AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣ ಸಂಸ್ಥೆಯ ಗಮನ ಅಂಕದ ಮೇಲೆ ಮಾತ್ರ ಇರುತ್ತದೆ; ತೀರಾ ಕೆಲವೊಮ್ಮೆ ಮಕ್ಕಳ ಭಾಷೆ ಬಗ್ಗೆ ಕಾಳಜಿ ತೋರುತ್ತಾರೆ

ಕರೆಸ್ಪಾಂಡೆನ್ಸ್ ಕಲಿಕೆ ಮುಗಿಸಿ ಬಂದ ಶಿಕ್ಷಕರು, ಪ್ರಯತ್ನ ಇಲ್ಲದ ಶಿಕ್ಷಕರು.. ಅವರಿಂದ ಮಕ್ಕಳಿಗೂ ತೊಂದರೆ ಆಗುತ್ತಿದೆ. ಹಳೆಗನ್ನಡ ಅಥವಾ ಹೊಸಗನ್ನಡವೇ ಆಗಿರಲಿ ಅದನ್ನು ಪುಸ್ತಕ ಹಿಡಿದು ಓದುತ್ತಾ ಹೋದರೆ ನಿದ್ದೆ ಬರುವಂತೆ ಆಗುತ್ತದೆ.

ಶಿಕ್ಷಣ ಸಂಸ್ಥೆಯ ಗಮನ ಅಂಕದ ಮೇಲೆ ಮಾತ್ರ ಇರುತ್ತದೆ; ತೀರಾ ಕೆಲವೊಮ್ಮೆ ಮಕ್ಕಳ ಭಾಷೆ ಬಗ್ಗೆ ಕಾಳಜಿ ತೋರುತ್ತಾರೆ
ಪ್ರಾತಿನಿಧಿಕ ಚಿತ್ರ
ganapathi bhat
|

Updated on:Jan 16, 2022 | 3:31 PM

Share

ಕನ್ನಡ ರಾಜ್ಯೋತ್ಸವ ಎಂಬುದು ಕೆಲವೆಡೆ ಒಂದು ದಿನದ ಆಚರಣೆ ಆಗಿಯೂ, ಇನ್ನು ಕೆಲವು ಕಡೆಗಳಲ್ಲಿ ನವೆಂಬರ್ ಪೂರ್ತಿ ತಿಂಗಳ ಕಾರ್ಯಕ್ರಮವಾಗಿಯೂ ಕಾಣಸಿಗುತ್ತದೆ. ಕನ್ನಡದ ಹೆಸರಿನಲ್ಲಿ ಅದ್ಧೂರಿ ಸಮಾರಂಭಗಳು, ಘೋಷಣೆ ಇತ್ಯಾದಿಗಳು ಕೇಳಿಬರುತ್ತವೆ. ಈ ಮಧ್ಯೆ, ಕನ್ನಡದ ವಿಷಯ ಬಂದಾಗ ಯಾರ್ಯಾರು ನೆನಪಾದರೂ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕರನ್ನು ಬಹುತೇಕ ಬಾರಿ ಮರೆತೇ ಬಿಡುತ್ತೇವೋ ಎಂದು ಅನಿಸುತ್ತದೆ. ಕಾಳಜಿಯಿಂದ ಕನ್ನಡ ಕಲಿಸುವವರು ಕನ್ನಡ ಶಿಕ್ಷಕರು. ಅದು ಅಆಇಈದಿಂದ ತೊಡಗಿ ಪದವಿ ತರಗತಿವರೆಗೆ ಅಥವಾ ಅದಕ್ಕಿಂತಲೂ ಮುಂದೆ. ಈ ಹಿನ್ನೆಲೆಯಲ್ಲಿ, ಕನ್ನಡ ಕಲಿಸುವವರ ಅಭಿಪ್ರಾಯವನ್ನು ಪಡೆಯುವುದು ಅಥವಾ ಅವರನ್ನು ಮಾತನಾಡಿಸುವುದು ಮುಖ್ಯ ಎಂದೆನಿಸಿ ಟಿವಿ9 ಕನ್ನಡ ಡಿಜಿಟಲ್ ಕನ್ನಡ ಇಬ್ಬರು ಶಿಕ್ಷಕರನ್ನು ಮಾತನಾಡಿಸಿದೆ.

ನವೆಂಬರ್ ತಿಂಗಳ ವಿಶೇಷವಾಗಿ ಈ ಎರಡು ಸಂದರ್ಶನಗಳು ಇರಲಿವೆ. ಈ ಮೊದಲಿನ ತಲೆಮಾರಿನ ಮಕ್ಕಳನ್ನು ಕಂಡ, ಕನ್ನಡವನ್ನು ಬಹಳ ಪ್ರೀತಿಸುವ ಹಿರಿಯ ಕನ್ನಡ ಉಪನ್ಯಾಸಕ ಚಿಕ್ಕಣ್ಣಯ್ಯ ಅವರ ಮಾತುಗಳನ್ನು ಇಲ್ಲಿ ನೀಡಲಾಗಿದೆ. ಅಂದಿನ ಮಕ್ಕಳ ಮನಸ್ಥಿತಿ, ಶಾಲೆಯಲ್ಲಿ ಕನ್ನಡ ಕಲಿಸುವ ಸವಾಲು, ಪೋಷಕರು, ಸಹಶಿಕ್ಷಕರ ನೆನಪುಗಳ ಬಗೆಗಿನ ಕೆಲವು ಪ್ರಶ್ನೆಗಳಿಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕನ್ನಡ ಕಲಿಸುವ ವಿಚಾರದಲ್ಲಿನ ಸವಾಲುಗಳೇನು? ನಾನು 96-97ನೇ ಶೈಕ್ಷಣಿಕ ವರ್ಷದಿಂದ ವೃತ್ತಿ ಆರಂಭ ಮಾಡಿದವನು. ಅಂದಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ ಮಾಧ್ಯಮ, ಪಠ್ಯಕ್ರಮ, ಪ್ರಥಮ ದ್ವಿತೀಯ ತೃತೀಯ ಭಾಷಾ ಪುಸ್ತಕಗಳು, ಹಲವು ಸ್ತರಗಳಿಂದ ಬಂದಿರುವ ವಿದ್ಯಾರ್ಥಿಗಳು, ಹಳೆಗನ್ನಡ ಮತ್ತು ಹೊಸಗನ್ನಡ, ವ್ಯಾಕರಣ, ಆಡುಭಾಷೆ ಮತ್ತು ಗ್ರಾಂಥಿಕ ಭಾಷೆ ವಿಚಾರ, ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳ ಗಿಳಿಪಾಠ ಇದೆಲ್ಲಾ ನಮಗೆ ಪಾಠ ಮಾಡುವಲ್ಲಿ ಸಮಸ್ಯೆ ಆಗಿ ಕಂಡವು. ರಾಜ್ಯ, ಕೇಂದ್ರ, ಅಂತಾರಾಷ್ಟ್ರೀಯ ಎಂಬ ಪಠ್ಯಕ್ರಮಗಳು. ಸರ್ಕಾರಿ, ಖಾಸಗಿ ಶಾಲೆ, ಅನುದಾನಿತ, ಅನುದಾನರಹಿತ ಎಂಬ ಶಾಲೆಗಳು. ಮಕ್ಕಳಿಗೆ ಭಾಷೆ ಕಲಿಸಬೇಕು ಆದರೆ, ಸೀಮಿತವಾದ ಪಠ್ಯ ಇರುತ್ತದೆ. ಭಾಷೆ ಕಲಿಸಲು ಅವಧಿ ಬೇಕು. ಸಿಗಲ್ಲ. ಶಿಕ್ಷಣ ಸಂಸ್ಥೆಯ ಗಮನ ಅಂಕದ ಮೇಲೆ ಮಾತ್ರ ಇರುತ್ತದೆ. ತೀರಾ ಕೆಲವೊಮ್ಮೆ ಮಾತ್ರ ಮಕ್ಕಳ ಭಾಷೆ ಬಗ್ಗೆ ಕಾಳಜಿ ತೋರುತ್ತಾರೆ ಇದೆಲ್ಲಾ ಸವಾಲುಗಳು.

ಮಕ್ಕಳಿಗೆ ಬರವಣಿಗೆ ಬರಬೇಕು. ಗ್ರಾಂಥಿಕ ಭಾಷೆ ಮಾತನಾಡುವ ಕಡೆ ಮಕ್ಕಳನ್ನು ಸೆಳೆಯಬೇಕು. ಅದನ್ನು ಸೀಮಿತ ಸಮಯದಲ್ಲಿ ಮಾಡಬೇಕು. ಹೀಗಾದಾಗ ಗಿಳಿಪಾಠ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಹಾಗಾದಾಗ ಸಮಯ ಹೊಂದಿಸಲು ಒಂದೆರಡು ಪಾಠ ಕಡಿಮೆ ಮಾಡಿಕೊಳ್ಳುವುದನ್ನು ನಾವು ಮಾಡಿದ್ದು ಇದೆ. ಅದರಿಂದ ಇರುವ ಪಾಠವನ್ನು ಬರವಣಿಗೆ, ಓದು, ಮಾತು ಸರಿಯಾಗಿ ಆಗುವಂತೆ ನೋಡಿಕೊಳ್ಳಬಹುದಾಗಿತ್ತು. ಎಲ್ಲಾ ಶಾಲೆಗಳಲ್ಲಿ ಹೀಗೆ ಮಾಡುವುದು ಸಾಧ್ಯವಿಲ್ಲ. ಗ್ರಾಂಥಿಕ ಭಾಷೆ ಕಡೆಗೆ ಗಮನ ವಿಚಾರವಾಗಿ ಹೇಳುವುದಿದ್ದರೆ, ಈಗ ಮಕ್ಕಳು ಗ್ರಾಂಥಿಕ, ಆಡುಭಾಷೆ ಎರಡನ್ನೂ ಸರಿದೂಗಿಸ್ತಾರೆ. ಮೊದಲಿಗಿಂತ ಉತ್ತಮವಾಗಿ ಎಂದು ಅನಿಸಿಕೆ. ಅದರಲ್ಲಿ ಬೆಳವಣಿಗೆ ಆಗಿದೆ.

ಹಳಗನ್ನಡ ಹೊಸಗನ್ನಡ ಬಗ್ಗೆ ಶಿಕ್ಷಕರಿಗೇ ಸಮಸ್ಯೆ ಇರುವುದು ಇದೆ. ಕಬ್ಬಿಣದ ಕಡಲೆ, ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು ಎಂಬಂತೆ. 95ನೇ ಇಸವಿಯಿಂದ 2000ನೇ ಇಸವಿಯ ಅವಧಿಯಲ್ಲಿ ಹಳಗನ್ನಡದ ಬಗೆಗಿನ ಅಭಿರುಚಿ ಮಕ್ಕಳಿಗೆ ಕಡಿಮೆ ಆಗುತ್ತಾ ಬಂತು ಎನ್ನಬಹುದು. ಈಗ ಹಳೆಗನ್ನಡದ ಬಗ್ಗೆ ಆಸಕ್ತಿ ಇರುವ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ ಎನ್ನಬಹುದು.

ಕರೆಸ್ಪಾಂಡೆನ್ಸ್ ಕಲಿಕೆ ಮುಗಿಸಿ ಬಂದ ಶಿಕ್ಷಕರು, ಪ್ರಯತ್ನ ಇಲ್ಲದ ಶಿಕ್ಷಕರು.. ಅವರಿಂದ ಮಕ್ಕಳಿಗೂ ತೊಂದರೆ ಆಗುತ್ತಿದೆ. ಹಳೆಗನ್ನಡ ಅಥವಾ ಹೊಸಗನ್ನಡವೇ ಆಗಿರಲಿ ಅದನ್ನು ಪುಸ್ತಕ ಹಿಡಿದು ಓದುತ್ತಾ ಹೋದರೆ ನಿದ್ದೆ ಬರುವಂತೆ ಆಗುತ್ತದೆ. ಆಂಗಿಕ ಅಭಿನಯ, ವಾಚಿಕದ ಮೂಲಕ ಚೆನ್ನಾಗಿ ಹೇಳಿದರೆ ಅರ್ಥ ಆಗುತ್ತಾ ಹೋಗುತ್ತದೆ.

ಕನ್ನಡವನ್ನು ವಿದ್ಯಾರ್ಥಿಗಳು ಕಲಿಯಲು ಬಯಸುತ್ತಾರೆಯೇ? ಅದು ಹೇಗೆ? ತೃತೀಯ ಭಾಷೆ ಕನ್ನಡದಲ್ಲಿ ಅನ್ಯಭಾಷಿಕ ವಿದ್ಯಾರ್ಥಿಗಳು ಜಾಸ್ತಿ ಇರುತ್ತಾರೆ. ಅದೂ ಒಂದು ಸವಾಲು. ಕನ್ನಡ ಇಷ್ಟಪಟ್ಟು ಕಲಿಯುವವರು ಇದ್ದರು. ಕನ್ನಡ ಮಾತೃಭಾಷೆಯ ಮಕ್ಕಳು ಅವರ ಪೋಷಕರ ಪ್ರೀತಿ ಅಭಿಮಾನವೂ ಇದ್ದಂತೆ ಕನ್ನಡ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳುತ್ತಿದ್ರು. ಕನ್ನಡ ಮನೆ ಭಾಷೆ ಅಲ್ಲದ ಮುಸ್ಲಿಂ ಮುಂತಾದ ಸಮುದಾಯದ ಮಕ್ಕಳು ಕೂಡ ಕನ್ನಡ ಕಲಿಯುತ್ತಿದ್ರು. ಅಂಕಗಳೇ ಬೇಕು ಅಂತ ಇರುವವರು ಬಹುತೇಕ ಭಾಷೆ ಆಯ್ಕೆ ಬಂದಾಗ ಹಿಂದಿ ಅಥವಾ ಸಂಸ್ಕೃತ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಲ್ಲಿ ಸ್ಕೋರ್ ಮಾಡುವುದು ಸುಲಭ. ನೂರಕ್ಕೆ ನೂರು ಅಂಕ ಬಂದಿಲ್ಲ ಅಂದ್ರೂ ಪರವಾಗಿಲ್ಲ, ಇರ್ಲಿ ಬಿಡಿ ಸರ್ ನಾವು ವಿಷಯ ತಿಳ್ಕೊಂಡು ಹೋದ್ವಲ್ಲ ಎಂದು ಕನ್ನಡ ಕಲಿತ ಒಬ್ಬಾಕೆ ಹೇಳಿದ್ದಳು. ಅದು ಇಂದಿಗೂ ನೆನಪಿದೆ.

ಸಹಶಿಕ್ಷಕರು, ಪೋಷಕರು ಕನ್ನಡ ವಿಷಯವನ್ನು ಅಥವಾ ಶಿಕ್ಷಕರನ್ನು ಹೇಗೆ ಕಾಣುತ್ತಾರೆ? ಕನ್ನಡ ಮೌಲಿಕವಾದದ್ದು ಅಂತ ಎಲ್ಲರಿಗೂ ಗೊತ್ತು. ಅರಿವು ಇತ್ತು. ಆದರೆ ಮನಸ್ಥಿತಿ ಹೇಗೆ ಅಂದರೆ, ನೀವು ಕತೆ ಹೇಳಿ ಸುಲಭ ಮಾಡ್ಕೊಳ್ತೀರಿ ಸರ್ ಕ್ಲಾಸ್​​ನ. ನೀವು ಬೇಗ ಮುಗ್ಸಿ ನಮ್ಗೆ ಕೊಡಿ ಸರ್ ಕ್ಲಾಸ್ ಅಂತ. ಇನ್ನೊಂದು ಕಡೆ, ಕೆಲವು ಸಹಶಿಕ್ಷಕರೇ ಮಕ್ಕಳ ಕನ್ನಡ ಚೆನ್ನಾಗಿಲ್ಲ ಸರ್ ಎಂದು ಹೇಳಿದ್ದೂ ಇದೆ. ಹೀಗೆ ಬೇರೆ ಬೇರೆ ಧೋರಣೆಗಳು ಇದೆ. ಅಂದೂ ಇತ್ತು. ಬಹುತೇಕ ಇಂದೂ ಇದೆ. ಕನ್ನಡ ಶಿಕ್ಷಕರ ಬಗ್ಗೆ ಲಘುವಾದ ಭಾವನೆಯೂ ಇದೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು ಅಂತ, ಬೇರೆ ವಿಷಯಗಳ ಬಗ್ಗೆ ಮ್ಯಾನೇಜ್​ಮೆಂಟ್​ಗೆ ಹೆಚ್ಚು ಗಮನ ಇರುತ್ತದೆ.

ಕನ್ನಡ ಶಿಕ್ಷಕರಿಗೆ ಗಟ್ಟಿಯಾದ ಕವಿಕುಲ ಪರಂಪರೆಯ ಅಡಿಪಾಯ ಮತ್ತು ಆಸರೆ ಇದೆ. ಇದೇ ಮುಖ್ಯ. ಅದೇ ಕಾರಣಕ್ಕೆ ಕನ್ನಡ ಶಿಕ್ಷಕರಿಗೆ ಗೌರವ, ಪಂಡಿತರು ಎಂದು ಕರೆಯುವ ಭಾವ ಇರುವುದು. ಇದು ಬಹಳಷ್ಟು ಪೋಷಕರಲ್ಲಿ ಅಂದು ಇರುತ್ತಿತ್ತು. ಅವರು ಮಕ್ಕಳ ಬಗ್ಗೆ ಮಾತನಾಡಲು ಬಂದಾಗ ಅವರ ಶಾಲೆ, ಶಿಕ್ಷಕರ ಬಗ್ಗೆ 70-80ನೇ ಇಸವಿಗೆ ಹೋಗುತ್ತಿದ್ದರು. ಭಾಷಾ ಶಿಕ್ಷಕರು ಭಾಷೆ ಜೊತೆಗೆ ಮೌಲ್ಯಗಳನ್ನು ಕಲಿಸಿಕೊಡುವವರು ಎಂಬ ಭಾವ ಇತ್ತು. ಬರವಣಿಗೆ ವಿಚಾರ ನೋಡಿ ಸರ್ ಎನ್ನುತ್ತಿದ್ದರು. ಕೆಲವರು ಸಾಹಿತ್ಯದ ಬಗ್ಗೆಯೂ ಮಾತಾಡುತ್ತಿದ್ದರು.

ಕನ್ನಡ ಕಲಿಕೆ ಮುಂದೆ ಈ ಹಂತಕ್ಕೆ ಬರಬಹುದು ಎನ್ನುವುದಾದರೆ.. ಕನ್ನಡಕ್ಕೆ ಸಮಸ್ಯೆ ಎದುರಾಗುತ್ತಿರುತ್ತವೆ ಹೊರತು ಅದು ಸಂಪೂರ್ಣ ಕುಸಿದು ಹೋಗುವುದಿಲ್ಲ. ಆರೋಗ್ಯ ಸಮಸ್ಯೆ ಆದಾಗ ಕ್ಷೀಣ ಆದಂತೆ ಆಗಬಹುದು. ಈ ಭಾವನೆ ಮೊದಲಿಗೆ ಇತ್ತು, ಅದು ಇಂದೂ ಹಾಗೇ ಇದೆ.

ಮತ್ತೊಂದು ಸಂದರ್ಶನ: ಕೆಲವು ಶಾಲೆಯಲ್ಲಿ ಕನ್ನಡ ತರಗತಿಯನ್ನು ಇಂಗ್ಲಿಷ್​ನಲ್ಲಿ ಡೆಮೊ ಕೊಡಿ ಎನ್ನುವುದೂ ಇದೆ; ಹೀಗಾದರೆ ಕನ್ನಡ ಕಲಿಕೆ ಹೇಗೆ ಸಾಧ್ಯ?

ಇದನ್ನೂ ಓದಿ: ನಟ ರಾಜ್​​ಕುಮಾರ್​ ಸಿನಿಮಾಗಳನ್ನು ನೋಡಿ ಕನ್ನಡ ಕಲಿತ ಐಪಿಎಸ್​ ಅಧಿಕಾರಿ

Published On - 6:09 pm, Tue, 30 November 21

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..