AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂದೇಶಖಾಲಿ ಪ್ರಕರಣ: ಸಿಬಿಐ ತನಿಖೆ ವಿರೋಧಿಸಿ ಸುಪ್ರೀಂಕೋರ್ಟ್ ಮೊರೆಬಿದ್ದ ಟಿಎಂಸಿ ಸರ್ಕಾರ

West Bengal Govt Moves to SC against CBI probe in Sandeshkhali case: ಪಶ್ಚಿಮ ಬಂಗಾಳದ ಸಂದೇಶ್​ಖಾಲಿಯಲ್ಲಿ ಲೈಂಗಿಕ ಹಲ್ಲೆ, ಭೂ ಅಕ್ರಮ ಆಗಿದೆ ಎನ್ನುವ ಆರೋಪದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ವಹಿಸಿದ ಕಲ್ಕತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಂಗಾಳ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಹಾಕಿದೆ. ಸಂದೇಶ್​ಖಾಲಿ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ವಾಸ್ತವಾಂಶವನ್ನು ಗ್ರಹಿಸಲು ಹೈಕೋರ್ಟ್ ನ್ಯಾಯಾಧೀಶರು ವಿಫಲರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಈ ಅರ್ಜಿಯಲ್ಲಿ ವಾದಿಸಿದೆ. ಏಪ್ರಿಲ್ 29, ಸೋಮವಾರ ಸುಪ್ರೀಂ ನ್ಯಾಯಪೀಠ ಈ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಸಂದೇಶಖಾಲಿ ಪ್ರಕರಣ: ಸಿಬಿಐ ತನಿಖೆ ವಿರೋಧಿಸಿ ಸುಪ್ರೀಂಕೋರ್ಟ್ ಮೊರೆಬಿದ್ದ ಟಿಎಂಸಿ ಸರ್ಕಾರ
ಸಿಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 26, 2024 | 6:17 PM

Share

ನವದೆಹಲಿ, ಏಪ್ರಿಲ್ 26: ಪಶ್ಚಿಮ ಬಂಗಾಳದ ಸಂದೇಶ್​ಖಾಲಿ (Sandeshkhali) ಪ್ರದೇಶದಲ್ಲಿ ಲೈಂಗಿಕ ಹಲ್ಲೆ ಮತ್ತು ಭೂಕಬಳಿಕೆ (land grabbing) ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದೆ. ಏಪ್ರಿಲ್ 29 ಸೋಮವಾರದಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯ್ ಮತ್ತು ಸಂದೀಪ್ ಮೆಹ್ತಾ ಅವರಿರುವ ಸುಪ್ರೀಂ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ. ಸಂದೇಶ್​ಖಾಲಿ ಪ್ರಕರಣದಲ್ಲಿ ಮಾಡಲಾಗಿರುವ ಆರೋಪಗಳ ಹಿಂದೆ ರಾಜಕೀಯ ಸಂಚು ಇರುವುದನ್ನು ಗುರುತಿಸಲು ಉಚ್ಚ ನ್ಯಾಯಾಲಯ ವಿಫಲವಾಗಿದೆ. ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಬಹಳಷ್ಟು ಕ್ರಮಗಳನ್ನು ಕೈಗೊಂಡಿರುವ ಸಂಗತಿಯನ್ನೂ ಕೋರ್ಟ್ ಅಲಕ್ಷಿಸಿದೆ. ಸಿಬಿಐಗೆ ತನಿಖೆಯನ್ನು ವರ್ಗಾಯಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂಬುದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಾದವಾಗಿದೆ.

ಅಷ್ಟೇ ಅಲ್ಲ, ಸಂದೇಶ್​ಖಾಲಿ ಪ್ರಕರಣದಲ್ಲಿ ತನಿಖೆಯ ವರದಿಯನ್ನು ನ್ಯಾಯಾಲಯವು ಸಿಬಿಐ ಬಳಿ ಕೇಳಿದೆ. ಇದರಿಂದ ಇಡೀ ರಾಜ್ಯದ ಆಡಳಿತ ವ್ಯವಸ್ಥೆಯ ಬಗ್ಗೆ ಅನುಮಾನ ಹುಟ್ಟಿಸುವಂತೆ ಮಾಡುತ್ತದೆ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸೂರತ್​ನಲ್ಲಿ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ, ತನ್ನ ಅಭ್ಯರ್ಥಿಯನ್ನು ಉಚ್ಛಾಟಿಸಿದ ಕಾಂಗ್ರೆಸ್​

ಕಲ್ಕತ್ತಾ ಹೈಕೋರ್ಟ್ ಏಪ್ರಿಲ್ 10ರಂದು ನ್ಯಾಯಾಲಯ ಕಣ್ಗಾವಲಿನಲ್ಲಿ ತನಿಖೆ ನಡೆಸಬೇಕು ಎಂದು ಸಿಬಿಐಗೆ ಸೂಚಿಸಿತ್ತು. ಸಂದೇಶ್​ಖಾಲಿಯಲ್ಲಿ ಭೂಕಬಳಿಕೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯವಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತಿ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ ಎಂದಿತ್ತು ಹೈಕೋರ್ಟ್.

ಹಾಗೆಯೇ, ಸಂದೇಶ್​ಖಾಲಿಯಲ್ಲಿ ಮೀನು ಸಾಕಾಣಿಕೆಗೆ ಕೊಳ ನಿರ್ಮಿಸಲು ಅಕ್ರಮವಾಗಿ ಕೃಷಿ ಭೂಮಿ ಬಳಸಲಾಗಿದೆ ಎನ್ನುವ ಆರೋಪ ಇದೆ. ಅದರ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಸಿಬಿಐಗೆ ಕೋರ್ಟ್ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನಲ್ಲಿ ಮೊದಲು ಹಕ್ಕು, ಮೋದಿ ಹೇಳಿದ್ದು ಸತ್ಯ; ಸಾಕ್ಷ್ಯ ಕೊಟ್ಟ ಬಿಜೆಪಿ

ಸಿಬಿಐನಿಂದ ಮೊದಲ ಕೇಸ್ ದಾಖಲು

ಸಂದೇಶ್​ಖಾಲಿ ಪ್ರಕರಣದಲ್ಲಿ ಸಿಬಿಐ ಮೊದಲ ಕೇಸ್ ದಾಖಲಿಸಿದ್ದು, ಐವರು ಪ್ರಭಾವಿ ವ್ಯಕ್ತಿಗಳ ವಿರುದ್ಧ ಎಫ್ಐಅರ್ ಹಾಕಿದೆ. ಭೂ ವಿವಾದವೊಂದರಲ್ಲಿ ಪ್ರಭಾವಿ ವ್ಯಕ್ತಿಗಳು ಒಂದು ಕುಟುಂಬದ ಮಹಿಳೆಯರ ಮೇಲೆ ಲೈಂಗಿಕ ಹಲ್ಲೆ ಎಸಗಲಾಗಿದೆ ಎನ್ನಲಾದ ಘಟನೆ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿದೆ. ಐವರು ಆರೋಪಿಗಳು ಮತ್ತು ಸಂತ್ರಸ್ತರು ಯಾರು ಎಂದು ಬಹಿರಂಗಪಡಿಸಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ