ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ಬಳಿಕ ಟ್ರೋಲ್; ಅದ್ನಾನ್ ಸಮಿ ತಿರುಗೇಟು
ಮೋಹನ್ ಭಾಗವತ್ ಭೇಟಿ ಬಳಿಕ ಅದ್ನಾನ್ ಸಾಮಿ ಹಂಚಿಕೊಂಡಿದ್ದ ಫೋಟೋ ಸಖತ್ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಆ ಘಟನೆಗೆ ಈಗ ಅದ್ನಾನ್ ಸಮಿ ಅವರು ಉತ್ತರ ನೀಡಿದ್ದಾರೆ. ‘ನನಗೆ ಏನು ಸರಿ ಅನಿಸುತ್ತದೋ ಅದನ್ನೇ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ಖ್ಯಾತ ಗಾಯಕ ಅದ್ನಾನ್ ಸಮಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ಭೇಟಿಯಾದ ಫೋಟೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲಿಂಗ್ಗೆ ಒಳಗಾಗಿದ್ದರು. ಸದ್ಯ ಈ ವಿಚಾರವಾಗಿ ಮೌನ ಮುರಿದಿರುವ ಅದ್ನಾನ್ ಸಮಿ (Adnan Sami) ಅವರು, ಹೀಯಾಳಿಸುವವರ ಬಗ್ಗೆ ತಾವು ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಮೇಲಿನ ಟ್ರೋಲಿಂಗ್ ಮತ್ತು ವಿವಾದಗಳ ಬಗ್ಗೆ ಮಾತನಾಡಿದ ಅದ್ನಾನ್ ಸಮಿ, ‘ನಾನು ಸ್ವತಂತ್ರ ಮನಸ್ಸಿನ ವ್ಯಕ್ತಿ. ಸದ್ಯ ನನ್ನ ಮನಸ್ಸಿಗೆ ಯಾವುದೇ ಫಿಲ್ಟರ್ಗಳಿಲ್ಲ. ನನಗೆ ಏನು ಸರಿ ಅನಿಸುತ್ತದೋ ಅದನ್ನೇ ಮಾಡುತ್ತೇನೆ. ನಾನು ದೇವರಿಗೆ ಮಾತ್ರ ಉತ್ತರ ನೀಡಬೇಕೇ ಹೊರತು ಬೇರೆ ಯಾರಿಗೂ ಅಲ್ಲ’ ಎಂದು ನೇರವಾಗಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ‘ಯಾರಾದರೂ ನನ್ನೊಂದಿಗೆ ಚೆನ್ನಾಗಿ ನಡೆದುಕೊಂಡರೆ, ಅವರು ಯಾರೇ ಆಗಿದ್ದರೂ ನಾನು ಅವರೊಂದಿಗೆ ಒಳ್ಳೆಯ ರೀತಿಯಲ್ಲೇ ನಡೆದುಕೊಳ್ಳುತ್ತೇನೆ. ಬೇರೊಬ್ಬರ ಅಭಿಪ್ರಾಯದ ಆಧಾರದ ಮೇಲೆ ನಾನು ಯಾರನ್ನೂ ಅಳೆಯಲು ಹೋಗುವುದಿಲ್ಲ. ಅದರಲ್ಲೂ ವಿಶೇಷವಾಗಿ ನನಗೆ ಯಾರ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲವೋ, ಅವರ ಬಗ್ಗೆ ನಾನು ಖಂಡಿತವಾಗಿಯೂ ಯಾವುದೇ ತೀರ್ಪು ನೀಡುವುದಿಲ್ಲ. ಜನರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
View this post on Instagram
ಸೋಶಿಯಲ್ ಮೀಡಿಯಾ ಸಂಸ್ಕೃತಿಯೇ ಇಂತಹ ಪರಿಸ್ಥಿತಿಗೆ ಕಾರಣ ಎಂದಿರುವ ಅದ್ನಾನ್, ಜನರು ಹಿನ್ನೆಲೆ ತಿಳಿಯದೆ ತರಾತುರಿಯಲ್ಲಿ ತೀರ್ಮಾನಕ್ಕೆ ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಒಂದು ಫೋಟೋ ಅಥವಾ ಒಂದು ಹಾಡನ್ನು ನೋಡಿ ನಾನು ಯಾರು, ಎಂಥವನು ಎಂದು ನಿರ್ಣಯಿಸಲು ಸಾಧ್ಯ ಎಂದು ಯಾರಾದರೂ ಅಂದುಕೊಂಡಿದ್ದರೆ, ಅವರು ಭ್ರಮೆಯ ಲೋಕದಲ್ಲಿದ್ದಾರೆ ಎಂದರ್ಥ. ನನ್ನನ್ನು ಟ್ರೋಲ್ ಮಾಡುವವರಲ್ಲಿ ಹೆಚ್ಚಿನವರು ನನ್ನ ಅಭಿಮಾನಿಗಳಲ್ಲ, ಅವರು ಕೇವಲ ನೆಗೆಟಿವಿಟಿ ಹರಡಲು ಕಾಯುತ್ತಿರುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ: ‘ಗುಡ್ ಬೈ’ ಹೇಳಿದ ಖ್ಯಾತ ಗಾಯಕ ಅದ್ನಾನ್ ಸಮಿ: ಫ್ಯಾನ್ಸ್ ವಲಯದಲ್ಲಿ ಆತಂಕ
ಕಳೆದ ಫೆಬ್ರವರಿ ತಿಂಗಳಲ್ಲಿ ಅದ್ನಾನ್ ಸಮಿ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ‘ಆರ್ಎಸ್ಎಸ್ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಅವರೊಂದಿಗೆ ಅದ್ಭುತವಾದ ಮಧ್ಯಾಹ್ನವನ್ನು ಕಳೆದಿದ್ದೇನೆ. ಅವರು ಮಾತನಾಡುವುದನ್ನು ಕೇಳುವುದೇ ಒಂದು ಸಂತೋಷ. ಆರ್ಎಸ್ಎಸ್ ಬಗ್ಗೆ ಇದ್ದ ಹಲವು ತಪ್ಪು ಕಲ್ಪನೆಗಳನ್ನು ಅವರು ತುಂಬಾ ಸರಳವಾಗಿ ಮನವರಿಕೆ ಮಾಡಿಕೊಟ್ಟರು. ಅವರು ಅತ್ಯಂತ ಸುಸಂಸ್ಕೃತ ವ್ಯಕ್ತಿ ಮತ್ತು ಉದಾತ್ತ ಜೀವಿ’ ಎಂದು ಆ ಫೋಟೋಗಳಿಗೆ ಕ್ಯಾಪ್ಷನ್ ಬರೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:12 pm, Thu, 21 May 26





