Rahul Gandhi: ಭಾರತ್ ಜೋಡೋ ಯಾತ್ರೆ ವೇಳೆ ರಾಷ್ಟ್ರಗೀತೆ ಹಾಕುವಾಗ ಎಡವಟ್ಟು; ರಾಹುಲ್ ಗಾಂಧಿಗೆ ಬಿಜೆಪಿ ತರಾಟೆ

| Updated By: ಸುಷ್ಮಾ ಚಕ್ರೆ

Updated on: Nov 17, 2022 | 10:08 AM

Bharat Jodo Yatra: ಭಾರತ್ ಜೋಡೋ ಯಾತ್ರೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯ ಬದಲು ಬೇರೆ ಗೀತೆಯನ್ನು ಪ್ಲೇ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಸ್ಪಷ್ಟವಾಗಿದೆ.

Rahul Gandhi: ಭಾರತ್ ಜೋಡೋ ಯಾತ್ರೆ ವೇಳೆ ರಾಷ್ಟ್ರಗೀತೆ ಹಾಕುವಾಗ ಎಡವಟ್ಟು; ರಾಹುಲ್ ಗಾಂಧಿಗೆ ಬಿಜೆಪಿ ತರಾಟೆ
ರಾಷ್ಟ್ರಗೀತೆ ಹಾಡಿದ ರಾಹುಲ್ ಗಾಂಧಿ
Follow us on

ಮುಂಬೈ: ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಇದೀಗ ಮಹಾರಾಷ್ಟ್ರ ತಲುಪಿದೆ. ಬುಧವಾರ ನಡೆದ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮವೊಂದರಲ್ಲಿ ಕೆಲವು ಸೆಕೆಂಡುಗಳ ಕಾಲ ರಾಷ್ಟ್ರಗೀತೆಯ ಬದಲಿಗೆ ತಪ್ಪಾದ ಹಾಡಿನ ವಿಡಿಯೋವನ್ನು ಪ್ಲೇ ಮಾಡಲಾಗಿದ್ದು, ಈ ತಪ್ಪಿಗೆ ಬಿಜೆಪಿ ನಾಯಕರು ರಾಹುಲ್ ಗಾಂಧಿ (Rahul Gandhi) ಮತ್ತು ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೇಶ್ ರಾಣೆ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಪಾಪು ಕಾ ಕಾಮಿಡಿ ಸರ್ಕಸ್” ಎಂದು ಆ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ತಮಿಳುನಾಡು ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಕೂಡ ಇದೇ ವೀಡಿಯೊವನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. “ಇದೇನಿದು ರಾಹುಲ್ ಗಾಂಧಿ” ಎಂದು ಪ್ರಶ್ನಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯ ಬದಲು ಬೇರೆ ಗೀತೆಯನ್ನು ಪ್ಲೇ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಸ್ಪಷ್ಟವಾಗಿದೆ. ವಾಶಿಮ್‌ನಲ್ಲಿ ರಾಹುಲ್ ಗಾಂಧಿಯವರ ಭಾಷಣದ ಕೊನೆಯಲ್ಲಿ ಈಗ ರಾಷ್ಟ್ರಗೀತೆಯನ್ನು ಪ್ಲೇ ಮಾಡಲಾಗುವುದು ಎಂದು ಘೋಷಣೆ ಮಾಡಲಾಯಿತು. ಅದನ್ನು ರಾಹುಲ್ ಗಾಂಧಿಯವರು ಕೂಡ ಮೈಕ್‌ನಲ್ಲಿ ಹೇಳಿದರು. ಆಗ ವೇದಿಕೆಯಲ್ಲಿದ್ದ ಕಾಂಗ್ರೆಸ್ ಮುಖಂಡರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಲು ಸಿದ್ಧರಾದರು. ಆದರೆ, ತಂತ್ರಜ್ಞರ ತಪ್ಪಿನಿಂದಾಗಿ ಕೆಲವು ಸೆಕೆಂಡುಗಳ ಕಾಲ ಬೇರೆ ಮ್ಯೂಸಿಕ್ ಹಾಕಲಾಯಿತು. ಆಗ ರಾಹುಲ್ ಗಾಂಧಿ ಅಲ್ಲಿದ್ದ ಸ್ಥಳೀಯ ನಾಯಕರಿಗೆ ಸನ್ನೆ ಮಾಡಿ ರಾಷ್ಟ್ರಗೀತೆಯ ಬದಲು ಬೇರೆ ಸಂಗೀತವನ್ನು ಹಾಕಿದ್ದೀರಲ್ಲ ಎಂದು ಪ್ರಶ್ನಿಸಿದರು. ಆ ನಂತರ ಜನ ಗಣ ಮನ ಮ್ಯೂಸಿಕ್ ಪ್ಲೇ ಮಾಡಲಾಯಿತು.

ಇದನ್ನೂ ಓದಿ: ವೀರ್ ಸಾವರ್ಕರ್​ ವಿರುದ್ಧ ಅವಮಾನಕಾರಿ ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ದೂರು ನೀಡಲು ಸಾವರ್ಕರ್ ಮೊಮ್ಮಗ ನಿರ್ಧಾರ

ಅದು ರಾಷ್ಟ್ರಗೀತೆಯಲ್ಲ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಅಷ್ಟು ಸಮಯ ಬೇಕಾಯಿತೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪ್ರಸ್ತುತ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿದೆ. ಬೆಲೆ ಏರಿಕೆ ವಿಚಾರವಾಗಿ ಬುಧವಾರ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರೈತರನ್ನು ನಾಶಪಡಿಸುವ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ. ಮೊದಲು ಪ್ರಧಾನಿ ಮೋದಿ ಅವರು ಕಪ್ಪುಹಣದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಹೇಳಿದರು. ನಂತರ ದೂರದರ್ಶನದಲ್ಲಿ ನೋಟು ನಿಷೇಧವನ್ನು ಘೋಷಿಸಿದರು. ಇವೆಲ್ಲವೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ನಾಶಪಡಿಸುವುದಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ