ಸಹಾರನ್ಪುರ ಮಸೀದಿ ಧ್ವಂಸ ವಿವಾದ; ಯೋಗಿ ಸರ್ಕಾರದ ವಿರುದ್ಧ ಅಸಾದುದ್ದೀನ್ ಒವೈಸಿ ವಾಗ್ದಾಳಿ
ಕೋರ್ಟ್ ಆದೇಶದ ಬೆನ್ನಲ್ಲೇ ಇಂದು ಬೆಳಗಿನ ಜಾವ ಸುಮಾರು ೫ ಗಂಟೆಗೆ ಸಹಾರನ್ಪುರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿದ್ದ ಮಸೀದಿಯೊಂದನ್ನು ಧ್ವಂಸಗೊಳಿಸಲಾಗಿದ್ದು, ಇದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಪ್ರಶ್ನಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ದಾಖಲೆಗಳ ಪ್ರಕಾರ ಜಿಲ್ಲಾಧಿಕಾರಿಯ ಕಚೇರಿಗಿಂತಲೂ ಮಸೀದಿಯೇ ಹಳೆಯದು ಎಂದು ಪ್ರತಿಪಾದಿಸಿದ್ದಾರೆ. ಈ ಮಸೀದಿ 1911ರಲ್ಲೇ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 5: ಉತ್ತರ ಪ್ರದೇಶದ ಸಹಾರನ್ಪುರದಲ್ಲಿ ಜಿಲ್ಲಾಡಳಿತವು ಮಸೀದಿಯೊಂದರ ಭಾಗವನ್ನು ಅತಿಕ್ರಮಣ ತೆರವು ಕಾರ್ಯಾಚರಣೆಯಡಿ ಧ್ವಂಸಗೊಳಿಸಿರುವುದು ಭಾರಿ ರಾಜಕೀಯ ವಿವಾದ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಒವೈಸಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಮುಸ್ಲಿಂ ಸಮುದಾಯದ ಧಾರ್ಮಿಕ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಗುರಿಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಸಾದುದ್ದೀನ್ ಒವೈಸಿ, “ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಮುಸ್ಲಿಮರಿಗೆ ಅನ್ವಯಿಸುವುದಿಲ್ಲವೇ? ಸಣ್ಣಪುಟ್ಟ ನೆಪಗಳನ್ನು ಒಡ್ಡಿ ನಮ್ಮ ಪ್ರಾರ್ಥನಾ ಮಂದಿರಗಳನ್ನು ನಿರಂತರವಾಗಿ ಬುಲ್ಡೋಜರ್ ಬಳಸಿ ಧ್ವಂಸಗೊಳಿಸುತ್ತಿರುವುದೇಕೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ಕೌಶಂಬಿಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 11 ಜನ ಸಾವು
ಸಹಾರನ್ಪುರದ ಸ್ಥಳೀಯ ಆಡಳಿತ ಮತ್ತು ನಗರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ನೊಂದಿಗೆ ಕಾರ್ಯಾಚರಣೆ ನಡೆಸಿ, ಸರ್ಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎನ್ನಲಾದ ಮಸೀದಿಯ ಭಾಗವನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದರು. ಈ ವೇಳೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
100 ವರ್ಷಗಳಿಗೂ ಹೆಚ್ಚಿನ ಇತಿಹಾಸ:
ಮಸೀದಿ ಕಮಿಟಿಯು 1911ರಷ್ಟು ಹಳೆಯ ದಾಖಲೆಗಳನ್ನು ಒದಗಿಸಿದ್ದು, ಶತಮಾನಕ್ಕೂ ಹೆಚ್ಚು ಕಾಲದಿಂದ ಇಲ್ಲಿ ನಿರಂತರವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಇದು ಕಾನೂನಿನ ಪ್ರಕಾರ ‘ಬಳಕೆ ಆಧಾರಿತ ವಕ್ಫ್’ ವ್ಯಾಪ್ತಿಗೆ ಬರುತ್ತದೆ ಎಂದು ಅವರು ಹೇಳಿದ್ದಾರೆ. “ಸಾರ್ವಜನಿಕವಾಗಿ ಶತಮಾನಕ್ಕೂ ಹೆಚ್ಚು ಕಾಲ ಇದ್ದ ಕಟ್ಟಡದ ಮೇಲೆ ಸರ್ಕಾರ ಇದ್ದಕ್ಕಿದ್ದಂತೆ ಹಕ್ಕು ಸಾಧಿಸಲು ‘ಲಿಮಿಟೇಶನ್ ಆಕ್ಟ್’ ಅನುಮತಿಸುವುದಿಲ್ಲ. ಆಡಳಿತವು ಈ ಜಾಗದ ಮೇಲಿನ ಹಕ್ಕು ನಿನ್ನೆಯಷ್ಟೇ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ಒವೈಸಿ ವಾದಿಸಿದ್ದಾರೆ.
The mosque in the Saharanpur Collectorate was demolished at 5 AM this morning.
Does the constitutional guarantee of freedom of religion no longer apply to Muslims? Why is it that our places of worship are constantly bulldozed on flimsy grounds?
The mosque committee produced…
— Asaduddin Owaisi (@asadowaisi) September 5, 2026
“ಮೊದಲು ಮಸೀದಿ ಇತ್ತು, ಆಮೇಲೆ ಜಿಲ್ಲಾಧಿಕಾರಿ ಕಚೇರಿ ಬಂದಿದ್ದು. ಕೆಲವರಿಗೆ ಮಸೀದಿಯನ್ನು ಕಂಡರೆ ಹೊಟ್ಟೆಉರಿ. ಅದೇ ಅವರ ಸಮಸ್ಯೆ. ನಿಮಗಿಷ್ಟವಿಲ್ಲದಿದ್ದರೆ ಕಣ್ಣು ಮುಚ್ಚಿಕೊಳ್ಳಿ, ನಿಮ್ಮ ದ್ವೇಷಕ್ಕಾಗಿ ನಮ್ಮ ಮಸೀದಿಯನ್ನು ಕೆಡವಲು ಸಾಧ್ಯವಿಲ್ಲ. ನನ್ನ ಧಾರ್ಮಿಕ ಸ್ವಾತಂತ್ರ್ಯ ನಿಮ್ಮ ದಯೆಯ ಮೇಲೆ ಅವಲಂಬಿತವಾಗಿಲ್ಲ” ಎಂದು ಒವೈಸಿ ಕಿಡಿಕಾರಿದ್ದಾರೆ. ಮಸೀದಿ ಕಮಿಟಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು, ಸೆಪ್ಟೆಂಬರ್ 4ರಂದು ನಗರ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿದ ಹಿನ್ನೆಲೆಯಲ್ಲಿ ಈ ಧ್ವಂಸ ಕಾರ್ಯಾಚರಣೆ ನಡೆದಿದೆ.
ಸರ್ಕಾರಿ ಜಾಗದ ಅತಿಕ್ರಮಣ ಮತ್ತು ದುರ್ಬಳಕೆಯ ಆರೋಪದ ಮೇಲೆ ಜುಲೈ 17ರಂದು ನಗರ ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡವನ್ನು ತೆರವುಗೊಳಿಸಲು ಮತ್ತು ಸುಮಾರು 6.41 ಕೋಟಿ ರೂ. ನಷ್ಟ ಪರಿಹಾರ ವಿಧಿಸಲು ಆದೇಶಿಸಿತ್ತು. ಈ ಮಸೀದಿಯನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಸಹಾರನ್ಪುರ ಡಿಐಜಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ಪ್ರತಿಪಕ್ಷಗಳ ತೀವ್ರ ವಿರೋಧ:
ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಅವರು ಸಹಾರನ್ಪುರಕ್ಕೆ ಭೇಟಿ ನೀಡಲು ಯತ್ನಿಸಿದಾಗ ತಮ್ಮನ್ನು ಕೈರಾನಾದಲ್ಲಿ ಗೃಹಬಂಧನದಲ್ಲಿಡಲಾಗಿತ್ತು ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಕಾರ್ಯಾಚರಣೆಯನ್ನು ಖಂಡಿಸಿದ್ದು, ಈ ಪ್ರಕರಣದಲ್ಲಿ ‘ವಕ್ಫ್ ಮಂಡಳಿ’ಯನ್ನು ಭಾಗಿ ಮಾಡಲಾಗಿಲ್ಲ, ಇದನ್ನು ಕಾನೂನಾತ್ಮಕವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ. ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಭಾರಿ ಪ್ರಮಾಣದ ಪಿಎಸಿ ಮತ್ತು ಆರ್ಎಎಫ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆಯೂ ತೀವ್ರ ನಿಗಾ ಇಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




