Coal Scam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ದಂಪತಿಗೆ ಇ.ಡಿಯಿಂದ ಸಮನ್ಸ್ ಜಾರಿ

| Updated By: ಸುಷ್ಮಾ ಚಕ್ರೆ

Updated on: Aug 28, 2021 | 2:11 PM

ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಸಂಸದರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿಗೆ ಇ.ಡಿ ಸಮನ್ಸ್ ಜಾರಿ ಮಾಡಿದೆ.

Coal Scam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ದಂಪತಿಗೆ ಇ.ಡಿಯಿಂದ ಸಮನ್ಸ್ ಜಾರಿ
ಅಭಿಷೇಕ್​ ಬ್ಯಾನರ್ಜಿ
Follow us on

ಕೊಲ್ಕತ್ತಾ: ಕಲ್ಲಿದ್ದಲು ಹಗರಣದಲ್ಲಿ (West Bengal Coal Scam) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹಾಗೂ ಅವರ ಆಪ್ತರ ಹೆಸರು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಸಂಸದರೂ ಆಗಿರುವ ಅಭಿಷೇಕ್ ಬ್ಯಾನರ್ಜಿ (Abhishek Banerjee) ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ (Rujira Banerjee) ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಇವರಿಬ್ಬರೂ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿರುವುದರಿಂದ ಅಭಿಷೇಕ್ ಬ್ಯಾನರ್ಜಿಗೆ ಸೆ. 6ರಂದು ಹಾಗೂ ಅವರ ಪತ್ನಿ ರುಜಿರಾಗೆ ಸೆ. 1ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ (ED)  ಸಮನ್ಸ್ ನೀಡಿದೆ.

ಈ ಹಿಂದೆ ಕಲ್ಲಿದ್ದಲು ಕಳ್ಳಸಾಗಣೆ ಹಗರಣದಲ್ಲಿ ಸಿಬಿಐ ಕೂಡ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾಗೆ ಸಮನ್ಸ್​ ನೀಡಿ ವಿಚಾರಣೆ ನಡೆಸಿತ್ತು. ಕಲ್ಲಿದ್ದಲು ಮಾಫಿಯಾದಿಂದ ಅಭಿಷೇಕ್ ಬ್ಯಾನರ್ಜಿ ಕುಟುಂಬಕ್ಕೆ ಅಕ್ರಮವಾಗಿ ಹಣ ಪೂರೈಕೆಯಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಕಳೆದ ವರ್ಷ ಈಸ್ಟರ್ನ್ ಕೋಲ್​ಫೀಲ್ಡ್ ಕಂಪನಿಗೆ ಸೇರಿದ ಕುನುಸ್ಟೋರಿಯಾ ಮತ್ತು ಕಜೋರಿಯಾ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಸ್ ದಾಖಲಿಸಿತ್ತು. ಈ ಕಲ್ಲಿದ್ದಲು ಕಳ್ಳಸಾಗಾಣಿಕೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿತ್ತು. ಈ ಕಲ್ಲಿದ್ದಲು ಕಳ್ಳಸಾಗಾಣಿಕೆ ಮಾಡುತ್ತಿದ್ದರಿಂದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕುಟುಂಬ ಕಿಕ್​ಬ್ಯಾಕ್ ಪಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ದಂಪತಿಯ ಜೊತೆಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಶ್ಯಾಮ್ ಸಿಂಗ್ ಮತ್ತು ಗ್ಯಾನ್​ವಂತ್ ಸಿಂಗ್ ಅವರಿಗೂ ಇಡಿ ಸಮನ್ಸ್​ ಜಾರಿಗೊಳಿಸಿದ್ದು, ಸೆ. 8 ಮತ್ತು 9ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿರುವ ಕೆಲವು ಪ್ರಮುಖ ಕಲ್ಲಿದ್ದಲು ಗಣಿಗಳನ್ನು ರಾಜಕಾರಣಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ಕೋರ್ಟ್‌ಗೆ ವರದಿ ನೀಡಿತ್ತು. ಅಕ್ರಮ ಹಣ ವರ್ಗಾವಣೆ ಕಾಯ್ದೆಗೆ ಸಂಬಂಧಿಸಿದಂತೆ 2020ರ ನವೆಂಬರ್​ನಲ್ಲಿ ಸಿಬಿಐ ದಾಖಲಿಸಿದ್ದ ಎಫ್​ಐಆರ್​ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತ್ತು.

ಕಲ್ಲಿದ್ದಲು ಹಗರಣದಲ್ಲಿ 900 ಕೋಟಿ ರೂ. ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೈ ಸೇರಿದೆ ಎಂದು ಈ ಹಿಂದೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪವನ್ನು ಟಿಎಂಸಿ ನಾಯಕರು ತಳ್ಳಿ ಹಾಕಿದ್ದರು.

ಇದನ್ನೂ ಓದಿ: ತ್ರಿಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಹಿಂದೆ ಅಮಿತ್ ಶಾ ಕೈವಾಡ; ಸಿಎಂ ಮಮತಾ ಬ್ಯಾನರ್ಜಿ ಆರೋಪ

ಕಲ್ಲಿದ್ದಲು ಹಗರಣದಲ್ಲಿ 900 ಕೋಟಿ ಹಣ ಸಿಎಂ ಮಮತಾ ಬ್ಯಾನರ್ಜಿಯವರ ಸೋದರಳಿಯನ ಕೈಸೇರಿದೆ: ಸುವೇಂದು ಅಧಿಕಾರಿ ಆರೋಪ

(TMC MP Abhishek Banerjee his Wife Rujira Banerjee Summoned By ED in Money Laundering Case Coal Smuggling)

Published On - 2:07 pm, Sat, 28 August 21