AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಗಾಳದಲ್ಲಿ ಕೇಸರಿ ಕ್ರಾಂತಿ: ದೀದಿ ಸಾಮ್ರಾಜ್ಯ ಪತನ, ಬಿಜೆಪಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ಮುಖ್ಯಮಂತ್ರಿ ಗದ್ದುಗೆ?

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆದ್ದು ಮ್ಯಾಜಿಕ್ ಸಂಖ್ಯೆ ದಾಟಿ, ಮಮತಾ ಬ್ಯಾನರ್ಜಿ ಆಳ್ವಿಕೆಗೆ ತೆರೆ ಎಳೆದಿದೆ. ರಾಜ್ಯದಲ್ಲಿ ಕೇಸರಿ ಕ್ರಾಂತಿ ಸಂಭವಿಸಿದ್ದು, ಇದೀಗ ಎಲ್ಲರ ಕುತೂಹಲ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾರು ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಸುವೇಂದು ಅಧಿಕಾರಿ, ದಿಲೀಪ್ ಘೋಷ್ ಮತ್ತು ಸಮಿಕ್ ಭಟ್ಟಾಚಾರ್ಯ ಹೆಸರುಗಳು ಮುಂಚೂಣಿಯಲ್ಲಿವೆ.

ಬಂಗಾಳದಲ್ಲಿ ಕೇಸರಿ ಕ್ರಾಂತಿ: ದೀದಿ ಸಾಮ್ರಾಜ್ಯ ಪತನ, ಬಿಜೆಪಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ಮುಖ್ಯಮಂತ್ರಿ ಗದ್ದುಗೆ?
ಸುವೇಂದು ಅಧಿಕಾರಿ-ದಿಲೀಪ್ ಘೋಷ್ Image Credit source: AnandaBazar
ನಯನಾ ರಾಜೀವ್
|

Updated on: May 05, 2026 | 10:42 AM

Share

ಕೋಲ್ಕತ್ತಾ, ಮೇ 05: ಪಶ್ಚಿಮ ಬಂಗಾಳ(West Bengal)ದ ಚುನಾವಣಾ ಫಲಿತಾಂಶವು ಇಡೀ ದೇಶದ ಗಮನ ಸೆಳೆದಿದೆ. ಸೋಮವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ 148ರ ಮ್ಯಾಜಿಕ್ ಸಂಖ್ಯೆಯನ್ನು ಸುಲಭವಾಗಿ ದಾಟಿದೆ. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಆಳ್ವಿಕೆಗೆ ತೆರೆ ಬಿದ್ದಿದೆ. ಈಗ ಎಲ್ಲರ ಕುತೂಹಲವಿರುವುದು ಒಂದೇ ಪ್ರಶ್ನೆಯ ಮೇಲೆ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾರು?

ಸುವೇಂದು ಅಧಿಕಾರಿ

ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದ ಸುವೇಂದು ಅಧಿಕಾರಿ, ಇಂದು ಅವರ ಪಾಲಿಗೆ ರಾಜಕೀಯ ಸಿಂಹಸ್ವಪ್ನವಾಗಿದ್ದಾರೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಸೋಲಿಸಿದ್ದ ಅವರು, ಈಗ 2026ರಲ್ಲಿ ಭಬಾನಿಪುರದಲ್ಲೂ ತಮ್ಮ ಮಾಜಿ ಬಾಸ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ನುಸುಳುಕೋರರ ಸಮಸ್ಯೆ ಮತ್ತು ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಮಮತಾ ಸರ್ಕಾರವನ್ನು ಕಟ್ಟಿಹಾಕಿದ ಸುವೇಂದು, ಜನರ ನಡುವಿನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ದಿಲೀಪ್ ಘೋಷ್: ಸಂಘಟನಾ ಚತುರ ಬಿಜೆಪಿಯನ್ನು ಶೂನ್ಯದಿಂದ ಈ ಮಟ್ಟಕ್ಕೆ ತಂದ ಕೀರ್ತಿ ಮಾಜಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೆ ಸಲ್ಲುತ್ತದೆ. ಆರ್‌ಎಸ್‌ಎಸ್‌ನ ಕಟ್ಟಾ ಅನುಯಾಯಿಯಾದ ಇವರು, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಸಂಘದ ಜವಾಬ್ದಾರಿ ಹೊತ್ತಿದ್ದರು. ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಕೆ.ಎಸ್. ಸುದರ್ಶನ್ ಅವರ ಸಹಾಯಕರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ಅಡಿಪಾಯವನ್ನು ಬಲಪಡಿಸಿದವರು ಇವರು.

ಮತ್ತಷ್ಟು ಓದಿ: ಬಂಗಾಳ ನೆಲದಲ್ಲಿ ಹೊಸ ಸೂರ್ಯೋದಯವಾಗಿದೆ: ಇದೀಗ ಬದಲಾವಣೆ ಪರ್ವ ಶುರು ಎಂದ ಮೋದಿ

ಸಮಿಕ್ ಭಟ್ಟಾಚಾರ್ಯ: ನಿಷ್ಠಾವಂತ ಹೋರಾಟಗಾರ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಸಮಿಕ್ ಭಟ್ಟಾಚಾರ್ಯ, ಬಂಗಾಳದಲ್ಲಿ ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಡಿದ ಹಿರಿಯ ನಾಯಕರಲ್ಲಿ ಒಬ್ಬರು. 2014ರ ಉಪಚುನಾವಣೆಯಲ್ಲಿ ಬಸಿರ್ಹತ್ ದಕ್ಷಿಣ ಕ್ಷೇತ್ರದಿಂದ ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದ ಮೊದಲ ಚುನಾಯಿತ ಬಿಜೆಪಿ ಶಾಸಕ ಎಂಬ ದಾಖಲೆ ಬರೆದವರು. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವ ಇವರ ಹೆಸರು ಕೂಡ ಸಿಎಂ ರೇಸ್‌ನಲ್ಲಿದೆ.

ಒಟ್ಟು 206 ಸ್ಥಾನಗಳ ಭರ್ಜರಿ ಜಯದೊಂದಿಗೆ ಬಿಜೆಪಿ ಬಂಗಾಳದಲ್ಲಿ ಹೊಸ ಯುಗ ಆರಂಭಿಸಿದೆ. ಸುವೇಂದು ಅಧಿಕಾರಿಯವರ ಜನಪ್ರಿಯತೆಯೋ ಅಥವಾ ದಿಲೀಪ್ ಘೋಷ್, ಸಮಿಕ್ ಭಟ್ಟಾಚಾರ್ಯ ಅವರ ಸಂಘಟನಾ ನಿಷ್ಠೆಯೋ? ಹೈಕಮಾಂಡ್ ಯಾರಿಗೆ ಮನ್ನಣೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಂತಿಮವಾಗಿ, ಬಂಗಾಳದ ಮಣ್ಣಿನ ಮಗನೇ ಈ ಐತಿಹಾಸಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಖಚಿತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us