Navjot Singh Sidhu: ಪಟಿಯಾಲಾ ಜೈಲಿನಲ್ಲಿ ಗುಮಾಸ್ತನ ಕೆಲಸ ಮಾಡ್ತಿದ್ದಾರೆ ನವಜೋತ್ ಸಿಂಗ್ ಸಿಧು; ಸಂಬಳವೆಷ್ಟು ಗೊತ್ತಾ?

TV9 Digital Desk

| Edited By: Sushma Chakre

Updated on:May 26, 2022 | 4:34 PM

ರಸ್ತೆ ಅಪಘಾತ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರಿಗೆ ಪಟಿಯಾಲ ಜೈಲಿನಲ್ಲಿ ಗುಮಾಸ್ತನ ಕೆಲಸ ನೀಡಲಾಗಿದೆ. ಅವರಿಗೆ ದಿನಕ್ಕೆ ಎಷ್ಟು ಸಂಬಳ ಕೊಡುತ್ತಾರೆ? ತಿನ್ನಲು ಏನೇನು ಆಹಾರ ಕೊಡುತ್ತಾರೆ ಗೊತ್ತಾ?

Navjot Singh Sidhu: ಪಟಿಯಾಲಾ ಜೈಲಿನಲ್ಲಿ ಗುಮಾಸ್ತನ ಕೆಲಸ ಮಾಡ್ತಿದ್ದಾರೆ ನವಜೋತ್ ಸಿಂಗ್ ಸಿಧು; ಸಂಬಳವೆಷ್ಟು ಗೊತ್ತಾ?
ನವಜೋತ್ ಸಿಂಗ್ ಸಿಧು
Image Credit source: Hindustan Times

ಪಟಿಯಾಲಾ: ಜೈಲು ಶಿಕ್ಷೆಗೆ ಒಳಗಾಗಿರುವ ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಜೈಲಿನಲ್ಲಿ ‘ಮುನ್ಷಿ (ಗುಮಾಸ್ತ)’ ಆಗಿ ಕೆಲಸ ಮಾಡಲಿದ್ದಾರೆ. ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ (Patiala Jail) ಕ್ಲೆರಿಕಲ್ ಕೆಲಸಕ್ಕಾಗಿ ಸಹಾಯಕರಾಗಿ ಕೆಲಸ ಮಾಡಲು ನಿಯೋಜಿಸಲಾಗಿದೆ. ಮಂಗಳವಾರದಿಂದ ಸಿಧು ಜೈಲಿನಲ್ಲಿ ಸಹಾಯಕನಾಗಿ ಕೆಲಸ ಆರಂಭಿಸಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಎರಡು ಪಾಳಿಯಲ್ಲಿ ತಮ್ಮ ಕೆಲಸವನ್ನು ಮುಂದುವರೆಸಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಕೆಲಸದ ಪಾಳಿಗಳ ನಡುವೆ ಸಿಧುಗೆ 3 ಗಂಟೆಗಳ ವಿರಾಮ ಸಿಗಲಿದೆ.

ಪಟಿಯಾಲಾ ಜೈಲಿನ ನಿಯಮಗಳ ಪ್ರಕಾರ, ನವಜೋತ್ ಸಿಂಗ್ ಸಿಧುಗೆ ಮೊದಲ 3 ತಿಂಗಳು ವೇತನವಿಲ್ಲದೆ ತರಬೇತಿ ನೀಡಲಾಗುತ್ತದೆ. ನಂತರ ಕೌಶಲ್ಯರಹಿತ, ಅರೆ ಕೌಶಲ್ಯ ಅಥವಾ ನುರಿತ ಖೈದಿ ಎಂದು ವರ್ಗೀಕರಿಸಲಾಗುತ್ತದೆ. ಇವರಿಗೆ ದಿನಕ್ಕೆ 40 ರೂ, 50 ರೂ. ಹಾಗೂ ನುರಿತ ಕೆಲಸಗಾರರಿಗೆ 60 ರೂ. ನೀಡಲಾಗುತ್ತದೆ. ಕೆಲಸಕ್ಕೆ ಸೇರಿದ ಆರಂಭದಲ್ಲಿ ನವಜೋತ್ ಸಿಂಗ್ ಸಿಧು 3 ತಿಂಗಳ ತರಬೇತಿ ಮುಗಿದ ನಂತರ ದಿನಕ್ಕೆ 40 ರೂ. ಗಳಿಸುತ್ತಾರೆ ಎಂದು ವರದಿಯಾಗಿದೆ. ಅವರ ಸಂಪಾದನೆಯನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಸೋಮವಾರ ವೈದ್ಯಕೀಯ ಸಮಿತಿಯಿಂದ ಪರೀಕ್ಷಿಸಿದ ನಂತರ ಆರೋಗ್ಯ ಸ್ಥಿತಿಯ ಕಾರಣದಿಂದ ನವಜೋತ್ ಸಿಂಗ್ ಸಿಧುಗೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Navjot Singh Sidhu ರಸ್ತೆ ಜಗಳ ಪ್ರಕರಣ: ಪಟಿಯಾಲ ನ್ಯಾಯಾಲಯಕ್ಕೆ ಶರಣಾದ ನವಜೋತ್ ಸಿಂಗ್ ಸಿಧು

ಇದನ್ನೂ ಓದಿ

ವೈದ್ಯಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿ ಜೈಲಿನಲ್ಲಿ ನೀಡುವ ಸಾಮಾನ್ಯ ಆಹಾರದ ಬದಲಿಗೆ ವಿಶೇಷ ಆಹಾರವನ್ನು ನೀಡುವಂತೆ ಸಿಧು ಈ ಹಿಂದೆ ಮನವಿ ಮಾಡಿದ್ದರು. ಅವರ ಕೋರಿಕೆಯ ಮೇರೆಗೆ ನವಜೋತ್ ಸಿಂಗ್ ಸಿಧು ಅವರನ್ನು ಭಾರೀ ಭದ್ರತೆಯಲ್ಲಿ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನವಜೋತ್ ಸಿಂಗ್ ಸಿಧು ಅವರಿಗೆ ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಅವರ ವಕೀಲ ಎಚ್‌ಪಿಎಸ್ ವರ್ಮಾ ತಿಳಿಸಿದ್ದಾರೆ.

ಸಿಧು ಅವರ ವಿಶೇಷ ಆಹಾರದ ಪ್ರಕಾರ, ಅವರಿಗೆ ಮುಂಜಾನೆ ಒಂದು ಕಪ್ ರೋಸ್ಮರಿ ಚಹಾ ಅಥವಾ ಒಂದು ಲೋಟ ತೆಂಗಿನ ನೀರು, ಒಂದು ಕಪ್ ಲ್ಯಾಕ್ಟೋಸ್ ಮುಕ್ತ ಹಾಲು, ಒಂದು ಚಮಚ ಅಗಸೆ / ಸೂರ್ಯಕಾಂತಿ / ಕಲ್ಲಂಗಡಿ / ಚಿಯಾ ಬೀಜಗಳು, ಐದು-ಆರು ಬಾದಾಮಿ, ಒಂದು ವಾಲ್‌ನಟ್ ನೀಡಲು ಸೂಚಿಸಲಾಗಿದೆ.

ಇದನ್ನೂ ಓದಿ: Navjot Singh Sidhu 1988ರ ರಸ್ತೆ ಜಗಳ ಪ್ರಕರಣ: ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ

ಮಧ್ಯಾಹ್ನದ ಊಟದಲ್ಲಿ ಒಂದು ಲೋಟ ಜ್ಯೂಸ್ (ಬೀಟ್‌ರೂಟ್, ಸೌತೆಕಾಯಿ, ತುಳಸಿ ಎಲೆಗಳು, ಆಮ್ಲಾ, ಕ್ಯಾರೆಟ್ ಇತ್ಯಾದಿ) ಅಥವಾ ಕಲ್ಲಂಗಡಿ, ಕಿವಿ, ಪೇರಲ ಮುಂತಾದ ಯಾವುದೇ ಹಣ್ಣುಗಳು ಅಥವಾ ಮೊಳಕೆಯೊಡೆದ ಕಾಳುಗಳನ್ನು ನೀಡಲು ಸೂಚಿಸಲಾಗಿದೆ. ಇದರ ಜೊತೆಗೆ ಸೌತೆಕಾಯಿ/ ಟೊಮ್ಯಾಟೊ/ ಅರ್ಧ ನಿಂಬೆ/ ಬಟರ್​ ಫ್ರೂಟ್​​ ನೀಡಲು ಸೂಚಿಸಲಾಗಿದೆ. ಜೊತೆಗೆ ಮಧ್ಯಾಹ್ನದ ಊಟಕ್ಕೆ ಒಂದು ಬಟ್ಟಲು ಸೌತೆಕಾಯಿ, ಒಂದು ಚಪಾತಿ, ಸೀಸನಲ್ ಹಸಿರು ತರಕಾರಿಗಳನ್ನು ಸೇವಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಸಂಜೆ, ನವಜೋತ್ ಸಿಂಗ್ ಸಿಧು ಅವರಿಗೆ ಕಡಿಮೆ ಕೊಬ್ಬಿನ ಹಾಲಿನೊಂದಿಗೆ ಒಂದು ಕಪ್ ಚಹಾ ಮತ್ತು 25 ಗ್ರಾಂ ಪನೀರ್ ಸ್ಲೈಸ್ ನೀಡಲು ಶಿಫಾರಸು ಮಾಡಲಾಗಿದೆ. ರಾತ್ರಿಯ ಊಟಕ್ಕೆ ವೈದ್ಯರು ಮಿಶ್ರ ತರಕಾರಿಗಳು, ಕಪ್ಪು ಚನಾ ಸೂಪ್ ಮತ್ತು ಒಂದು ಬೌಲ್ ಹಸಿರು ತರಕಾರಿಗಳನ್ನು ನೀಡಲು ವೈದ್ಯರು ಶಿಫಾರಸು ಮಾಡಿದ್ದಾರೆ.

ಡಿಸೆಂಬರ್ 27, 1988ರಂದು ಸಿಧು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರೊಂದಿಗೆ ಪಾರ್ಕಿಂಗ್ ಸ್ಥಳದ ಬಗ್ಗೆ ಜಗಳವಾಡಿದರು. ಸಿಧು ಮತ್ತು ಅವರ ಸಹವರ್ತಿ ರೂಪಿಂದರ್ ಸಿಂಗ್ ಸಂಧು ಅವರು ಗುರ್ನಾಮ್ ಸಿಂಗ್ ಅವರನ್ನು ಅವರ ಕಾರಿನಿಂದ ಎಳೆದುಕೊಂಡು ಹೊಡೆದಿದ್ದುಗುರ್ನಾಮ್ ಸಾವಿಗೀಡಾಗಿದ್ದರು. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 2006ರಲ್ಲಿ ಸಿಧುವನ್ನು ತಪ್ಪಿತಸ್ಥ ನರಹತ್ಯೆಯ ಅಪರಾಧಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. 2018 ರಲ್ಲಿ ಸಿಧು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು. ಒಂದೇ ಏಟಿಗೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಯಾವುದೇ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹಿರಿಯ ನಾಗರಿಕರಿಗೆ ನೋವುಂಟು ಮಾಡಿದ ಕಾರಣಕ್ಕೆ ಸಿಧುವನ್ನು ತಪ್ಪಿತಸ್ಥ ಎಂದು ಪರಿಗಣಿಸಿತು. ಸಿಧುಗೆ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಲಾಯಿತು. ಈ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಸಿಧು ಜೈಲು ಸೇರಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada