ಭಾರತದ ಯಾವ ಪ್ರಜೆಯನ್ನೂ ಪರಕೀಯ ಎಂದು ಕರೆಯುವಂತಿಲ್ಲ: ಜಗದೀಪ್​ ಧನ್​ಕರ್

ಸರ್ಕಾರಿ ಉದ್ಯೋಗಿಗಳು ಮತ್ತು ಪೊಲೀಸರು ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಅದರ ಹೊರತಾಗಿ ರಾಜಕಾರಣಿಗಳು, ತಮಗೆ ವೈಯಕ್ತಿಕವಾಗಿ ಆಪ್ತರಾದವರು ಹೇಳಿದಂತೆ ವರ್ತಿಸುವುದು ಸರಿಯಲ್ಲ. ನಮ್ಮ ಮುಂದೆ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯಬಾರದು.

ಭಾರತದ ಯಾವ ಪ್ರಜೆಯನ್ನೂ ಪರಕೀಯ ಎಂದು ಕರೆಯುವಂತಿಲ್ಲ: ಜಗದೀಪ್​ ಧನ್​ಕರ್
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನ್​ಕರ್​
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 06, 2021 | 6:08 PM

ಕೋಲ್ಕತ್ತಾ: ಭಾರತದ ಯಾವುದೇ ಪ್ರಜೆಯನ್ನು ಯಾವುದೇ ರಾಜ್ಯದಲ್ಲಿ ‘ಪರಕೀಯ’ ಎಂದು ನೋಡುವುದು ಸಂವಿಧಾನದ ಆಶಯಗಳ ಉಲ್ಲಂಘನೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನ್​ಕರ್​ ಅಭಿಪ್ರಾಯಪಟ್ಟಿದ್ದಾರೆ. ಪೂರ್ವ ಮೇದಿನಿಪುರ ಜಿಲ್ಲೆಯ ಕೋಲಾಘಾಟ್​ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತದ ಯಾವುದೇ ಭಾಗಕ್ಕೆ ಸೇರಿದ ಪ್ರಜೆಯನ್ನು ಪರಕೀಯ ಎಂದು ಪರಿಗಣಿಸುವುದು ಸಂವಿಧಾನಕ್ಕೆ ವಿರುದ್ಧ ಎಂದು ಹೇಳಿದ್ದಾರೆ.

ಟಿಎಂಸಿ ಪಕ್ಷದವರ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಪಶ್ಚಿಮ ಬಂಗಾಳದ ಕೆಲವರು ಹೊರ ರಾಜ್ಯಗಳಿಂದ ಬರುವವರನ್ನು ಪರಕೀಯ ಎಂದು ಕರೆದಿರುವುದು ವಿಷಾದನೀಯ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಅವರು ಈ ದೇಶದವರೇ ಆಗಿರುತ್ತಾರೆಯೇ ವಿನಃ ಹೊರಗಿನವರಾಗುವುದಿಲ್ಲ. ಒಂದುವೇಳೆ ಹಾಗೆ ಕರೆದರೆ ಅದು ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ, ಪ.ಬಂಗಾಳದ ಚುನಾವಣೆ ಕುರಿತು ಮಾತನಾಡಿ ಯಾವುದೇ ಗೊಂದಲಗಳಿಲ್ಲದೇ ಶಾಂತಿಯುತ ಚುನಾವಣೆ ನಡೆಸುವುದು ಸಾಧ್ಯವಿದೆ. ಮುಂಬರುವ ಚುನಾವಣೆಯಲ್ಲಿ ಗಲಾಟೆ, ಘರ್ಷಣೆ, ರಕ್ತಪಾತ ಆಗದಂತೆ ನಿಗಾ ವಹಿಸಬೇಕಿದೆ. ಒಬ್ಬ ರಾಜ್ಯಪಾಲನಾಗಿ ಹೀಗೆ ಕೋರಿಕೊಳ್ಳುವುದು ತಪ್ಪೇ? ಶಾಂತಿಯುತ ಚುನಾವಣೆಗಾಗಿ ಶ್ರಮಿಸುವುದು ನನ್ನ ಮತ್ತು ನಮ್ಮೆಲ್ಲರ ಕರ್ತವ್ಯ ಎಂಬ ಕಾರಣಕ್ಕೆ ಈ ಮನವಿ ಮಾಡುತ್ತಿದ್ದೇನೆ. ಜನರು ಯಾವುದೇ ರಾಜಕೀಯ ದ್ವೇಷಗಳನ್ನಿಟ್ಟುಕೊಳ್ಳದೇ ಸಮಚಿತ್ತರಾಗಿರಬೇಕೆಂದು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಉದ್ಯೋಗಿಗಳು ಮತ್ತು ಪೊಲೀಸರು ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಅದರ ಹೊರತಾಗಿ ರಾಜಕಾರಣಿಗಳು, ತಮಗೆ ವೈಯಕ್ತಿಕವಾಗಿ ಆಪ್ತರಾದವರು ಹೇಳಿದಂತೆ ವರ್ತಿಸುವುದು ಸರಿಯಲ್ಲ. ನಮ್ಮ ಮುಂದೆ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.

ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊವಿಡ್​ಗಾಗಿ ಖರೀದಿಸಿದ ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ಕುರಿತಾಗಿ ಸ್ಪಷ್ಟನೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.

ಜೆ.ಪಿ.ನಡ್ಡಾ ಪ್ರವಾಸದ ವೇಳೆ ಬಿಜೆಪಿ ಮುಖಂಡರ ವಾಹನಗಳ ಮೇಲೆ ಕಲ್ಲು ತೂರಾಟ