅಲ್ಮೇರಾಗಳ ಬೀಗವನ್ನು ಮುರಿದು 1.91 ಲಕ್ಷ ರೂ. ನಗದು, ಚಿನ್ನದ ಮಂಗಳಸೂತ್ರ, ನಾಲ್ಕು ಚಿನ್ನದ ಉಂಗುರಗಳು, ಬೆಳ್ಳಿಯ ಒಡ್ಯಾಣ ಮತ್ತು ಮನೆಯಲ್ಲಿದ್ದ ಪ್ರಮುಖ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ವಿಚಿತ್ರವೆಂದರೆ, ಕಳ್ಳರು ಹೋಗುವಾಗ ಮನೆಯಲ್ಲಿದ್ದ ಎನರ್ಜಿ ಡ್ರಿಂಕ್ನ (ರೆಡ್ ಬುಲ್) ಒಂದು ಇಡೀ ಪೆಟ್ಟಿಗೆಯನ್ನೂ ಸಹ ಹೊತ್ತೊಯ್ದಿದ್ದಾರೆ.
ಮತ್ತಷ್ಟು ಓದಿ: ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ
ಬೆಳಗ್ಗೆ 4 ಗಂಟೆಯ ಸುಮಾರಿಗೆ ರಚನಾ ಅವರು ನೀರು ಕುಡಿಯಲು ಎದ್ದಾಗ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಗೊತ್ತಾಗಿದೆ. ತಕ್ಷಣ ಅವರು ಫೋನ್ ಮೂಲಕ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಮನೆಗೆ ಧಾವಿಸಿ ಬಂದು ಬಾಗಿಲು ತೆರೆದು ಅವರನ್ನು ರಕ್ಷಿಸಿದ್ದಾರೆ. ಹಾಗಾಗಿ ಎಂದೂ ಕೂಡ ನಿಮ್ಮ ವೈಯಕ್ತಿಕ ಮಾಹಿತಿಯಾಗಲೀ ಅಥವಾ ಒಡವೆ, ದುಡ್ಡಿನ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Mon, 8 June 26




