ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದಿಂದ ದಾಳಿ, ಭಾರತದಿಂದ ಪ್ರತಿದಾಳಿ
ಗಡಿ ನಿಯಂತ್ರಣ ರೇಖೆಯಲ್ಲಿ (LOC) ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಾಗಿದೆ. ಸೇನಾ ಮೂಲಗಳ ಪ್ರಕಾರ, ಪಾಕಿಸ್ತಾನಿ ಸೇನೆಯು ಭಾರತದ ಗಡಿಯೊಳಗೆ ನುಸುಳಿ ನೆಲಬಾಂಬ್ ಸ್ಫೋಟಿಸಿದ್ದು ಮಾತ್ರವಲ್ಲದೆ, ಅಪ್ರಚೋದಿತ ಗುಂಡಿನ ದಾಳಿಯನ್ನೂ ನಡೆಸಿದೆ. ಈ ಪ್ರಚೋದನೆಗೆ ಭಾರತೀಯ ಸೇನೆಯು ತಕ್ಷಣವೇ ಮತ್ತು ಬಲವಾಗಿ ಪ್ರತಿಕ್ರಿಯಿಸಿತು. ಏಪ್ರಿಲ್ 1 ರಂದು, ಕೃಷ್ಣ ಘಾಟಿ ವಲಯದಲ್ಲಿ ಪಾಕಿಸ್ತಾನ ಸೇನೆಯ ಒಳನುಸುಳುವಿಕೆಯಿಂದಾಗಿ ನೆಲಬಾಂಬ್ ಸ್ಫೋಟಗೊಂಡಿತು. ಇದರ ನಂತರ, ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿ ಯಾವುದೇ ಪ್ರಚೋದನೆಯಿಲ್ಲದೆ ಗುಂಡು ಹಾರಿಸಲು ಪ್ರಾರಂಭಿಸಿತು ಎಂದು ಸೇನಾ ಮೂಲಗಳು ತಿಳಿಸಿವೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

ಪೂಂಚ್, ಏಪ್ರಿಲ್ 2: ಪಾಕಿಸ್ತಾನ(Pakistan) ಸೇನೆಯು ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತ ಕೂಡ ದಾಳಿ ನಡೆಸಿದೆ. ಪಾಕಿಸ್ತಾನದ ಈ ಕದನ ವಿರಾಮ ಉಲ್ಲಂಘನೆಯನ್ನು ಭಾರತೀಯ ಸೇನೆ ಅಧಿಕೃತವಾಗಿ ದೃಢಪಡಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ, ಕೃಷ್ಣ ಘಾಟಿ ವಲಯದಲ್ಲಿ ಇದೇ ರೀತಿಯ ಗುಂಡಿನ ಚಕಮಕಿ ಘಟನೆಗಳು ವರದಿಯಾಗಿದ್ದವು. ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ ಯಶಸ್ವಿಯಾಗಿ ವಿಫಲಗೊಳಿಸಿದೆ.
ಪಾಕಿಸ್ತಾನಿ ಸೈನಿಕರು ಮತ್ತು ಒಳನುಸುಳುಕೋರರು ಗುಂಡು ಹಾರಿಸಲು ಪ್ರಾರಂಭಿಸಿದರು, ಇದಕ್ಕೆ ಭಾರತೀಯ ಸೇನೆಯು ಸೂಕ್ತ ಪ್ರತ್ಯುತ್ತರ ನೀಡಿತು. ಮೂಲಗಳ ಪ್ರಕಾರ, ಪಾಕಿಸ್ತಾನ ಸೇನೆಯ ನಾಲ್ಕರಿಂದ ಐದು ನುಸುಳುಕೋರರು ಸಾವನ್ನಪ್ಪಿದ್ದಾರೆ, ಆದರೂ ಇದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಈ ಘರ್ಷಣೆಯಲ್ಲಿ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.
ದಿನವಿಡೀ ನಿರಂತರ ಗುಂಡಿನ ಚಕಮಕಿ ಮುಂದುವರೆದಿದ್ದು, ಕೃಷ್ಣ ಘಾಟಿ ಪ್ರದೇಶದಲ್ಲಿ ಭಾರತೀಯ ಸೇನೆಯನ್ನು ಸಂಪೂರ್ಣವಾಗಿ ನಿಯೋಜಿಸಲಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ನಿಯಂತ್ರಣ ರೇಖೆಯ (ಎಲ್ಒಸಿ) ದಕ್ಷಿಣ ಪಿರ್ ಪಂಜಾಲ್ ವಲಯದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿ ಘಟನೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಪಾಕಿಸ್ತಾನ ಕಡೆಯಿಂದ ಸ್ನೈಪಿಂಗ್, ಗುಂಡು ಹಾರಿಸುವುದು ಮತ್ತು ಬಾರ್ಡರ್ ಆಕ್ಷನ್ ಟೀಮ್ (ಬಿಎಟಿ) ದಾಳಿಯ ಘಟನೆಗಳು ನಡೆದಿವೆ. ಭಾರತೀಯ ಸೇನಾ ಮೂಲಗಳ ಪ್ರಕಾರ, ಪಾಕಿಸ್ತಾನದ ನಿರಂತರ ಕದನ ವಿರಾಮ ಉಲ್ಲಂಘನೆಗೆ ಸ್ಥಳೀಯ ಮಟ್ಟದಲ್ಲಿ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ಸಿಕ್ಕಿದೆ.
ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದವನ್ನು ಫೆಬ್ರವರಿ 2021 ರಲ್ಲಿ ಪುನಃಸ್ಥಾಪಿಸಲಾಗಿತ್ತು. ಆದರೆ ಇದರ ಹೊರತಾಗಿಯೂ ಪಾಕಿಸ್ತಾನವು ಅದನ್ನು ಹಲವಾರು ಬಾರಿ ಉಲ್ಲಂಘಿಸಿದೆ.
ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ಗುಂಡಿನ ಚಕಮಕಿ, ಸೇನಾ ನಾಯಕ ಸಾವು ಹಾಗೂ 10 ಉಗ್ರರ ಹತ್ಯೆ
ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸಂಪೂರ್ಣವಾಗಿ ಸಿದ್ಧವಿದೆ. ಈ ಕದನ ವಿರಾಮ ಉಲ್ಲಂಘನೆ ಮಂಗಳವಾರ ಪ್ರಾರಂಭವಾಗಿತ್ತು ಮತ್ತು ತಡರಾತ್ರಿಯವರೆಗೂ ಮುಂದುವರೆಯಿತು. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕಳೆದ ಕೆಲವು ವಾರಗಳಲ್ಲಿ, ಪಾಕಿಸ್ತಾನ ಸೇನೆ ಮತ್ತು ಭಯೋತ್ಪಾದಕ ಗುಂಪುಗಳಿಂದ ಒಳನುಸುಳುವಿಕೆ ಪ್ರಯತ್ನಗಳು ಮತ್ತು ಗುಂಡಿನ ದಾಳಿ ಘಟನೆಗಳು ಹೆಚ್ಚಾಗಿವೆ. ಕದನ ವಿರಾಮ ಒಪ್ಪಂದದ ಹೊರತಾಗಿಯೂ, ಗಡಿಯಲ್ಲಿ ಅಲ್ಲಲ್ಲಿ ಘಟನೆಗಳು ನಡೆಯುತ್ತಲೇ ಇವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Wed, 2 April 25