ಪ್ರತಿ ಮತವೂ ಅಮೂಲ್ಯ: ತಿರುಪ್ಪತ್ತೂರಿನಲ್ಲಿ ಒಂದೇ ಒಂದು ಮತದಿಂದ ಡಿಎಂಕೆ ಸಚಿವರನ್ನು ಸೋಲಿಸಿದ ಶ್ರೀನಿವಾಸ ಸೇತುಪತಿ
Tamil Nadu Assembly election results 2026: ತಮಿಳುನಾಡಿನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಕೇವಲ ಒಂದೇ ಒಂದು ಮತದ ಅಂತರದಿಂದ ನಟ ವಿಜಯ್ ಅವರ ಟಿವಿಕೆ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ವಿರುದ್ಧ ಸೋತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತದ ಮಹತ್ವವನ್ನು ಈ ಫಲಿತಾಂಶ ಎತ್ತಿ ತೋರಿಸುತ್ತದೆ. ನಿಮ್ಮ ಒಂದು ಮತವೂ ನಿರ್ಣಾಯಕವಾಗಬಲ್ಲದು ಎಂಬ ಸಂದೇಶವನ್ನು ತಿರುಪ್ಪತ್ತೂರು ಚುನಾವಣೆ ಸಾರಿದೆ.

ಚೆನ್ನೈ, ಮೇ 05: ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ತಮಿಳುನಾಡಿ(Tamil Nadu)ನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶವು ಒಂದು ಜೀವಂತ ಸಾಕ್ಷಿಯಾಗಿದೆ. ದಶಕಗಳ ಕಾಲದ ರಾಜಕೀಯ ಅನುಭವವಿರುವ ಡಿಎಂಕೆ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.
ಉಸಿರು ಬಿಗಿಹಿಡಿಯುವಂತಿದ್ದ ಮತ ಎಣಿಕೆ ಮತ ಎಣಿಕೆಯ ಆರಂಭದಿಂದಲೂ ಪೆರಿಯಕರುಪ್ಪನ್ ಮತ್ತು ಸೀನಿವಾಸ ಸೇತುಪತಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪ್ರತಿ ಸುತ್ತಿನಲ್ಲೂ ಮುನ್ನಡೆಯು ಕ್ಷಣಕ್ಷಣಕ್ಕೂ ಬದಲಾಗುತ್ತಿತ್ತು. ಅಂತಿಮ ಸುತ್ತಿನ ಎಣಿಕೆ ಮುಗಿದಾಗ ಇಬ್ಬರ ನಡುವಿನ ವ್ಯತ್ಯಾಸ ಕೇವಲ ಒಂದು ಮತವಾಗಿತ್ತು. ಮರು ಎಣಿಕೆಯ ನಂತರವೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ, ಸೀನಿವಾಸ ಸೇತುಪತಿ ಅವರನ್ನು ವಿಜೇತರೆಂದು ಘೋಷಿಸಲಾಯಿತು.
ಟಿವಿಕೆಯ ಚೊಚ್ಚಲ ಚುನಾವಣೆಯಲ್ಲಿ ಐತಿಹಾಸಿಕ ಜಯ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಇದು ಮೊದಲ ಚುನಾವಣೆಯಾಗಿದ್ದು, ಆಡಳಿತಾರೂಢ ಡಿಎಂಕೆಯ ಪ್ರಭಾವಿ ಸಚಿವರನ್ನು ಸೋಲಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಯುವ ನಾಯಕ ಶ್ರೀನಿವಾಸ ಸೇತುಪತಿ ಅವರ ಈ ‘ಜಾಕ್ಪಾಟ್’ ಗೆಲುವು ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದೆ.
ಮತ್ತಷ್ಟು ಓದಿ: ತಮಿಳುನಾಡು ಚುನಾವಣೆ ಫಲಿತಾಂಶಕ್ಕೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ವಿಜಯ್
ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಮತ್ತು ನೈಜ ಮತದಾರರ ಪಾಲ್ಗೊಳ್ಳುವಿಕೆ ಎಷ್ಟು ಮುಖ್ಯ ಎಂಬುದನ್ನು ಈ ಫಲಿತಾಂಶ ತೋರಿಸುತ್ತದೆ. ಒಂದು ಮತದ ಮೌಲ್ಯ ಎಷ್ಟಿರುತ್ತದೆ ಎಂಬುದಕ್ಕೆ ಈ ಅಂತರವೇ ಉತ್ತರವಾಗಿದೆ. ಇತ್ತೀಚೆಗೆ ಜಾರಿಯಾದ ವಿಶೇಷ ತೀವ್ರ ಪರಿಷ್ಕರಣೆಯ (SIR) ನಂತರದ ಪಾರದರ್ಶಕ ವ್ಯವಸ್ಥೆಯು ಇಂತಹ ಅತ್ಯಂತ ನಿಖರ ಮತ್ತು ಆಶ್ಚರ್ಯಕರ ಫಲಿತಾಂಶಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸೋಲು ಡಿಎಂಕೆ ಪಾಲಿಗೆ ಆಘಾತಕಾರಿಯಾಗಿದ್ದರೂ, ಪ್ರಜಾಪ್ರಭುತ್ವದ ಶಕ್ತಿಯನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. ನನ್ನ ಒಂದು ಮತದಿಂದ ಏನಾಗಲಿದೆ? ಎಂದು ಭಾವಿಸುವ ಪ್ರತಿಯೊಬ್ಬ ಮತದಾರನಿಗೂ ತಿರುಪ್ಪತ್ತೂರಿನ ಈ ಫಲಿತಾಂಶವು ದೊಡ್ಡ ಪಾಠವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




