AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಅಜಿತ್ ಪವಾರ್ ಜನ್ಮ ದಿನಾಚರಣೆ ಆಚರಣೆ; ಮಹಾರಾಷ್ಟ್ರ ಸರ್ಕಾರ ಘೋಷಣೆ

ಕಳೆದ ಜನವರಿ ತಿಂಗಳಲ್ಲಿ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾದರು. ಅವರ ಗೌರವಾರ್ಥ ಮಹಾರಾಷ್ಟ್ರ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜುಲೈ 22ರಂದು ಅಜಿತ್ ದಾದಾ ಅವರ ಜನ್ಮ ದಿನಾಚರಣೆ. ಅಜಿತ್ ದಾದಾ ಅವರ ಜನ್ಮ ದಿನಾಚರಣೆಯನ್ನು ಇನ್ಮುಂದೆ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುವುದು. ಜುಲೈ 22ರಂದು ಎಲ್ಲಾ ರಾಜ್ಯ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಅಜಿತ್ ಪವಾರ್ ಅವರ ಜನ್ಮದಿನದಂದು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಬೇಕೆಂದು ರಾಜ್ಯ ಸರ್ಕಾರದಿಂದ ಸರ್ಕಾರಿ ಆದೇಶ ಹೊರಡಿಸಲಾಗಿದೆ.

ಎಲ್ಲ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಅಜಿತ್ ಪವಾರ್ ಜನ್ಮ ದಿನಾಚರಣೆ ಆಚರಣೆ; ಮಹಾರಾಷ್ಟ್ರ ಸರ್ಕಾರ ಘೋಷಣೆ
Ajit PawarImage Credit source: Getty Image
ಸುಷ್ಮಾ ಚಕ್ರೆ
|

Updated on: Jul 15, 2026 | 8:20 PM

Share

ಮುಂಬೈ, ಜುಲೈ 15: ಮಹಾರಾಷ್ಟ್ರ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದಿವಂಗತ ನಾಯಕ ಅಜಿತ್ ಪವಾರ್ (Ajit Pawar) ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು. ರಾಜ್ಯ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರದ ಪ್ರಕಾರ, ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಜನ್ಮ ದಿನಾಚರಣೆಯನ್ನು ಈಗ ಸರ್ಕಾರಿ ಮಟ್ಟದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಮಹಾನ್ ವ್ಯಕ್ತಿಗಳ ಅಧಿಕೃತ ಜನ್ಮ ದಿನಾಚರಣೆ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಕುರಿತು ಸರ್ಕಾರದಿಂದ ಇಂದು ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಹಿರಿಯ ಎನ್‌ಸಿಪಿ ನಾಯಕರಾದ ಹಸನ್ ಮುಶ್ರಿಫ್ ಮತ್ತು ಛಗನ್ ಭುಜಬಲ್ ಅವರು ಮುಖ್ಯಮಂತ್ರಿಯವರಿಗೆ ಈ ಕುರಿತು ಬೇಡಿಕೆಯನ್ನು ಇಟ್ಟಿದ್ದರು. ಅವರ ಬೇಡಿಕೆಗೆ ಒಪ್ಪಿರುವ ಸರ್ಕಾರ 6 ತಿಂಗಳ ಹಿಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಹಾರಾಷ್ಟ್ರದ ಅಭಿವೃದ್ಧಿಗೆ ನೀಡಿದ ಅಭೂತಪೂರ್ವ ಕೊಡುಗೆಗೆ ಗೌರವವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಜಿತ್‌ ಪವಾರ್ ಅವರ ಮೊದಲ ಜನ್ಮ ದಿನಾಚರಣೆಯನ್ನು ಜುಲೈ 22ರಂದು ರಾಜ್ಯಾದ್ಯಂತ ಸರ್ಕಾರಿ ಮಟ್ಟದಲ್ಲಿ ಆಚರಿಸಲಾಗುವುದು.

ಇದನ್ನೂ ಓದಿ: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು

ಸುತ್ತೋಲೆಯಲ್ಲಿರುವ ಪ್ರಮುಖ ಅಂಶಗಳು:

ಜುಲೈ 22ರಂದು ಸಚಿವಾಲಯ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ದಾದಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಿವೆ. ರಾಜ್ಯದ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜುಗಳಿಗೂ ಈ ಆದೇಶವನ್ನು ಕಡ್ಡಾಯಗೊಳಿಸಲಾಗಿದೆ. ಅಜಿತ್ ಪವಾರ್ ಅವರ ಜೀವನ ಪ್ರಯಾಣವನ್ನು ಆಧರಿಸಿದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ಅಲ್ಲಿ ಆಯೋಜಿಸಲಾಗುವುದು.

ಅಜಿತ್‌ ಪವಾರ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯದ ಉಪಮುಖ್ಯಮಂತ್ರಿ, ಹಣಕಾಸು ಸಚಿವ ಮತ್ತು ಜಲಸಂಪನ್ಮೂಲ ಸಚಿವರಂತಹ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅವರ ಕೆಲಸದ ಶಿಸ್ತು, ಆಡಳಿತದ ಮೇಲಿನ ಬಿಗಿ ಹಿಡಿತ, ಬೆಳಿಗ್ಗೆ ಬೇಗನೆ ಕೆಲಸ ಪ್ರಾರಂಭಿಸುವ ವಿಶಿಷ್ಟ ವಿಧಾನ ಮತ್ತು ‘ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ’ ಎಂಬ ಅವರ ಖ್ಯಾತಿ ಮಹಾರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಅಪಘಾತಕ್ಕೀಡಾದ ಬಾರಾಮತಿಯ ಗ್ರಾಮದಲ್ಲೇ ಮತ್ತೊಂದು ವಿಮಾನ ಪತನ

ದಾದಾ ದುರಂತ ಅಂತ್ಯ:

ಜನವರಿ 28ರಂದು ನಡೆದ ವಿಮಾನ ಅಪಘಾತದ ನಂತರ ಅಜಿತ್ ಪವಾರ್ ದುರಂತವಾಗಿ ಮೃತಪಟ್ಟಿದ್ದರು. ಅವರ ಮರಣದ ನಂತರ, ಇಡೀ ಮಹಾರಾಷ್ಟ್ರ ಆಘಾತಕ್ಕೊಳಗಾಯಿತು. ಈಗ, ಅವರ ಮೊದಲ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಈ ನಿರ್ಧಾರವು ದಾದಾ ಅವರ ಸಾರ್ವಜನಿಕ ಸೇವೆಯ ಪರಂಪರೆ ಮತ್ತು ‘ನವ ಮಹಾರಾಷ್ಟ್ರ’ವನ್ನು ರಚಿಸುವ ಅವರ ಧ್ಯೇಯಕ್ಕೆ ಸರ್ಕಾರಿ ಮಟ್ಟದಲ್ಲಿ ಸಲ್ಲಿಸುವ ಅತಿದೊಡ್ಡ ಗೌರವವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us