ತಮಿಳುನಾಡಿನ 50ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ; ವಿಜಯ್ ಸರ್ಕಾರದಿಂದ ಹೊಸ ನಿಯಮ
ತಮಿಳುನಾಡಿನ ದೇವಸ್ಥಾನಗಳ ಪವಿತ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಅನಧಿಕೃತ ಫೋಟೋಗ್ರಫಿ ಹಾಗೂ ಸೋಷಿಯಲ್ ಮೀಡಿಯಾ ರೀಲ್ಸ್ಗಳನ್ನು ತಡೆಯಲು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ರಾಜ್ಯದ 52 ಪ್ರಮುಖ ದೇವಾಲಯಗಳಲ್ಲಿ ಸ್ಮಾರ್ಟ್ಫೋನ್ಗಳ ಬಳಕೆಯನ್ನು ನಿಷೇಧಿಸಿದೆ. ಮದ್ರಾಸ್ ಹೈಕೋರ್ಟ್ನ ನಿರ್ದೇಶನಗಳ ಪ್ರಕಾರ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಈ ನಿಯಮವನ್ನು ಜಾರಿಗೆ ತಂದಿದೆ. ದೇವಾಲಯದೊಳಗೆ ದೇವರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುವುದು ಮತ್ತು ಆಚರಣೆಗಳನ್ನು ರೆಕಾರ್ಡ್ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ವಿಐಪಿಗಳು, ಸೆಲೆಬ್ರಿಟಿಗಳು ಅಥವಾ ಸಿನಿಮಾ ನಟರ ಫೋಟೋ ಅಥವಾ ವಿಡಿಯೋ ಕೂಡ ತೆಗೆಯಲು ಅನುಮತಿಯಿಲ್ಲ.

ಚೆನ್ನೈ, ಸೆಪ್ಟೆಂಬರ್ 2: ತಮಿಳುನಾಡಿನಲ್ಲಿ ಇರುವ 52 ಪ್ರಮುಖ ದೇವಾಲಯಗಳ ಒಳಗೆ ಸ್ಮಾರ್ಟ್ಫೋನ್ಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಬಳಸುವುದನ್ನು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ನಿಷೇಧಿಸಿದೆ. ಈ ಹೊಸ ನಿಯಮಗಳು ಮಂಗಳವಾರದಿಂದ ಜಾರಿಗೆ ಬಂದಿವೆ. ಸ್ಮಾರ್ಟ್ಫೋನ್ ತರುವ ಭಕ್ತರು ಅವುಗಳನ್ನು ನಿಗದಿತ ಕೌಂಟರ್ಗಳಲ್ಲಿ ಜಮಾ ಮಾಡಿ, ಪ್ರತಿ ಫೋನ್ಗೆ 5 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ, ಕ್ಯಾಮೆರಾ ಇಲ್ಲದ ಮೊಬೈಲ್ ಫೋನ್ಗಳನ್ನು ದೇವಾಲಯದ ಒಳಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
5 ರೂಪಾಯಿ ಠೇವಣಿ ಶುಲ್ಕ ಮತ್ತು ಟೋಕನ್:
ತಮಿಳುನಾಡಿನ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸ್ಮಾರ್ಟ್ಫೋನ್ಗಳನ್ನು ಪ್ರವೇಶ ದ್ವಾರದಲ್ಲಿರುವ ವಿಶೇಷ ಕೌಂಟರ್ಗಳಲ್ಲಿ ಜಮಾ ಮಾಡಬೇಕಾಗುತ್ತದೆ. ಪ್ರತಿ ಮೊಬೈಲ್ಗೆ 5 ರೂ. ಶುಲ್ಕ ವಿಧಿಸಲಾಗುತ್ತದೆ. ಫೋನ್ ಜಮಾ ಮಾಡಿದ ನಂತರ ಭಕ್ತರಿಗೆ ರಸೀದಿ ಅಥವಾ ಟೋಕನ್ ನೀಡಲಾಗುತ್ತಿದ್ದು, ದರ್ಶನದ ನಂತರ ಅದನ್ನು ತೋರಿಸಿ ತಮ್ಮ ಮೊಬೈಲ್ ಹಿಂಪಡೆಯಬಹುದು. ಕ್ಯಾಮೆರಾ ಆಪ್ಷನ್ ಇಲ್ಲದ ಕೀಪ್ಯಾಡ್ ಫೋನ್ಗಳನ್ನು ದೇವಸ್ಥಾನದೊಳಗೆ ತೆಗೆದುಕೊಂಡು ಹೋಗಬಹುದು.
ಇದನ್ನೂ ಓದಿ: ತಮಿಳುನಾಡು ಮೈತ್ರಿಕೂಟದಲ್ಲಿ ಪಿಎಂ ಗಾದಿ ಜಟಾಪಟಿ, ಸಿಎಂ ವಿಜಯ್ ಪರ ಟಿವಿಕೆ ಬ್ಯಾಟಿಂಗ್, ಕಾಂಗ್ರೆಸ್ನಿಂದ ರಾಜೀನಾಮೆ ಅಸ್ತ್ರ
ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಕಾರಣ:
ದೇವಸ್ಥಾನದ ಆವರಣದಲ್ಲಿ ಭಕ್ತರು, ವಿಶೇಷವಾಗಿ ಯುವಕರು, ಸೆಲ್ಫಿ, ವಿಡಿಯೋ ಮತ್ತು ಸೋಷಿಯಲ್ ಮೀಡಿಯಾ ರೀಲ್ಸ್ಗಳನ್ನು ಮಾಡುವುದರಿಂದ ದೇವಸ್ಥಾನದ ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವಸ್ಥಾನಗಳಲ್ಲಿ ಸಂಗ್ರಹಿಸುವ ಈ 5 ರೂ. ಶುಲ್ಕವು ಸರ್ಕಾರದ ಆದಾಯಕ್ಕಲ್ಲ, ಬದಲಾಗಿ ಮೊಬೈಲ್ ರಕ್ಷಣೆಗಾಗಿ ಸಿಬ್ಬಂದಿ ನೇಮಕ, ಲಾಕರ್ ವ್ಯವಸ್ಥೆ ಮತ್ತು ಭದ್ರತಾ ಮೂಲಸೌಕರ್ಯದ ವೆಚ್ಚವನ್ನು ಸರಿದೂಗಿಸಲು ಬಳಸಲಾಗುತ್ತದೆ.
ಯಾವೆಲ್ಲ ಪ್ರಮುಖ ದೇವಸ್ಥಾನಗಳಲ್ಲಿ ನಿಷೇಧ?:
ಮಧುರೈ ಮೀನಾಕ್ಷಿ ಸುಂದರೇಶ್ವರರ್ ದೇವಾಲಯ, ತಂಜಾವೂರಿನ ಬೃಹದೀಶ್ವರ ದೇವಾಲಯ, ಕಾಂಚಿಪುರಂನ ಕಾಮಾಕ್ಷಿ ಅಮ್ಮನ್ ಮತ್ತು ವರದರಾಜ ಪೆರುಮಾಳ್ ದೇವಾಲಯ, ಶ್ರೀರಂಗಂ ರಂಗನಾಥಸ್ವಾಮಿ ದೇವಾಲಯ, ಪಳನಿ ದಂಡಾಯುಧಪಾಣಿ ದೇವಾಲಯ, ಮತ್ತು ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯ ಸೇರಿದಂತೆ 52 ಪ್ರಸಿದ್ಧ ದೇವಾಲಯಗಳಲ್ಲಿ ಈ ನಿಯಮ ಜಾರಿಗೆ ಬಂದಿದೆ.
ಇದನ್ನೂ ಓದಿ: ಡಿಎಂಕೆ ಅಧಿಕಾರಾವಧಿಯಲ್ಲಿ ರೈತರು, ಶಿಕ್ಷಕರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆಯಲು ಸಿಎಂ ವಿಜಯ್ ನಿರ್ಧಾರ
ವಿಐಪಿಗಳೂ ಫೋಟೋ ತೆಗೆಯುವಂತಿಲ್ಲ:
ದೇವಸ್ಥಾನದಲ್ಲಿ ದೇವರ ವಿಗ್ರಹಗಳು ಮತ್ತು ಪೂಜಾ ಕೈಂಕರ್ಯಗಳ ವಿಡಿಯೋ ಅಥವಾ ಫೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಐಪಿಗಳು, ಸಾರ್ವಜನಿಕ ಗಣ್ಯರು ಅಥವಾ ಚಲನಚಿತ್ರ ತಾರೆಯರ ಫೋಟೋ ತೆಗೆಯುವುದಕ್ಕೂ ಯಾವುದೇ ರೀತಿಯ ಅನುಮತಿ ನೀಡಬಾರದು ಎಂದು ಸರ್ಕಾರ ಸೂಚಿಸಿದೆ. ಈ ಬಗ್ಗೆ ದೇವಾಲಯದ ಆವರಣ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಹಲವು ಭಾಷೆಗಳ ಮಾಹಿತಿ ಫಲಕಗಳನ್ನು ಹಾಕಲಾಗಿದ್ದು, ಸ್ಪೀಕರ್ಗಳ ಮೂಲಕವೂ ಭಕ್ತರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಡಿಸೆಂಬರ್ 2, 2022ರಂದು ನೀಡಿದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ತಿರುಚೆಂದೂರಿನ ಅರುಳ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಫೋನ್ ಬಳಕೆಗೆ ತಡೆ ಕೋರಿ ಸೀತಾರಾಮನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




