
ಲಕ್ನೋ, ಮೇ 20: “ಆಪರೇಷನ್ ಸಿಂಧೂರ್ (Operation Sindoor) ಅಡಿಯಲ್ಲಿ ಭಾರತದ ಮಿಲಿಟರಿ ಪಾಕಿಸ್ತಾನದ ಸೇನೆಯನ್ನು ಮಂಡಿಯೂರುವಂತೆ ಮಾಡಿದೆ” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಲಕ್ನೋದಲ್ಲಿ ನಡೆದ ಕೆಎನ್ಎಸ್ ಸ್ಮಾರಕ ಆಸ್ಪತ್ರೆಯ 25ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಪ್ರತೀಕಾರದ ದಾಳಿಯ ಸಮಯದಲ್ಲಿ, ಪಾಕಿಸ್ತಾನದಲ್ಲಿನ ನಾಗರಿಕರಿಗೆ ಹಾನಿಯಾಗದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಒತ್ತಿ ಹೇಳಿದರು. “ಭಾರತೀಯ ಸಶಸ್ತ್ರ ಪಡೆಗಳು ತೆಗೆದುಕೊಂಡ ಕ್ರಮಗಳು ಪಾಕಿಸ್ತಾನದ ಸೇನೆಯನ್ನು ಮಂಡಿಯೂರುವಂತೆ ಮಾಡಿವೆ. ನಮ್ಮ ಪ್ರತೀಕಾರದ ಕ್ರಮದಲ್ಲಿ ಪಾಕಿಸ್ತಾನದ ಮಿಲಿಟರಿ ಗುರಿಗಳನ್ನು ಮಾತ್ರ ಹೊಡೆಯಲಾಗಿದೆ. ಪಾಕಿಸ್ತಾನೀಯರಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸಂಪೂರ್ಣ ಕಾಳಜಿ ವಹಿಸಲಾಗಿದೆ” ಎಂದು ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.
ಇದೇ ವೇಳೆ ಸಶಸ್ತ್ರ ಪಡೆಗಳು ಮತ್ತು ಶಸ್ತ್ರಚಿಕಿತ್ಸಕರ ನಡುವಿನ ಹೋಲಿಕೆಯನ್ನು ವಿವರಿಸಿದ ರಾಜನಾಥ್ ಸಿಂಗ್, “ಒಬ್ಬ ನುರಿತ ಸರ್ಜನ್ ರೀತಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಕಾರ್ಯಾಚರಣೆಯನ್ನು ನಡೆಸಿವೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಗಡಿಯುದ್ದಕ್ಕೂ ಭಯೋತ್ಪಾದನೆಯ ಬೇರುಗಳನ್ನು ನಿಖರತೆ ಮತ್ತು ಶಿಸ್ತಿನಿಂದ ಗುರಿಯಾಗಿಸಿಕೊಂಡವು. ಒಬ್ಬ ಶಸ್ತ್ರಚಿಕಿತ್ಸಕ ತನ್ನ ಉಪಕರಣಗಳನ್ನು ರೋಗ ಇರುವಲ್ಲಿ ನಿಖರವಾಗಿ ಬಳಸುತ್ತಾನೆ. ಭಾರತೀಯ ಪಡೆಗಳು ಅದೇ ರೀತಿ ಮಾಡಿವೆ. ವೈದ್ಯರು ಆರೋಗ್ಯವನ್ನು ರಕ್ಷಿಸಿದರೆ ಸೈನಿಕರು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
Speaking at the Silver Jubilee ceremony of KN Singh Memorial Hospital in Lucknow. https://t.co/zqydYyAUzH
— Rajnath Singh (@rajnathsingh) May 20, 2025
ಇದನ್ನೂ ಓದಿ: ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಪಡೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್
ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ ಭಾರತೀಯ ಮಿಲಿಟರಿ ಕಾರ್ಯಾಚರಣೆಯ ನಂತರ ರಾಜನಾಥ್ ಸಿಂಗ್ ಅವರ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ