AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ಕೃತ್ಯ ನಡೆದರೂ ಅದರ ಮೂಲ ಪಾಕಿಸ್ತಾನದಲ್ಲೇ ಇರುತ್ತೆ: ಲೆಕ್ಸ್ ಫ್ರೀಡ್​ಮ್ಯಾನ್ ಸಂದರ್ಶನದಲ್ಲಿ ನರೇಂದ್ರ ಮೋದಿ ಕಿಡಿ

Lex Fridman's podcast with Narendra Modi: ಪಾಕಿಸ್ತಾನದೊಂದಿಗೆ ಶಾಂತಿ ಬಯಸಿ ಹೋದಾಗೆಲ್ಲಾ ಅದು ವಿಶ್ವಾಸದ್ರೋಹ ಎಸಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ಕೃತ್ಯ ನಡೆದರೂ ಪಾಕಿಸ್ತಾನವೇ ಮೂಲವಾಗಿರುತ್ತದೆ ಎಂದು ಪ್ರಧಾನಿಗಳು ಕಿಡಿಕಾರಿದ್ದಾರೆ. ಅಮೆರಿಕನ್ ಪೋಡ್​​ಕ್ಯಾಸ್ಟರ್ ಹಾಗೂ ಸಂಶೋಧಕ ವಿಜ್ಞಾನಿ ಲೆಕ್ಸ್ ಫ್ರೀಡ್​​ಮ್ಯಾನ್ ಅವರಿಗೆ ನೀಡಿದ ಸುದೀರ್ಘ ಸಂದರ್ಶನದಲ್ಲಿ ಮೋದಿ ಮಾತನಾಡಿದ್ದಾರೆ.

ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ಕೃತ್ಯ ನಡೆದರೂ ಅದರ ಮೂಲ ಪಾಕಿಸ್ತಾನದಲ್ಲೇ ಇರುತ್ತೆ: ಲೆಕ್ಸ್ ಫ್ರೀಡ್​ಮ್ಯಾನ್ ಸಂದರ್ಶನದಲ್ಲಿ ನರೇಂದ್ರ ಮೋದಿ ಕಿಡಿ
ನರೇಂದ್​ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 16, 2025 | 7:25 PM

ನವದೆಹಲಿ, ಮಾರ್ಚ್ 16: ಪಾಕಿಸ್ತಾನವನ್ನು ವಿಶ್ವದ ಭಯೋತ್ಪಾದನಾ ಕೇಂದ್ರ ಬಿಂದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಅಮೆರಿಕನ್ ಪೋಡ್​ಕ್ಯಾಸ್ಟರ್ ಹಾಗೂ ಸಂಶೋಧಕ ವಿಜ್ಞಾನಿ ಲೆಕ್ಸ್ ಫ್ರೀಡ್​​ಮ್ಯಾನ್ ಜೊತೆಗಿನ ಪೋಡ್​ಕ್ಯಾಸ್ಟ್​​ನಲ್ಲಿ ನರೇಂದ್ರ ಮೋದಿ ಅವರು (Narendra Modi in Lex Fridman’s podcast) ಪಾಕಿಸ್ತಾನ ಹೇಗೆ ಬಾರಿ ಬಾರಿ ವಿಶ್ವಾಸ ದ್ರೋಹ ಎಸಗುತ್ತಾ ಬಂದಿದೆ, ಭಯೋತ್ಪಾದನೆಗೆ ಹೇಗೆ ಕುಮ್ಮಕ್ಕು ನೀಡುತ್ತಾ ಬಂದಿದೆ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕಠಿಣವಾದ ಐತಿಹಾಸಿಕ ಸಂಬಂಧ ಇದ್ದು, ವಿಶ್ವದ ತೀವ್ರ ಬಿಕ್ಕಟ್ಟುಗಳಲ್ಲಿ ಒಂದೆನಿಸಿದೆ. ಬಲವಾದ ತಾತ್ವಿಕ ಭಿನ್ನತೆಗಳಿರುವ ಎರಡು ಪರಮಾಣು ಶಕ್ತಿಗಳು ನಡುವಿನ ಸಂಘರ್ಷ ಇದಾಗಿದೆ. ಶಾಂತಿಗೆ ಒತ್ತು ಕೊಡುವ ತಾವು ಈ ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ಮೂಡಿಸಲು ಹೇಗೆ ಯೋಜಿಸುತ್ತೀರಿ ಎಂದು ಲೆಕ್ಸ್ ಫ್ರೀಡ್​​ಮ್ಯಾನ್ ತಮ್ಮ ಪೋಡ್​ ಕ್ಯಾಸ್ಟ್​​ನಲ್ಲಿ ನರೇಂದ್ರ ಮೋದಿ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನರೇಂದ್ರ ಮೋದಿ, ಪಾಕಿಸ್ತಾನ ಹೇಗೆ ವಿಶ್ವಾಸ ದ್ರೋಹ ಎಸಗುತ್ತದೆ, ಹೇಗೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತದೆ ಎಂಬುದನ್ನು ವಿವರಿಸಿದ್ದಾರೆ.

ವಿಶ್ವದಲ್ಲಿ ಎಲ್ಲೇ ಉಗ್ರ ದಾಳಿ ನಡೆದರೂ ಅದರ ಮೂಲ ಪಾಕಿಸ್ತಾನದ್ದೇ…

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯ ಇದೆ ಎಂದು ಲೆಕ್ಸ್ ಫ್ರೀಡ್​​ಮ್ಯಾನ್ ಅನಿಸಿಕೆಯನ್ನು ಮೋದಿ ತಳ್ಳಿಹಾಕಿದ್ದಾರೆ. ‘ಇದನ್ನು ವಿಚಾರಧಾರೆಗೆ ಹೋಲಿಸಬೇಡಿ. ರಕ್ತಪಾತದ ಮೇಲೆ ನಿಂತಿರುವ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವುದು ಯಾವ ವಿಚಾರಧಾರೆ ಹೇಳಿ. ಈ ಕುಕೃತ್ಯಗಳಿಗೆ ನಾವು ಮಾತ್ರವೇ ಬಲಿಪಶುವಾಗಿಲ್ಲ. ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ದಾಳಿ ನಡೆದಿರಲಿ, ಅದರ ಜಾಡು ಹಿಡಿದು ಹೊರಟರೆ ಪಾಕಿಸ್ತಾನದ ಪಾತ್ರ ಕಾಣುತ್ತದೆ. ಉದಾಹರಣೆಗೆ, ಸೆಪ್ಟೆಂಬರ್ 11ರ ದಾಳಿ ನೆನಪಿಸಿಕೊಳ್ಳಿ. ಅದರ ಮಾಸ್ಟರ್ ಮೈಂಡ್ ಆಗಿದ್ದುದು ಒಸಾಮ ಬಿನ್ ಲಾಡನ್. ಈತ ಎಲ್ಲಿಂದ ಬಂದಿದ್ದು? ಆತ ಪಾಕಿಸ್ತಾನದಲ್ಲಿ ಆಶ್ರಯ ಪಡೆದಂಥವ. ಭಯೋತ್ಪಾದನೆ ಮತ್ತು ಭಯೋತ್ಪಾದಕ ಮನೋಭಾವವು ಪಾಕಿಸ್ತಾನದಲ್ಲಿ ಆಳವಾಗಿ ಬೇರೂರಿಬಿಟ್ಟಿರುವುದನ್ನು ಇಡೀ ಜಗತ್ತು ಒಪ್ಪಿಕೊಳ್ಳುತ್ತದೆ’ ಎಂದು ನರೇಂದ್ರ ಮೋದಿ ಈ ಸಂದರ್ಶನದಲ್ಲಿ ತಮ್ಮ ನೆರೆಯ ದೇಶವನ್ನು ಕುಟುಕಿದ್ದಾರೆ.

ಇದನ್ನೂ ಓದಿ: ಅಮೆರಿಕನ್ ಪೋಡ್​​ಕ್ಯಾಸ್ಟರ್ ಲೆಕ್ಸ್ ಫ್ರೀಡ್​​ಮ್ಯಾನ್​​ಗೆ ಮೂರು ಗಂಟೆ ಹದಿನೇಳು ನಿಮಿಷ ನರೇಂದ್ರ ಮೋದಿ ಸುದೀರ್ಘ ಸಂದರ್ಶನ

‘ಇವತ್ತು ಪಾಕಿಸ್ತಾನ ಭಾರತಕ್ಕೆ ಮಾತ್ರವಲ್ಲ, ವಿಶ್ವದ ತಲೆನೋವಿನ ಮೂಲವೂ ಆಗಿ ನಿಂತಿದೆ. ಈ ಹಾದಿಯಲ್ಲಿ ಯಾವ ಒಳಿತನ್ನು ಸಾಧಿಸಿದಂತಾಗುತ್ತದೆ ಎಂದು ನಾವು ಪದೇ ಪದೇ ಕೇಳುತ್ತಿದ್ದೇವೆ. ಪ್ರಾಯೋಜಿತ ಭಯೋತ್ಪಾದನೆಯ ಹಾದಿಯನ್ನು ತೊರೆಯುವಂತೆ ಒತ್ತಾಯಿಸುತ್ತಿದ್ದೇವೆ. ಕಾನೂನಿನ ಅಂಕೆಯೇ ಇಲ್ಲ ಶಕ್ತಿಗಳಿಗೆ ನಿಮ್ಮ ದೇಶವನ್ನು ಒಪ್ಪಿಸುವುದರಿಂದ ಏನು ಸಿಗುತ್ತದೆ? ಶಾಂತಿ ಬಯಸಿ ನಾನು ವೈಯಕ್ತಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದೆ…

‘ಶಾಂತಿ ಮೂಡಿಸಲು ಮಾಡುವ ಪ್ರತಿಯೊಂದು ಒಳ್ಳೆಯ ಪ್ರಯತ್ನಕ್ಕೂ ಪಾಕಿಸ್ತಾನದಿಂದ ವಿಶ್ವಾಸದ್ರೋಹದ ಸ್ಪಂದನೆ ಸಿಗುತ್ತದೆ. ಆ ದೇಶದ ನಾಯಕರಿಗೆ ಸದ್ಬುದ್ಧಿ ಸಿಕ್ಕು ಶಾಂತಿಯ ಹಾದಿಯನ್ನು ಅವರು ತುಳಿಯುವಂತಾಗಲಿ ಎಂದು ಬಯಸುತ್ತೇನೆ. ಪಾಕಿಸ್ತಾನದ ಜನರಿಗೆ ಈ ಪ್ರಕ್ಷುಬ್ದ ವಾತಾವರಣ ರೋಸಿ ಹೋಗುವಂತೆ ಮಾಡಿದೆ. ಅವರೂ ಕೂಡ ಶಾಂತಿ ಬಯಸುತ್ತಿದ್ದಾರೆ’ ಎಂದು ನರೇಂದ್ರ ಮೋದಿ ವಿವರಿಸಿದ್ದಾರೆ.

ಭಾರತದ ಪ್ರಧಾನಿಗಳು ಈ ಇಂಟರ್​​ವ್ಯೂನಲ್ಲಿ ಭಾರತದ ವಿಭಜನೆಯ ಕರಾಳ ಇತಿಹಾಸವನ್ನು ಪ್ರಸ್ತಾಪಿಸಿ, ಅದು ಹೇಗೆ ಎರಡು ದಾಯಾದಿಗಳನ್ನು ಹುಟ್ಟುಹಾಕಿತು ಎಂಬುದನ್ನು ತಿಳಿಸಿದ್ದಾರೆ. ವಿಭಜನೆಗೆ ಒಪ್ಪಿದ್ದು, ವಿಭಜನೆ ಬಳಿಕ ಹಿಂಸಾಕೃತ್ಯಗಳು ಸಂಭವಿಸಿದ್ದು ಇವೆಲ್ಲದರ ಬಗ್ಗೆ ಮೋದಿ ವಿಷಾದಿಸಿದ್ದಾರೆ. ‘ವಿಭಜನೆಯ ಕಹಿ ಸತ್ಯವನ್ನು ಭಾರತೀಯರು ಬಹಳ ನೋವಿನಿಂದಲೇ ಸ್ವೀಕರಿಸಿದರು. ಆದರೆ, ನಂತರ ನಡೆದದ್ದು ಹೃದಯವಿದ್ರಾವಕವೆನಿಸುವ ರಕ್ತಪಾತ. ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಟ್ರಯನುಗಳಲ್ಲಿ ರಕ್ತಸಿಕ್ತ ಜನರು ಮತ್ತು ಶವಗಳು ತುಂಬಿರುತ್ತಿದ್ದವು.

ಇದನ್ನೂ ಓದಿ: ಮೋದಿಯಂಥ ನಾಯಕರು ವಾಷಿಂಗ್ಟನ್​ನಲ್ಲಿ ಟೆಂಟ್‌, ರಸ್ತೆಗುಂಡಿಗಳನ್ನು ನೋಡುವುದು ನನಗಿಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್

‘ವಿಭಜನೆಯೇನೋ ಆಯಿತು. ಅದಾದ ಬಳಿಕ ಅವರು ತಮ್ಮ ಪಾಡಿಗೆ ತಾವು ಇರಬಹುದು ಎಂದು ಎಣಿಸಿದ್ದೆವು. ಆದರೆ, ಅವರಿಗೆ ಅದು ಬೇಕಾಗಿರಲಿಲ್ಲ. ಪದೇ ಪದೇ ಭಾರತದ ಜೊತೆ ತಗಾದೆ ತೆಗೆಯಲು ಯತ್ನಿಸುತ್ತಲೇ ಇದ್ದಾರೆ. ನಮ್ಮ ವಿರುದ್ಧ ಅವರು ಪ್ರಾಕ್ಸಿ ವಾರ್ ನಡೆಸುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನು ಕುಟುಕಿದ್ದಾರೆ.

ಸಂದರ್ಶನದ ಪೂರ್ಣ ವಿಡಿಯೋ ಇಲ್ಲಿದೆ…

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ