ಮೋದಿ ಜತೆ ದ್ವಿಪಕ್ಷೀಯ ಸಭೆ, ಗಾಂಧಿ ಕುಟುಂಬದೊಂದಿಗೆ ಉಪಹಾರ: ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಭಾರತ ಭೇಟಿ ಹೈಲೈಟ್ಸ್

ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಭಾರತ ಭೇಟಿ ಗಮನ ಸೆಳೆದಿದೆ. ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿ ವ್ಯಾಪಾರ, ತಂತ್ರಜ್ಞಾನ, ರಕ್ಷಣಾ ಸಹಕಾರ ಕುರಿತು ಚರ್ಚಿಸಿದರು. ಇದಲ್ಲದೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಉಪಹಾರ ಕೂಟದಲ್ಲಿ ಭೇಟಿಯಾಗಿ ಸಮಾಲೋಚಿಸಿದರು. ಬಳಿಕ ಕೇರಳದಲ್ಲಿ ಧಾರ್ಮಿಕ ವಿದ್ವಾಂಸರನ್ನು ಭೇಟಿ ಮಾಡಿ ಉಭಯ ರಾಷ್ಟ್ರಗಳ ರಾಜತಾಂತ್ರಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಿದರು.

ಮೋದಿ ಜತೆ ದ್ವಿಪಕ್ಷೀಯ ಸಭೆ, ಗಾಂಧಿ ಕುಟುಂಬದೊಂದಿಗೆ ಉಪಹಾರ: ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಭಾರತ ಭೇಟಿ ಹೈಲೈಟ್ಸ್
ರಾಹುಲ್ ಗಾಂಧಿ
Image Credit source: Anwar Ibrahim x Post

Updated on: Sep 14, 2026 | 11:20 AM

ನವದೆಹಲಿ, ಸೆಪ್ಟೆಂಬರ್ 14: ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ನಡುವೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉಪಹಾರ ಕೂಟದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಜತೆಗಿನ ದ್ವಿಪಕ್ಷೀಯ ಸಭೆಯ ಬೆನ್ನಲ್ಲೇ ಈ ಭೇಟಿ ನಡೆದಿದ್ದು, ಬಳಿಕ ಅನ್ವರ್ ಇಬ್ರಾಹಿಂ ಅವರು ಪ್ರಮುಖ ಧಾರ್ಮಿಕ ವಿದ್ವಾಂಸರನ್ನು ಭೇಟಿಯಾಗಲು ನೇರವಾಗಿ ಕೇರಳಕ್ಕೆ ತೆರಳಿದ್ದಾರೆ.

ರಾಹುಲ್ ಗಾಂಧಿ ಅವರನ್ನು ನನ್ನ ಆತ್ಮೀಯ ಸ್ನೇಹಿತ ಎಂದು ಕರೆದಿರುವ ಮಲೇಷ್ಯಾ ಪ್ರಧಾನಿ, ಈ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಉಭಯ ದೇಶಗಳ ಜನರ ನಡುವಿನ ಸಂಬಂಧ ಮತ್ತು ಪ್ರಸ್ತುತ ರಾಜತಾಂತ್ರಿಕ ಬೆಳವಣಿಗೆಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಯಾಪಾರ, ಸೆಮಿಕಂಡಕ್ಟರ್, ಡಿಜಿಟಲ್ ಆರ್ಥಿಕತೆ ಮತ್ತು ರಕ್ಷಣಾ ಸಹಕಾರದ ಕುರಿತು ದ್ವಿಪಕ್ಷೀಯ ಸಭೆ ನಡೆಸಿದ ಮರುದಿನವೇ ಅನ್ವರ್ ಇಬ್ರಾಹಿಂ ಅವರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿರುವುದು ಗಮನ ಸೆಳೆದಿದೆ.

ಮತ್ತಷ್ಟು ಓದಿ:ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್: ಕಿಶೋರ್ ಕುಮಾರ್ ಹಾಡು ಹಾಡಿ ಮೋಡಿ ಮಾಡಿದ ಅನ್ವರ್ ಇಬ್ರಾಹಿಂ

ದೆಹಲಿಯಿಂದ ನೇರವಾಗಿ ಕೇರಳಕ್ಕೆ: ದೆಹಲಿಯ ರಾಜತಾಂತ್ರಿಕ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಅನ್ವರ್ ಇಬ್ರಾಹಿಂ ಅವರು ಕೇರಳದ ಕೋಝಿಕ್ಕೋಡ್‌ಗೆ ಭೇಟಿ ನೀಡಿದರು. ಕರಿಪುರ ವಿಮಾನ ನಿಲ್ದಾಣದಲ್ಲಿ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಆತ್ಮೀಯ ಸ್ವಾಗತ ದೊರೆಯಿತು.

ಗ್ರ್ಯಾಂಡ್ ಮುಫ್ತಿ ಕಾಂತಪುರಂ ಭೇಟಿ: ಕೋಯಿಕ್ಕೋಡ್‌ನ ಕಾರಂತೂರಿನಲ್ಲಿರುವ ಮರ್ಕಜ್ ಕ್ಯಾಂಪಸ್‌ಗೆ ತೆರಳಿದ ಅವರು, ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾಗಿ ಶಿಕ್ಷಣ, ಸಾಂಸ್ಕೃತಿಕ ವಿನಿಮಯ ಹಾಗೂ ಮಲೇಷ್ಯಾದಲ್ಲಿರುವ ಭಾರತೀಯ ಸಮುದಾಯದ ಕ್ಷೇಮಾಭಿವೃದ್ಧಿಯ ಬಗ್ಗೆ ಖಾಸಗಿ ಸಮಾಲೋಚನೆ ನಡೆಸಿದರು.

ಪೋಸ್ಟ್

ಗಾಂಧಿ ಕುಟುಂಬದೊಂದಿಗೆ ದೀರ್ಘಕಾಲದ ಬಾಂಧವ್ಯ: ಅನ್ವರ್ ಇಬ್ರಾಹಿಂ ಅವರಿಗೆ ಭಾರತದ ಕಾಂಗ್ರೆಸ್ ನಾಯಕತ್ವ, ವಿಶೇಷವಾಗಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಆಪ್ತ ಸ್ನೇಹವಿತ್ತು. 1990ರ ದಶಕದಲ್ಲಿ ಮಲೇಷ್ಯಾದಲ್ಲಿ ರಾಜಕೀಯ ಏರಿಳಿತಗಳ ನಡುವೆಯೂ ಅವರು ಭಾರತೀಯ ನಾಯಕರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದರು.

ಮಲೇಷ್ಯಾ 2027 ಚುನಾವಣೆ ಸಿದ್ಧತೆ: 2027 ರಲ್ಲಿ ಮಲೇಷ್ಯಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಪ್ರಮುಖ ಇಸ್ಲಾಮಿಕ್ ವಿದ್ವಾಂಸರಾದ ಕಾಂತಪುರಂ ಅವರೊಂದಿಗಿನ ಭೇಟಿಯು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವ ಪಡೆದುಕೊಂಡಿದೆ. ಈ ಹಿಂದೆ 2023 ರಲ್ಲಿ ಮಲೇಷ್ಯಾ ಸರ್ಕಾರವು ಕಾಂತಪುರಂ ಅವರಿಗೆ ತನ್ನ ಅತ್ಯುನ್ನತ ‘ಹಿಜ್ರಾ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಬಾಲಿವುಡ್ ಹಾಡಿನ ವೈರಲ್ ಕ್ರೇಜ್: ಬ್ರಿಕ್ಸ್ ಭೇಟಿಯ ವೇಳೆ ದೆಹಲಿಯ ಹೋಟೆಲ್‌ನಲ್ಲಿ ಕಿಶೋರ್ ಕುಮಾರ್ ಅವರ ಹಳೆಯ ಸೂಪರ್‌ಹಿಟ್ ಹಾಡು “ಖ್ವಾಬ್ ಹೋ ತುಮ್…” ಹಾಡಿ ಸಂಗೀತ ಪ್ರಿಯರ ಮನಗೆದ್ದಿದ್ದ ಮಲೇಷ್ಯಾ ಪ್ರಧಾನಿ, ಭಾರತದೊಂದಿಗಿನ ಸಾಂಸ್ಕೃತಿಕ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:19 am, Mon, 14 September 26

Loading...
Unable to load recommendations.
Follow Us