ಬಾಹ್ಯಾಕಾಶ ನಿಲ್ದಾಣದಲ್ಲಿರುವ ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಾದ ನಡೆಸಿದ್ದಾರೆ. ಬಾಹ್ಯಾಕಾಶ ನಿಲ್ದಾಣ ತಲುಪಿದ ಕೂಡಲೆ ಭಾರತದ ದೇಶವಾಸಿಗಳಿಗೆ ಹಿಂದಿಯಲ್ಲಿ ಸಂದೇಶವನ್ನು ನೀಡಿದ್ದ ಶುಭಾಂಶು ಶುಕ್ಲಾ, ಭಾರತೀಯ ಜನರ ಪ್ರೀತಿ ಮತ್ತು ಆಶೀರ್ವಾದವೇ ತಮ್ಮನ್ನು ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆತಂದಿದೆ ಎಂದು ಹೇಳಿದ್ದರು.

ಬಾಹ್ಯಾಕಾಶ ನಿಲ್ದಾಣದಲ್ಲಿರುವ ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
Pm Modi Speak With Shubhanshu Shukla

Updated on: Jun 28, 2025 | 6:57 PM

ನವದೆಹಲಿ, ಜೂನ್ 28: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್​ಎಸ್) ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಜೂನ್ 25ರಂದು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇತರ ಮೂವರು ಗಗನಯಾತ್ರಿಗಳ ಜೊತೆ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಐಎಸ್‌ಎಸ್‌ಗೆ ಹಾರಿದ್ದರು. ಈ ಮೂಲಕ 40 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಗಗನಯಾತ್ರಿಯೆನಿಸಿಕೊಂಡ ಶುಭಾಂಶು ಶುಕ್ಲಾ ಇತಿಹಾಸ ಸೃಷ್ಟಿಸಿದ್ದರು.

ಪ್ರಧಾನ ಮಂತ್ರಿ ಕಚೇರಿಯು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ, “ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಹನ ನಡೆಸಿದರು” ಎಂದು ಅವರಿಬ್ಬರ ಸಂವಾದದ ಫೋಟೋವನ್ನು ಪೋಸ್ಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶುಭಾಂಶು ಅವರ ಜೊತೆಗಿನ ಸಂವಾದದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Axiom-4: ಬಾಹ್ಯಾಕಾಶದ ಜೀವನಕ್ಕೆ ಒಗ್ಗಿಕೊಂಡ ಆಕ್ಸಿಯಮ್-4 ಸಿಬ್ಬಂದಿ; ಡ್ರ್ಯಾಗನ್​ನಲ್ಲಿ ನಿದ್ರಿಸಿದ ಶುಭಾಂಶು ಶುಕ್ಲಾ

ಆಕ್ಸಿಯಮ್ -4ರ ಯಶಸ್ವಿ ಉಡಾವಣೆಯ ನಂತರ, ಪ್ರಧಾನಿ ಮೋದಿ ಅವರು ಈ ಮಿಷನ್ ಪೈಲಟ್ ಶುಭಾಂಶು ಶುಕ್ಲಾ ಮತ್ತು ಇತರ ಸಿಬ್ಬಂದಿ ಸದಸ್ಯರಾದ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಅವರನ್ನು ಅಭಿನಂದಿಸಿದ್ದರು. ಐಎಸ್‌ಎಸ್‌ಗೆ ಹಾರಿದ ಮೊದಲ ಭಾರತೀಯ ಗಗನಯಾತ್ರಿಯಾಗಲು ಹೊರಟಿದ್ದ ಶುಭಾಂಶು ಶುಕ್ಲಾ ಅವರು “1.4 ಬಿಲಿಯನ್ ಭಾರತೀಯರ ಆಶಯಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು” ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಶುಭಾಂಶು ಶುಕ್ಲಾ 1.4 ಶತಕೋಟಿ ಭಾರತೀಯರ ಭರವಸೆ ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದಾರೆ; ಆಕ್ಸಿಯಮ್ -4 ಉಡಾವಣೆಗೆ ಮೋದಿ ಶ್ಲಾಘನೆ

ಮೋದಿ ಹೇಳಿದ್ದೇನು?:

ನೀವು ಭೂಮಿಯನ್ನು ಬಿಟ್ಟು ಬಾಹ್ಯಾಕಾಶದಲ್ಲಿದ್ದರೂ ನವೆಷ್ಟು ಭೂಮಿ ತೂಕದವರು (ಡೌನ್ ಟು ಅರ್ಥ್) ಎಂಬುದನ್ನು ಜನ ಗಮನಿಸುತ್ತಿದ್ದಾರೆ. ನೀವುಜನರ ಹೃದಯಕ್ಕೆ ಹತ್ತಿರದಲ್ಲಿದ್ದೀರಿ. 140 ಕೋಟಿ ಭಾರತೀಯರ ಭಾವನೆಗಳು ತಮ್ಮೊಂದಿಗಿವೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಾಹ್ಯಾಕಾಶದಲ್ಲಿ ಭಾರತದ ಧ್ವಜ ಹಾರಿಸಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದ ಮೋದಿ ಶುಭಾಂಶು ಶುಕ್ಲಾ ಅವರ ಜೊತೆ ಹೋಗಿದ್ದ ಇತರರ ಆರೋಗ್ಯವನ್ನೂ ವಿಚಾರಿಸಿದರು.


ಇದಾದ ನಂತರ ತಮಾಷೆಯಾಗಿ, ಕ್ಯಾರೆಟ್ ಹಲ್ವಾ ತೆಗೆದುಕೊಂಡು ಹೋಗಿದ್ದೀರಾ? ಅದನ್ನು ಬೇರೆಯವರಿಗೂ ಕೊಟ್ಟಿರಾ? ಎಂದು ಮೋದಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ನಾನು ನಿಜವಾಗಿಯೂ ಕ್ಯಾರೆಟ್ ಹಲ್ವಾ, ಹೆಸರುಬೇಳೆ ಹಲ್ವಾ, ಮಾವಿನ ರಸ ತೆಗೆದುಕೊಂಡು ಬಂದಿದ್ದೆ. ನಮ್ಮ ದೇಶದ ಪಾಕಪದ್ಧತಿಯ ಬಗ್ಗೆ ಬೇರೆ ದೇಶದವರಿಗೂ ತಿಳಿಸಬೇಕೆಂದು ಇಲ್ಲಿದ್ದ ಬೇರೆ ದೇಶಿಗರಿಗೂ ಕೊಟ್ಟೆ. ಎಲ್ಲರೂ ಕೂತು ಹಲ್ವಾ ತಿಂದೆವು. ಅವರಿಗೆ ತುಂಬ ಇಷ್ಟವಾಯಿತು ಎಂದಿದ್ದಾರೆ.


ಆಕ್ಸಿಯಮ್ -4 ಮಿಷನ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಗುರುವಾರ ಡಾಕಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಬಾಹ್ಯಾಕಾಶ ನಿಲ್ದಾಣದಲ್ಲಿ 2 ವಾರಗಳ ಕಾಲ ವಾಸವಿದ್ದು, ಅಧ್ಯಯನ ನಡೆಸಲಿದ್ದಾರೆ. ಅವರ ವಾಸ್ತವ್ಯದ ಸಮಯದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ವೈಜ್ಞಾನಿಕ ಪ್ರಯೋಗಗಳು, ತಂತ್ರಜ್ಞಾನ ಪ್ರದರ್ಶನಗಳು ಮತ್ತು ಶಿಕ್ಷಣ ಸಂಪರ್ಕ ಚಟುವಟಿಕೆಗಳನ್ನು ನಡೆಸುತ್ತಾರೆ. ಶುಭಾಂಶು ಶುಕ್ಲಾ ಐಎಸ್‌ಎಸ್‌ನಲ್ಲಿ ಮಿಷನ್ ಸಿಬ್ಬಂದಿ ನಿರ್ವಹಿಸುವ 60 ಪ್ರಯೋಗಗಳಲ್ಲಿ 7ನ್ನು ಮುನ್ನಡೆಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:29 pm, Sat, 28 June 25