
ಕಾನ್ಪುರ, ಜೂನ್ 12: ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಇದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಮೇಲೆ ಫಿಜೋರಾಬಾದ್ ಬಳಿ ಗುರುವಾರ ಸಂಜೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಅತ್ಯಂತ ತೀವ್ರ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ರೈಲಿನಲ್ಲಿದ್ದ ಆರ್ಎಸ್ಎಸ್ ಸರ್ಸಂಘಚಾಲಕ್ ಮೋಹನ್ ಭಾಗವತ್ ಸೇರಿದಂತೆ ಎಲ್ಲಾ ಪ್ರಯಾಣಿಕರು ಸಂಪೂರ್ಣ ಸುರಕ್ಷಿತವಾಗಿದ್ದು, ತನಿಖೆ ಚುರುಕುಗೊಂಡಿದೆ.
ಸ್ವರ್ಣ ಶತಾಬ್ದಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12003) ಸಂಜೆ 7.15 ರ ಸುಮಾರಿಗೆ ಫಿರೋಜಾಬಾದ್ ಜಿಲ್ಲೆಯ ಮಖನ್ಪುರ ನಿಲ್ದಾಣದ ಬಳಿ ಹಾದುಹೋಗುವಾಗ ಈ ಕಲ್ಲು ತೂರಾಟ ನಡೆದಿದೆ. ಕಲ್ಲು ಎಸಿ ಕೋಚ್ನ ಕಿಟಕಿಗೆ ತಗುಲಿ ಹೊರಗಿನ ಗಾಜು ಮಾತ್ರ ಬಿರುಕು ಬಿಟ್ಟಿದೆ. ಅದೇ ಕೋಚ್ನಲ್ಲಿದ್ದ ಮೋಹನ್ ಭಾಗವತ್ ಅವರು ಎದುರು ಭಾಗದ ಸೀಟಿನಲ್ಲಿ ಕುಳಿತಿದ್ದರಿಂದ ಅವರಿಗೆ ಹಾಗೂ ರೈಲಿನಲ್ಲಿದ್ದ ಇತರ ಯಾವುದೇ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.
ಘಟನೆ ನಡೆದ ತಕ್ಷಣವೇ ಆಗ್ರಾ ವಲಯದ ಎಡಿಜಿ ಎಸ್ಕೆ ಭಗತ್, ಡಿಐಜಿ ಶೈಲೇಶ್ ಪಾಂಡೆ ಮತ್ತು ಫಿರೋಜಾಬಾದ್ ಎಸ್ಎಸ್ಪಿ ಆದಿತ್ಯ ಲಾಂಘೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ದಂಡೇ ಸ್ಥಳಕ್ಕೆ ಧಾವಿಸಿತು. ಪರಿಸ್ಥಿತಿಯನ್ನು ಅದ್ಭುತವಾಗಿ ನಿಯಂತ್ರಿಸಿದ ಪೊಲೀಸರು, ಹಳಿಗಳ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೇವಲ ಕೆಲವೇ ಗಂಟೆಗಳಲ್ಲಿ ಒಬ್ಬ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ಬಳಿಕ ಟ್ರೋಲ್; ಅದ್ನಾನ್ ಸಮಿ ತಿರುಗೇಟು
ತುಂಡ್ಲಾ ಜಂಕ್ಷನ್ನ ಹೊರ ಸಿಗ್ನಲ್ನಲ್ಲಿ ರೈಲನ್ನು ನಿಲ್ಲಿಸಿ, ಅಧಿಕಾರಿಗಳು ಇಡೀ ಕೋಚ್ನ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಎಲ್ಲವೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಂಡ ತಕ್ಷಣವೇ, ಅಂದರೆ ಸಂಜೆ 7.41 ಕ್ಕೆ ರೈಲು ದೆಹಲಿಯತ್ತ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಮುಂದುವರಿಸಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ