
ನವದೆಹಲಿ, ಆಗಸ್ಟ್ 27: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯ ಸಮಯದಲ್ಲಿ ರಷ್ಯಾ ನಿರ್ಮಿತ S-400 ವಾಯು ರಕ್ಷಣಾ ವ್ಯವಸ್ಥೆಯ (Air Defence System) ಬಲದಿಂದಾಗಿ ಪಾಕಿಸ್ತಾನಿ ಯುದ್ಧ ವಿಮಾನಗಳು ಭಾರತೀಯ ಗಡಿಯ 200 ಕಿಲೋಮೀಟರ್ ವ್ಯಾಪ್ತಿಯ ಸಮೀಪಕ್ಕೂ ಬರಲು ಸಾಧ್ಯವಾಗಲಿಲ್ಲ ಎಂದು ಭಾರತದ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ S-400 ಕ್ಷಿಪಣಿ ಸಿಸ್ಟಂ ಎಲ್ಲಿ ನಿಯೋಜನೆಗೊಂಡಿವೆ ಎಂಬುದನ್ನು ತಿಳಿಯಲು ಪಾಕಿಸ್ತಾನ ಹರಸಾಹಸ ಪಟ್ಟಿತ್ತು. ಅದಕ್ಕಾಗಿ ಭಾರತದಲ್ಲಿರುವ ತನ್ನ ಗೂಢಚಾರರು ಹಾಗೂ ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಿತ್ತು ಎಂದು ಜೀತೇಂದ್ರ ಮಿಶ್ರಾ ಬಹಿರಂಗಪಡಿಸಿದ್ದಾರೆ.
“S-400 ಸಿಸ್ಟಂ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಪಾಕಿಸ್ತಾನ ತನಗೆ ತಿಳಿದಿದ್ದ ಎಲ್ಲಾ ತಂತ್ರಗಳನ್ನು ಬಳಸಿತ್ತು. ಇತರ ದೇಶಗಳಿಂದ ಉಪಗ್ರಹ ಆಧಾರಿತ ಮಾಹಿತಿಯ ನೆರವನ್ನೂ ಪಡೆಯುತ್ತಿತ್ತು. ಪ್ರತಿ ಬಾರಿ ಅವರ ವಿಮಾನಗಳು ಆಗಸಕ್ಕೇರಿದಾಗಲೂ S-400 ಅವುಗಳನ್ನು ಹೊಡೆದುರುಳಿಸುತ್ತಿತ್ತು. ಹೀಗಾಗಿ, ಭಾರತದಲ್ಲಿರುವ ತಮ್ಮ ಸ್ಲೀಪರ್ ಸೆಲ್ಗಳನ್ನು ಅವರು ಸಕ್ರಿಯಗೊಳಿಸಿದ್ದರು” ಎಂದು ಏರ್ ಮಾರ್ಷಲ್ ಹೇಳಿದ್ದಾರೆ. ಮೂಲಗಳ ಪ್ರಕಾರ ಚೀನಾ ದೇಶವು ಪಾಕಿಸ್ತಾನಕ್ಕೆ ಭಾರತದ ಬಹಳ ಮುಖ್ಯ ಮಿಲಿಟರಿ ತಾಣಗಳ ಮಾಹಿತಿ ನೀಡುತ್ತಿತ್ತು.
ಇದನ್ನೂ ಓದಿ:ಆಪರೇಷನ್ ಸಿಂಧೂರ್ ವೇಳೆ ಭಾರತ ಪಾಕಿಸ್ತಾನದ ಕಿರಾನಾ ಹಿಲ್ಸ್ ಪರಮಾಣು ಕೇಂದ್ರದ ಮೇಲೆ ದಾಳಿ ಮಾಡಿತ್ತಾ?
ಇತಿಹಾಸದಲ್ಲೇ ಅತ್ಯಂತ ದೂರದ ವೈಮಾನಿಕ ದಾಳಿ:
ಆಗಸದಲ್ಲಿ ಪಾಕಿಸ್ತಾನದ ರೇಡಾರ್ ವಿಮಾನವನ್ನು ಹೊಡೆದುರುಳಿಸಿದ ಘಟನೆಯನ್ನು ನೆನಪಿಸಿಕೊಂಡ ಜೀತೇಂದ್ರ ಮಿಶ್ರಾ, “ನನ್ನ ಬಳಿ S-400 ಆಪರೇಟರ್ ದಾಳಿ ಮಾಡಲೇ? ಎಂದು ಕೇಳಿದಾಗ, ‘ದಾಳಿ ಮಾಡಿ’ ಎಂದು ಆದೇಶಿಸಿದೆ. ನಾವು ಸುಮಾರು 314 ಕಿಲೋಮೀಟರ್ ದೂರದಲ್ಲಿದ್ದ ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿದೆವು. ಇದು ವಿಶ್ವದ ಇತಿಹಾಸದಲ್ಲೇ ಸರ್ಫೇಸ್-ಟು-ಏರ್ (ನೆಲದಿಂದ ಆಗಸಕ್ಕೆ) ಕ್ಷಿಪಣಿಯೊಂದರಿಂದ ನಡೆದ ಅತ್ಯಂತ ದೀರ್ಘ ಅಂತರದ ಯಶಸ್ವಿ ದಾಳಿಯಾಗಿದೆ” ಎಂದು ಆಪರೇಷನ್ ಸಿಂಧೂರದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
EP-444 with Air Marshal Jeetendra Mishra (Retd) premieres today at 5 PM IST | Promo
“There was not a single restriction. It was left to the military to decide how to fight the war.”
“India could hit anywhere in Pakistan, and Pakistan could do nothing about it.”
“Pakistan… pic.twitter.com/cEiWijTKhr
— ANI (@ANI) August 26, 2026
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು 2025ರ ಮೇ 7-8ರ ರಾತ್ರಿ ‘ಆಪರೇಷನ್ ಸಿಂಧೂರ್’ ನಡೆಸಿತ್ತು. “ಸೇನೆಯ ಕಾರ್ಯಚರಣೆಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಆದರೆ ಯಾವುದೇ ಕಾರಣಕ್ಕೂ ಸಾಮಾನ್ಯ ನಾಗರಿಕರಿಗೆ ತೊಂದರೆಯಾಗಬಾರದು, ಕೇವಲ ಭಯೋತ್ಪಾದಕರು ಮತ್ತು ಅವರ ಸೂತ್ರಧಾರಿಗಳಿಗೆ ಮಾತ್ರ ಶಿಕ್ಷೆಯಾಗಬೇಕು ಎಂಬ ಸ್ಪಷ್ಟ ನಿರ್ದೇಶನವಿತ್ತು” ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 15 ನವಜಾತ ಶಿಶುಗಳ ಸಜೀವದಹನ
ಎಸ್-400 ಕ್ಷಿಪಣಿಯ ವೈಶಿಷ್ಟ್ಯ:
S-400 ರಷ್ಯಾದಿಂದ ಪಡೆದ ಈ ಅತ್ಯಾಧುನಿಕ ದೀರ್ಘ ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಭಾರತದಲ್ಲಿ ಇದನ್ನು “ಸುದರ್ಶನ ಚಕ್ರ” ಎಂದು ಕರೆಯಲಾಗುತ್ತದೆ. ಇದು ಶತ್ರುಗಳ ಯುದ್ಧ ವಿಮಾನಗಳು, ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ದೂರದಲ್ಲೇ ಗುರುತಿಸಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. 2018ರಲ್ಲಿ ಭಾರತ ಮತ್ತು ರಷ್ಯಾ ನಡುವೆ 5 S-400 ಕ್ಷಿಪಣಿ ವ್ಯವಸ್ಥೆಗಳಿಗಾಗಿ 5.43 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದ ನಡೆದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Thu, 27 August 26