ಮ್ಯಾನ್ಮಾರ್ ಪ್ರಕರಣ; ಅಮೆರಿಕ ಪ್ರಜೆ ಮತ್ತು ಉಕ್ರೇನಿಯನ್ನರ ಮೇಲಿನ ಭಯೋತ್ಪಾದನಾ ಆರೋಪ ಹಿಂಪಡೆದ ಭಾರತ

ಉಕ್ರೇನ್‌ನಂತಹ ಸಂಘರ್ಷ ವಲಯಗಳಲ್ಲಿ ಕಾರ್ಯನಿರ್ವಹಿಸಿದ್ಧ ಅಮೆರಿಕದ ಪ್ರಜೆ ಮ್ಯಾಥ್ಯೂ ವ್ಯಾನ್‌ಡೈಕ್ ಮತ್ತು 6 ಮಂದಿ ಉಕ್ರೇನ್ ಪ್ರಜೆಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್​ಐಎ) ಇಂದು ದೆಹಲಿ ನ್ಯಾಯಾಲಯದಲ್ಲಿ ಚಾರ್ಜ್​ಶೀಟ್ ಸಲ್ಲಿಸಿದೆ. ಅನುಮತಿಯಿಲ್ಲದೆ ಮಿಜೋರಾಂ ರಕ್ಷಿತ ಪ್ರದೇಶವನ್ನು ಪ್ರವೇಶಿಸಿದ ಮತ್ತು ಯುರೋಪ್‌ನಿಂದ ತಂದ ಡ್ರೋನ್‌ಗಳ ಮೂಲಕ ಮ್ಯಾನ್ಮಾರ್‌ನ ಸಶಸ್ತ್ರ ಗುಂಪುಗಳಿಗೆ ತರಬೇತಿ ನೀಡಿದ ಆರೋಪದ ಮೇಲೆ ಮಾರ್ಚ್ 13ರಂದು ಇವರನ್ನು ಬಂಧಿಸಲಾಗಿತ್ತು. ಆದರೆ ಈಗ ಇವರ ವಿರುದ್ಧ ಕಠಿಣ ಯುಎಪಿಎ ಕಾಯ್ದೆಯ ಬದಲಿಗೆ 'ವಲಸೆ ಮತ್ತು ವಿದೇಶಿಯರ ಕಾಯ್ದೆ'ಯ ಅಡಿಯಲ್ಲಿ ಸಾಧಾರಣ ಸ್ವರೂಪದ ದೋಷಾರೋಪಣೆಗಳನ್ನು ಹೊರಿಸಲಾಗಿದೆ.

ಮ್ಯಾನ್ಮಾರ್ ಪ್ರಕರಣ; ಅಮೆರಿಕ ಪ್ರಜೆ ಮತ್ತು ಉಕ್ರೇನಿಯನ್ನರ ಮೇಲಿನ ಭಯೋತ್ಪಾದನಾ ಆರೋಪ ಹಿಂಪಡೆದ ಭಾರತ
Van Dyke
Image Credit source: x

Updated on: Sep 08, 2026 | 9:54 PM

ನವದೆಹಲಿ, ಸೆಪ್ಟೆಂಬರ್ 8: ಭಾರತದ ಗಡಿಭಾಗ ಹಾಗೂ ಮ್ಯಾನ್ಮಾರ್‌ನಲ್ಲಿ ಸಶಸ್ತ್ರ ಗುಂಪುಗಳಿಗೆ ತರಬೇತಿ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಮತ್ತು 6 ಮಂದಿ ಉಕ್ರೇನ್ ಪ್ರಜೆಗಳ ವಿರುದ್ಧ ಹೊರಿಸಲಾಗಿದ್ದ ಭಯೋತ್ಪಾದನಾ ಕಾಯ್ದೆಯ (UAPA) ಗಂಭೀರ ಆರೋಪಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ರದ್ದುಗೊಳಿಸಿದೆ. ಈ ಮೂಲಕ ಈ ಪ್ರಕರಣದ ಚಾರ್ಜ್​ಶೀಟ್​​ನಲ್ಲಿ ಎನ್​ಐಎ ದೊಡ್ಡ ತಿರುವು ನೀಡಿದೆ.

ಮಾರ್ಚ್ ತಿಂಗಳಲ್ಲಿ ಭಾರತೀಯ ಗೂಢಚಾರಿ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಈ 7 ಶಂಕಿತರನ್ನು ಬಂಧಿಸಿದ್ದಾಗ, ಇವರ ವಿರುದ್ಧ UAPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಈಗ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಯುಎಪಿಎ ವಿಭಾಗಗಳನ್ನು ಕೈಬಿಡಲಾಗಿದ್ದು, ಕೇವಲ ‘ವಲಸೆ ಮತ್ತು ವಿದೇಶಿಯರ ಕಾಯ್ದೆ’ಯ ಸೆಕ್ಷನ್ 21 ಮತ್ತು 23ರ ಅಡಿಯಲ್ಲಿ ಅಕ್ರಮ ಪ್ರವೇಶ ಹಾಗೂ ವೀಸಾ ನಿಯಮ ಉಲ್ಲಂಘನೆಯ ಆರೋಪಗಳನ್ನು ಮಾತ್ರ ಹೊರಿಸಲಾಗಿದೆ.

 

ಇದನ್ನೂ ಓದಿ: ಪಹಲ್ಗಾಮ್ ದಾಳಿ ಹಿಂದೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ; ಕೊನೆಗೂ ಎನ್​ಐಎಯಿಂದ ಚಾರ್ಜ್‌ಶೀಟ್ ಸಲ್ಲಿಕೆ

ತಿಹಾರ್ ಜೈಲಿನಲ್ಲಿರುವ ವ್ಯಾನ್‌ಡೈಕ್‌ನ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ನಡುವೆ ಮಾತುಕತೆ ನಡೆದಿತ್ತು. ಇದರ ಬೆನ್ನಲ್ಲೇ ಅಮೆರಿಕದ ರಾಜತಾಂತ್ರಿಕ ಒತ್ತಡದ ವರದಿಗಳು ಹೊರಬಿದ್ದಿವೆ. ಬಂಧಿತ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲೇ ಮುಂದುವರಿದಿದ್ದು, ಈ ಪ್ರಕರಣವು ಭಾರತದ ಗಡಿ ಭದ್ರತೆ ಮತ್ತು ರಾಜತಾಂತ್ರಿಕ ಸಂಕೀರ್ಣತೆಯನ್ನು ಎತ್ತಿಹಿಡಿದಿದೆ.


ಆರೋಪಿಗಳ ಹಿನ್ನೆಲೆ:

ಅಮೆರಿಕದ ‘ಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್’ (SOLI) ಎಂಬ ಖಾಸಗಿ ಭದ್ರತಾ ಸಂಸ್ಥೆಯ ಮುಖ್ಯಸ್ಥನಾಗಿರುವ ವ್ಯಾನ್‌ಡೈಕ್, ಲಿಬಿಯಾ ಮತ್ತು ಸಿರಿಯಾ ದಂಗೆಗಳಲ್ಲಿ ಭಾಗವಹಿಸಿದ್ದ ಅನುಭವ ಹೊಂದಿದ್ದಾರೆ. ಈತ ಮತ್ತು ಆತನ ಉಕ್ರೇನಿಯನ್ ಸಹಚರರು ಭಾರತದ ವೀಸಾ ಪಡೆದು ಮಿಜೋರಾಂ ಮೂಲಕ ಅಕ್ರಮವಾಗಿ ಮ್ಯಾನ್ಮಾರ್ ಪ್ರವೇಶಿಸಿದ್ದರು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಜನಾಂಗೀಯ ಸಶಸ್ತ್ರ ಪಡೆಗಳಿಗೆ ಈ ಗುಂಪು ತರಬೇತಿ ನೀಡುತ್ತಿತ್ತು. ಈ ಪಡೆಗಳು ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಕ್ರಿಯವಾಗಿರುವ ದಂಗೆಕೋರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದವು. ಅಲ್ಲದೆ, ಯುರೋಪ್‌ನಿಂದ ಭಾರತದ ಮೂಲಕ ಮ್ಯಾನ್ಮಾರ್‌ಗೆ ಬೃಹತ್ ಪ್ರಮಾಣದಲ್ಲಿ ಡ್ರೋನ್‌ಗಳನ್ನು ಕಳ್ಳಸಾಗಣೆ ಮಾಡಿದ್ದ ಆರೋಪವೂ ಇವರ ಮೇಲಿದೆ.

ಕೋರ್ಟ್ ವಿಚಾರಣೆ:

ದೆಹಲಿ ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿದೆ. ಭಯೋತ್ಪಾದನಾ ಆರೋಪಗಳನ್ನು ಕೈಬಿಟ್ಟಿದ್ದರ ಕುರಿತು ವಿದೇಶಾಂಗ ಸಚಿವಾಲಯ ಯಾವುದೇ ರಾಜತಾಂತ್ರಿಕ ವಿವರಣೆ ನೀಡಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us