PM Narendra Modi: 100ನೇ ವರ್ಷಕ್ಕೆ ಕಾಲಿಟ್ಟ ತಾಯಿಗೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ; ಹೀರಾಬೆನ್ ಮೋದಿ ಆರೋಗ್ಯದ ರಹಸ್ಯ ಇಲ್ಲಿದೆ

Hiraben Modi Birthday: 1923ರ ಜೂನ್ 18ರಂದು ಜನಿಸಿದ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

PM Narendra Modi: 100ನೇ ವರ್ಷಕ್ಕೆ ಕಾಲಿಟ್ಟ ತಾಯಿಗೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ; ಹೀರಾಬೆನ್ ಮೋದಿ ಆರೋಗ್ಯದ ರಹಸ್ಯ ಇಲ್ಲಿದೆ
ತಾಯಿ ಹೀರಾಬೆನ್ ಜೊತೆ ನರೇಂದ್ರ ಮೋದಿ
Follow us
| Updated By: ಸುಷ್ಮಾ ಚಕ್ರೆ

Updated on:Jun 18, 2022 | 8:20 AM

Modi in Gujarat: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಬೆಳಿಗ್ಗೆ ಗುಜರಾತ್​​ನ ಗಾಂಧಿನಗರಕ್ಕೆ ಭೇಟಿ ನೀಡಿದ್ದು, 100ನೇ ವರ್ಷಕ್ಕೆ ಕಾಲಿಟ್ಟಿರುವ ತಮ್ಮ ತಾಯಿ ಹೀರಾಬೆನ್ ಮೋದಿ (Hiraben Modi) ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ತಾಯಿಯ ಜೊತೆಯಲ್ಲೇ ಕೆಲಕಾಲ ಕಳೆದ ನರೇಂದ್ರ ಮೋದಿ ಅದಾದ ಬಳಿಕ ಪಾವಗಢದ ದೇವಾಲಯಕ್ಕೆ ಭೇಟಿ ನೀಡಿ, ನಂತರ ವಡೋದರಾದಲ್ಲಿ (Vadodara) ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಿನ್ನೆಯಿಂದ 2 ದಿನಗಳ ಗುಜರಾತ್ ಪ್ರವಾಸದಲ್ಲಿರುವ ನರೇಂದ್ರ ಮೋದಿ ಇಂದು ಸಂಜೆ ದೆಹಲಿಗೆ ವಾಪಾಸಾಗಲಿದ್ದಾರೆ.

1923ರ ಜೂನ್ 18ರಂದು ಜನಿಸಿದ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿಯ ಜನ್ಮದಿನದ ಹಿನ್ನೆಲೆಯಲ್ಲಿ ಮೋದಿ ಅವರ ತವರು ವಡ್ನಗರದಲ್ಲಿ ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ. ಇದಲ್ಲದೆ, ರೈಸನ್ ಪ್ರದೇಶದಲ್ಲಿ 80 ಮೀಟರ್ ರಸ್ತೆಗೆ ಪೂಜ್ಯ ಹಿರಾಬಾ ಮಾರ್ಗ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ
Image
ಮೋದಿಯವರ ಅಮ್ಮ ಹೀರಾಬೆನ್ ಹುಟ್ಟುಹಬ್ಬ: ಅಮ್ಮ ಮಗನ ಬಾಂಧವ್ಯದ ಫೋಟೊ
Image
Agnipath Scheme: ಅಗ್ನಿಪಥ್ ಯೋಜನೆಯ ಅಗ್ನಿವೀರರ ಗರಿಷ್ಠ ವಯೋಮಿತಿ 23 ವರ್ಷಕ್ಕೆ ಏರಿಕೆ; ಶೀಘ್ರದಲ್ಲೇ ನೇಮಕಾತಿ ಶುರು
Image
ಧರ್ಮಶಾಲಾ ಭೇಟಿಯೊಂದಿಗೆ ಪ್ರಧಾನಿ ಮೋದಿಯವರ ಎರಡು ದಿನಗಳ ಹಿಮಾಚಲ ಪ್ರದೇಶ ಪ್ರವಾಸ ಇಂದು ಆರಂಭ
Image
ಕೇಂದ್ರ ಸಚಿವಾಲಯ,ಇಲಾಖೆಗಳಲ್ಲಿ 10 ಲಕ್ಷ ಜನರ ನೇಮಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚನೆ

ಶತಾಯುಷಿಯಾಗಿರುವ ಹೀರಾಬೆನ್ ಈ ವಯಸ್ಸಿನಲ್ಲೂ ಫಿಟ್ ಮತ್ತು ಆರೋಗ್ಯವಾಗಿದ್ದಾರೆ. ಅವರು ತಮ್ಮ ಕಿರಿಯ ಮಗ ಪಂಕಜ್ ಮೋದಿ (ಪಿಎಂ ನರೇಂದ್ರ ಮೋದಿ ಅವರ ಸಹೋದರ) ಜೊತೆಗೆ ಗಾಂಧಿನಗರದಲ್ಲಿ ವಾಸಿಸುತ್ತಿದ್ದಾರೆ. 100ರ ಹರೆಯದಲ್ಲೂ ಹೀರಾಬೆನ್ ಕಾಯಿಲೆಯಿಂದ ಆಸ್ಪತ್ರೆಗೆ ಅಲೆದಾಡಿದ್ದು ಕಡಿಮೆಯೇ. ಅವರ ಆರೋಗ್ಯ ಸಾಮಾನ್ಯ ಜನರ ಆರೋಗ್ಯಕ್ಕಿಂತ ಉತ್ತಮವಾಗಿದೆ. ಅವರು ಸರಳವಾದ ಆಹಾರವನ್ನು ಇಷ್ಟಪಡುತ್ತಾರೆ. ಅದೇ ಅವರ ಆರೋಗ್ಯದ ರಹಸ್ಯವಾಗಿರಬಹುದು ಎಂದು ಮೋದಿಯವರ ಆಪ್ತರು ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರ ತಾಯಿ ಯಾವುದೇ ವಿಶೇಷ ಆಹಾರವನ್ನು ತಿನ್ನಲು ಬಯಸುವುದಿಲ್ಲ. ಅವರು ತಮ್ಮ ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸುತ್ತಾರೆ. ಹೆಚ್ಚು ಎಣ್ಣೆ ಮತ್ತು ಸಾಂಬಾರ ಪದಾರ್ಥಗಳನ್ನು ಹೊಂದಿರುವ ಆಹಾರವನ್ನು ಅವರು ಇಷ್ಟಪಡುವುದಿಲ್ಲ. ಅವರು ತನ್ನ ದೈನಂದಿನ ಆಹಾರದಲ್ಲಿ ಬೇಳೆ, ಅನ್ನ, ಖಿಚಡಿ ಮತ್ತು ಚಪಾತಿ ತಿನ್ನಲು ಇಷ್ಟಪಡುತ್ತಾರೆ.

ಇದನ್ನೂ ಓದಿ: PM Narendra Modi: ಗುಜರಾತ್​​ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ; 21,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

ಇಂದು ಜಗನ್ನಾಥ ದೇವಸ್ಥಾನದಲ್ಲಿ ಮೋದಿ ಅವರ ಕುಟುಂಬವು ಸಾಮೂಹಿಕ ಭೋಜನವನ್ನು ಕೂಡ ಆಯೋಜಿಸಿದೆ. ಮುಂಜಾನೆಯೇ ತಮ್ಮ ತಾಯಿಯನ್ನು ಭೇಟಿಯಾಗಿ, ಹುಟ್ಟುಹಬ್ಬಕ್ಕೆ ಶುಭ ಹಾರೈಸಿ, ಆಶೀರ್ವಾದ ಪಡೆದಿರುವ ನರೇಂದ್ರ ಮೋದಿ ಅವರು ನಂತರ ಪಂಚಮಹಲ್ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಪಾವಗಡಕ್ಕೆ ಭೇಟಿ ನೀಡಲಿದ್ದಾರೆ.

ಗುಜರಾತ್ ಗೌರವ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಮತ್ತು 16,369 ಕೋಟಿ ರೂ. ಮೌಲ್ಯದ ಭಾರತೀಯ ರೈಲ್ವೆಯ 18 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಮೋದಿ ವಡೋದರಾಗೆ ಭೇಟಿ ನೀಡಲಿದ್ದಾರೆ. 10,749 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಐದು ರೈಲ್ವೆ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. 5,620 ಕೋಟಿ ರೂ. ಮೌಲ್ಯದ ಇತರ 13 ಯೋಜನೆಗಳಿಗೆ ಮತ್ತು ಭಾರತೀಯ ಗತಿ ಶಕ್ತಿ ವಿಶ್ವವಿದ್ಯಾಲಯದ (ರಾಷ್ಟ್ರೀಯ ರೈಲು ಸಾರಿಗೆ ಸಂಸ್ಥೆ) ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪಂಚಮಹಲ್‌ಗಳ ಜಿಲ್ಲೆಯ ಪಾವಗಡದಲ್ಲಿರುವ ಮಹಾಕಾಳಿ ದೇವಸ್ಥಾನವನ್ನು ನವೀಕರಿಸಿದ ನಂತರ ಪ್ರಧಾನಿ ಮೋದಿ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ, ದಶಕಗಳ ನಂತರ ದೇಗುಲದ ಮೇಲೆ ಪೂರ್ಣ ಪ್ರಮಾಣದಲ್ಲಿ ಧ್ವಜವನ್ನು ಹಾರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಲಿದ್ದಾರೆ. ಪಾವಗಡ ಗುಜರಾತ್‌ನ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಪಾವಗಡ ಪರ್ವತದ ಮೇಲಿರುವ ಶಕ್ತಿಪೀಠವು 52 ಶಕ್ತಿಪೀಠಗಳಲ್ಲಿ ಒಂದಾಗಿದೆ. ಮಾತಾ ಕಾಳಿಯ ಪುರಾತನ ದೇವಾಲಯವು ಪಾವಗಡದ ಬೆಟ್ಟದ ಮೇಲೆ ನೆಲೆಗೊಂಡಿದೆ. ಇಲ್ಲಿ ವಿಶ್ವಾಮಿತ್ರ ಋಷಿ ತಾಯಿ ಕಾಳಿಗಾಗಿ ತೀವ್ರ ತಪಸ್ಸು ಮಾಡಿದ್ದರು. ಈ ಶಕ್ತಿಪೀಠವನ್ನು ತಲುಪಲು ರೋಪ್‌ವೇ ಮತ್ತು ಏಣಿಗಳೆರಡರ ಸೌಲಭ್ಯವೂ ಲಭ್ಯವಿದೆ. ಪಾವಗಡವು ಜೈನ ಪಂಥಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ತಾಣವನ್ನು 2004ರಲ್ಲಿ ವಿಶ್ವ ಸಂಸ್ಥೆ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ. ದೇವಾಲಯದ ನವೀಕರಣವು ಪಾವಗಡವನ್ನು ತೀರ್ಥಯಾತ್ರೆ ಮತ್ತು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಒಂದು ದೊಡ್ಡ ಯೋಜನೆಯ ಭಾಗವಾಗಿದೆ.

ಇದನ್ನೂ ಓದಿ: ಗುಜರಾತ್​​ನಲ್ಲಿ ತಾಯಿ ಹೀರಾಬೆನ್​​ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ; ಒಟ್ಟಿಗೇ ಊಟ ಮಾಡಿದ ಅಮ್ಮ-ಮಗ

ಪ್ರಧಾನಮಂತ್ರಿಯವರ ಭೇಟಿ ಮತ್ತು ಭದ್ರತಾ ಕಾರಣಗಳಿಗಾಗಿ ಗುರುವಾರ ಮಧ್ಯಾಹ್ನದಿಂದ ಎರಡು ದಿನಗಳ ಕಾಲ ದೇವಾಲಯವನ್ನು ಸಾರ್ವಜನಿಕರಿಗೆ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲದ ಶಿಖರ ಒಡೆದು ವರ್ಷಗಳೇ ಕಳೆದರೂ ‘ಧ್ವಜ’ ಹಾರಿಸಲಾಗಿಲ್ಲ. ಈಗ ಅದನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಈ ಭವ್ಯವಾದ ಮಹಾಕಾಳಿ ದೇವಾಲಯದ ಗರ್ಭಗುಡಿಯು ಚಿನ್ನದಿಂದ ಮಾಡಲ್ಪಟ್ಟಿದೆ. ದೇವಾಲಯದ ಗರ್ಭಗುಡಿಯ ಸ್ವಲ್ಪ ಮೇಲ್ಭಾಗದಲ್ಲಿ ದರ್ಗಾವನ್ನು ನಿರ್ಮಿಸಲಾಯಿತು ಮತ್ತು ಅದರ ಬಗ್ಗೆ ಹಲವು ವರ್ಷಗಳಿಂದ ವಿವಾದವಿತ್ತು. ಈ ವಿಷಯ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರೂ ಪ್ರಯೋಜನವಾಗಿರಲಿಲ್ಲ.

ಸುದೀರ್ಘ ಮಾತುಕತೆಯ ನಂತರ ಸುಮಾರು 4 ವರ್ಷಗಳ ಹಿಂದೆ ಒಪ್ಪಂದದ ಮೇರೆಗೆ ಇಲ್ಲಿನ ಗರ್ಭಗುಡಿಯಿಂದ ದರ್ಗಾವನ್ನು ತೆಗೆದುಹಾಕಲಾಯಿತು. ದೇವಾಲಯದ ಪ್ರಾಂಗಣದಲ್ಲಿ ಒಂದು ಮೂಲೆಯಲ್ಲಿ ದೇವಾಲಯದ ಪುನರ್ನಿರ್ಮಾಣವನ್ನು ಪ್ರಾರಂಭಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 am, Sat, 18 June 22