AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಮಿಸಿ ಅಪ್ಪಾ, 50 ಬಾರಿ ಪ್ರಯತ್ನ ಪಟ್ರೂ ಸರ್ಕಾರಿ ಕೆಲಸ ಸಿಗ್ಲಿಲ್ಲ, ಚಿನ್ನದ ಪದಕ ವಿಜೇತ ಯುವಕ ಆತ್ಮಹತ್ಯೆ

ಸರ್ಕಾರಿ ನೌಕರಿ ಸಿಗದೆ 50 ಬಾರಿ ವಿಫಲನಾದ ಬಿಟೆಕ್ ಚಿನ್ನದ ಪದಕ ವಿಜೇತ ಯುವಕ ಕಾನ್ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದುರಂತ ಯುವಜನತೆಯ ಮಾನಸಿಕ ಆರೋಗ್ಯ ಬಿಕ್ಕಟ್ಟು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅತಿಯಾದ ಒತ್ತಡವನ್ನು ಎತ್ತಿ ತೋರಿಸುತ್ತದೆ. ಉದ್ಯೋಗಾವಕಾಶಗಳ ಕೊರತೆ ಮತ್ತು ಸಾಮಾಜಿಕ ನಿರೀಕ್ಷೆಗಳು ಯುವಕರನ್ನು ಹೇಗೆ ಸಾವಿನತ್ತ ತಳ್ಳುತ್ತಿವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ.

ಕ್ಷಮಿಸಿ ಅಪ್ಪಾ, 50 ಬಾರಿ ಪ್ರಯತ್ನ ಪಟ್ರೂ ಸರ್ಕಾರಿ ಕೆಲಸ ಸಿಗ್ಲಿಲ್ಲ, ಚಿನ್ನದ ಪದಕ ವಿಜೇತ ಯುವಕ ಆತ್ಮಹತ್ಯೆ
ಯುವಕ ಸಾವು
ನಯನಾ ರಾಜೀವ್
| Edited By: |

Updated on:Jul 20, 2026 | 3:08 PM

Share

ಕಾನ್ಪುರ, ಜುಲೈ 20: ಇತ್ತೀಚಿನ ದಿನಗಳಲ್ಲಿ ಇದ್ದು ಸಾಧಿಸುವುದಕ್ಕಿಂತ ಹೇಡಿಯಂತೆ ಸಾಯುವ ದಾರಿಯನ್ನು ಯುವಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಬೇಸರದ ಸಂಗತಿ. ಬಿಟೆಕ್​ನಲ್ಲಿ ಚಿನ್ನದ ಪದಕ ಗೆದ್ದು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದ ಯುವಕ ಈಗ ಸರ್ಕಾರಿ ಕೆಲಸ (Government Job)ಸಿಗಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮೃತನನ್ನು 23 ವರ್ಷದ ಆನಂದ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಾನ್ಪುರದ ಪ್ರಸಿದ್ಧ ಪ್ರಣವೀರ್ ಸಿಂಗ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ 2024ನೇ ಸಾಲಿನ ಬಿಟೆಕ್ ವಿಭಾಗದಲ್ಲಿ ಟಾಪರ್ ಆಗಿದ್ದ ಹಾಗೂ ಇಡೀ ಉತ್ತರ ಪ್ರದೇಶದಕ್ಕೆ 3ನೇ ರ‍್ಯಾಂಕ್ ಗಳಿಸಿದ್ದ. ಕಾಲೇಜು ಘಟಿಕೋತ್ಸವದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರ ಕೈಯಿಂದಲೇ ಈತ ಚಿನ್ನದ ಪದಕ ಪಡೆದುಕೊಂಡಿದ್ದ.

ನನ್ನನ್ನು ಕ್ಷಮಿಸಿ ಅಪ್ಪಾ: ಡೆತ್​ ನೋಟ್​ನಲ್ಲಿ ಏನಿತ್ತು?

ಗೋವಿಂದ್ ನಗರದಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ಆನಂದ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರು ಅಣ್ಣನ ಮದುವೆ ಮಾತುಕತೆಗಾಗಿ ಬಿಹಾರದಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ 5 ಸಾಲುಗಳ ಡೆತ್ ನೋಟ್ ಸಿಕ್ಕಿದೆ. ಕ್ಷಮಿಸಿ ಅಪ್ಪಾ, ನಾನು ಸರ್ಕಾರಿ ಕೆಲಸ ಪಡೆಯಲು ಸುಮಾರು 50 ಬಾರಿ ಪರೀಕ್ಷೆ ಬರೆದು ಪ್ರಯತ್ನಿಸಿದೆ, ಆದರೆ ನನಗೆ ಯಶಸ್ಸು ಸಿಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಬರೆದಿದ್ದಾನೆ.

ನಿವೃತ್ತ ಉದ್ಯೋಗಿಯಾಗಿರುವ ಆನಂದ್ ತಂದೆ ರಾಜ್‌ಕುಮಾರ್ ಕಣ್ಣೀರಿಡುತ್ತಾ ತಮ್ಮ ಮಗನ ಶ್ರಮವನ್ನು ಹಂಚಿಕೊಂಡಿದ್ದಾರೆ. ಬಿಟೆಕ್ ಪದವಿ ಮುಗಿಸಿದ ನಂತರ ಆನಂದ್ ‘ಪವರ್ ಗ್ರಿಡ್’ ಸಂಸ್ಥೆಯಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದ್ದ. ನಂತರ ರೈಲ್ವೇಸ್, ಎಸ್‌ಎಸ್‌ಸಿ (SSC), ಬ್ಯಾಂಕಿಂಗ್ ಮತ್ತು ಶಿಕ್ಷಣ ಇಲಾಖೆಯ ಸರಣಿ ನೇಮಕಾತಿ ಪರೀಕ್ಷೆಗಳಿಗೆ ಹಗಲಿರುಳು ಸಿದ್ಧತೆ ನಡೆಸಿದ್ದ. 50 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದರೂ ಹುದ್ದೆ ಕೈಸೇರದಿದ್ದಕ್ಕೆ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ ಮತ್ತು ಯುವಜನತೆಯ ಕಳವಳ

ಖಾಸಗಿ ಕಾಲೇಜಿನಲ್ಲಿ ಟಾಪರ್ ಆಗಿ, ರಾಜ್ಯಪಾಲರಿಂದಲೇ ಪ್ರಶಸ್ತಿ ಪಡೆದಿದ್ದರೂ, ಸರ್ಕಾರಿ ಉದ್ಯೋಗಗಳ ಮೇಲಿನ ವಿಪರೀತ ಕ್ರೇಜ್ ಮತ್ತು ಸೀಮಿತ ಹುದ್ದೆಗಳಿಂದಾಗಿ ಯುವಕರು ತೀವ್ರ ನಿರಾಶೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಸೋರಿಕೆ, ಪರೀಕ್ಷೆಗಳ ಫಲಿತಾಂಶ ವಿಳಂಬ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಅಡೆತಡೆಗಳು ಲಕ್ಷಾಂತರ ನಿರುದ್ಯೋಗಿ ಯುವಕರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.

ಶಿಕ್ಷಣ ತಜ್ಞರ ಪ್ರಕಾರ, ಪರೀಕ್ಷೆಯ ಸೋಲು ಅಥವಾ ಉದ್ಯೋಗ ಸಿಗದಿರುವುದು ಜೀವನದ ಅಂತ್ಯವಲ್ಲ. ಯುವಕರು ಕೇವಲ ಸರ್ಕಾರಿ ಕೆಲಸದ ಮೇಲಷ್ಟೇ ಅವಲಂಬಿತರಾಗದೆ, ಖಾಸಗಿ ವಲಯ ಹಾಗೂ ಕೌಶಲ್ಯಾಧಾರಿತ ಕ್ಷೇತ್ರಗಳತ್ತ ಗಮನಹರಿಸಬೇಕು ಮತ್ತು ಖಿನ್ನತೆ ಉಂಟಾದಾಗ ತಕ್ಷಣವೇ ಮಾನಸಿಕ ತಜ್ಞರ ಅಥವಾ ಕುಟುಂಬದವರ ನೆರವು ಪಡೆಯಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:04 pm, Mon, 20 July 26

Follow Us