ಅಂದು ವಿದ್ಯಾರ್ಥಿ ನಾಯಕ, ಇಂದು ಮುಖ್ಯಮಂತ್ರಿ! ಕೇರಳ ನೂತನ ಸಿಎಂ ವಿಡಿ ಸತೀಶನ್ ರಾಜಕೀಯ ಹಾದಿಯ ಹಿನ್ನೋಟ ಇಲ್ಲಿದೆ
ಕೇರಳ ನೂತನ ಸಿಎಂ ರಾಜಕೀಯ ಹಿನ್ನೆಲೆ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ಆರು ಬಾರಿ ಶಾಸಕರಾಗಿರುವ ವಿಡಿ ಸತೀಶನ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ದಶಕಗಳ ಕಾಲದಿಂದ ಸಕ್ರಿಯ ರಾಜಕೀಯದಲ್ಲಿರುವ ಸತೀಶನ್, ತೀಕ್ಷ್ಣ ವಾಗ್ಮಿ ಹಾಗೂ ಪರಿಸರ ಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ.

ತಿರುವನಂತಪುರ, ಮೇ 14: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) 102 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ದಾಖಲಿಸಿದ 10 ದಿನಗಳ ನಂತರ ಹಿರಿಯ ನಾಯಕ ವಿಡಿ ಸತೀಶನ್ (VD Satheesan) ಕೇರಳದ (Kerala) ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಖರ ಧ್ವನಿಯಾಗಿ ಗುರುತಿಸಿಕೊಂಡಿದ್ದ ಸತೀಶನ್, ಹೈಕಮಾಂಡ್ನ ಸುದೀರ್ಘ ಚರ್ಚೆಯ ನಂತರ ಮುಖ್ಯಮಂತ್ರಿ ಗದ್ದುಗೆಗೆ ಆಯ್ಕೆಯಾಗಿದ್ದಾರೆ.
ಮುಖ್ಯಾಂಶಗಳು
- 61 ವರ್ಷದ ವಿಡಿ ಸತೀಶನ್ ಪರವೂರು ಕ್ಷೇತ್ರದಿಂದ ಸತತ ಆರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
- 2021ರಲ್ಲಿ ವಿರೋಧ ಪಕ್ಷದ ನಾಯಕರಾಗಿ ನೇಮಕ
- ಪರಿಸರವಾದಿಯಾಗಿ ಗುರುತಿಸಿಕೊಂಡಿರುವ ಸತೀಶನ್, ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಮಾಧವ್ ಗಾಡ್ಗೀಳ್ ವರದಿಯನ್ನು ಬಹಿರಂಗವಾಗಿ ಬೆಂಬಲಿಸಿದವರು.
1964ರಲ್ಲಿ ಕೇರಳದ ಕೊಚ್ಚಿಯ ನೆಟ್ಟೂರಿನಲ್ಲಿ ಜನಿಸಿದ ಸತೀಶನ್ ಅವರು ಕಾನೂನು ಪದವೀಧರರಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1996ರ ಚುನಾವಣೆಯಲ್ಲಿ ಸೋಲು ಕಂಡರೂ ಎದೆಗುಂದದ ಅವರು, ನಂತರ ಪರವೂರು ಕ್ಷೇತ್ರವನ್ನು ಕಾಂಗ್ರೆಸ್ನ ಭದ್ರಕೋಟೆಯನ್ನಾಗಿ ಪರಿವರ್ತಿಸಿದರು. ಸತತ 2001 ರಿಂದ 2026ರವರೆಗೆ ಆರು ಚುನಾವಣೆಗಳನ್ನು ಗೆದ್ದ ದಾಖಲೆ ಇವರದ್ದಾಗಿದೆ.
ವಿಧಾನಸಭೆಯ ಒಳಗೆ ಅಂಕಿಅಂಶಗಳೊಂದಿಗೆ ಎದುರಾಳಿಗಳನ್ನು ಕಟ್ಟಿಹಾಕುವ ಇವರ ಶೈಲಿ ಅಪಾರ ಜನಮನ್ನಣೆ ಗಳಿಸಿದೆ. 2006-2011ರ ನಡುವೆ ಪ್ರತಿಪಕ್ಷದ ನಾಯಕರಾಗಿದ್ದ ಉಮ್ಮನ್ ಚಾಂಡಿ ಅವರ ಅವಧಿಯಲ್ಲಿ 33 ನಿಲುವಳಿ ಸೂಚನೆಗಳನ್ನು ಮಂಡಿಸುವ ಮೂಲಕ ಸತೀಶನ್ ಇತಿಹಾಸ ನಿರ್ಮಿಸಿದ್ದರು. ಬಣ ರಾಜಕೀಯದಿಂದ ದಶಕಗಳ ಕಾಲ ಸಚಿವ ಸ್ಥಾನ ಸೇರಿದಂತೆ ಹಲವು ಅವಕಾಶಗಳಿಂದ ವಂಚಿತರಾಗಿದ್ದರೂ, ಈಗ ಕೇರಳದ ಅತ್ಯುನ್ನತ ರಾಜಕೀಯ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ಸತೀಶನ್ ಅವರ ತಾಳ್ಮೆಗೆ ಫಲ ದೊರೆತಿದೆ.
ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯ
ಸವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸತೀಶನ್, 1986-1987ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಯೂನಿಯನ್ ಅಧ್ಯಕ್ಷರಾಗಿ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್ ದೇವರನಾಡಿನ ನೂತನ ಮುಖ್ಯಮಂತ್ರಿ
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಉಪಾಧ್ಯಕ್ಷರಾಗಿ ಮತ್ತು ಎಐಸಿಸಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2021ರಲ್ಲಿ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




