ಕೊರೆವ ಚಳಿ, ದಟ್ಟ ಮಂಜು: ಊಟಿಯಂತಾದ ಬಯಲು ಸೀಮೆ ಕೋಲಾರ
ಕೋಲಾರ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ತೀವ್ರ ಕೊರೆವ ಚಳಿ, ದಟ್ಟ ಮಂಜು ಕವಿದಿದೆ. ಸದಾ ಬಿಸಿಲಿದ್ದ ಬಯಲು ಸೀಮೆಯಲ್ಲಿ ಊಟಿ ವಾತಾವರಣ ಸೃಷ್ಟಿಯಾಗಿದ್ದು, ಜನ ಚಡಪಡಿಸುತ್ತಿದ್ದಾರೆ. ಮೈ ಕೊರೆಯುವ ಚಳಿ, ಹಿಮದಿಂದ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಿರಿಕಿರಿ ಉಂಟಾದರೂ ಜನರು ಎಂಜಾಯ್ ಮಾಡುತ್ತಿದ್ದಾರೆ.
Updated on:Dec 01, 2025 | 4:45 PM

ಬಿಸಲಿನ ತಾಪಕ್ಕೆ ಸದ್ಯ ಬಣಗೂಡುತ್ತಿದ್ದ ಬಯಲು ಸೀಮೆಯ ಜನ, ಕಳೆದ ಕೆಲವು ದಿನಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಥಂಡಿ ಮತ್ತು ಕೊರೆಯುವ ಚಳಿ ಇಬ್ಬನಿಯ ವಾತಾವರಣಕ್ಕೆ ಚಡಪಡಿಸುತ್ತಿದ್ದಾರೆ, ಜೊತೆಗೆ ಬಯಲು ಸೀಮೆಯಲ್ಲಿ ಊಟಿಯ ವಾತಾವರಣ ಸೃಷ್ಟಿಯಾಗಿದ್ದು ಜನರು ಎಂಜಾಯ್ ಮಾಡುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಂಜಿನ ಮಳೆಯ ಜೊತೆಗೆ ಚಳಿಯ ವಾತಾವರಣ ನಿರ್ಮಾಣವಾಗಿದೆ. ಮೈ ಕೊರೆಯುವಂತಹ ಚಳಿಗೆ ಜನ ಚಡಪಡಿಸುವಂತಾಗಿದೆ. ಹಿಂದೆಂದು ಕಾಣದಂತ ತಂಪು ವಾತಾವರಣ ಮತ್ತು ಚಳಿಯಿಂದ ಜನ ಮನೆ ಬಿಟ್ಟು ಹೊರ ಬರಲು ಭಯಪಡುವಂತಾಗಿದೆ.

ಶೀತ, ಗಾಳಿ ಮತ್ತು ಚಳಿಯಿಂದ ಎಷ್ಟೇ ಬೆಚ್ಚನಿಯ ಉಡುಪುಗಳನ್ನು ಧರಿಸಿದರು ಚಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಸದಾ 25-30 ಡಿಗ್ರಿ ಉಷ್ಣಾಂಶ ಇರುತ್ತಿದ್ದ ಪ್ರದೇಶದಲ್ಲಿ 14-18 ಡಿಗ್ರಿಗೆ ಇಳಿದೆ. ಹಾಗಾಗಿ ಈ ಚಳಿಗೆ ಜನರು ಚಡಪಡಿಸುತ್ತಿದ್ದಾರೆ. ಇನ್ನು ಥಂಡಿ ವಾತಾವರಣದಿಂದ ಜನರು ಅಗತ್ಯವಿದ್ದರಷ್ಟೇ ಮನೆಯಿಂದ ಹೊರಬರುತ್ತಿದ್ದಾರೆ. ಹಾಗಾಗಿ ರಸ್ತೆಗಳಲ್ಲಿ ಜನರ ಓಡಾಟ ವ್ಯಾಪಾರ ವಹಿವಾಟು ಕೂಡ ಕಡಿಮೆ ಆಗಿದೆ.

ಇನ್ನು ಮುಂಜಾನೆಯಿಂದ ಸಂಜೆವರೆಗೂ ಕೋಲಾರ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಆವರಿಸುವ ಹಿಬ್ಬನಿ ಸಂಜೆಯಾದರೂ ಹಾಗೆ ಇರುತ್ತಿದೆ. ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಜಮ್ಮು-ಕಾಶ್ಮೀರದ ವಾತಾವರಣದ ರೀತಿ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಬ್ಬನಿಂದ ಆವೃತವಾಗಿರುವ ಬೆಟ್ಟಗಳನ್ನ ನೊಡುವುದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ.

ಕಳೆದ ಹದಿನೈದು ದಿನದಿಂದ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 12 ಗಂಟೆಯಾದ್ರೂ ದಟ್ಟವಾದ ಹಿಬ್ಬನಿ ಮತ್ತು ಚಳಿ ನಗರವನ್ನೆಲ್ಲಾ ಆವರಿಸಿರುತ್ತದೆ. ಒಂದು ವಾರದಿಂದ ಸೂರ್ಯನ ದರ್ಶನವು ಸಹ ಜನರಿಗೆ ಆಗಿಲ್ಲ. ಅತ್ತ ದಿತ್ವಾ ಚಂಡುಮಾರುತ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿರುವುದರಿಂದ ಮತ್ತಷ್ಟು ಚಳಿಯ ಅನುಭವ ಜನರಿಗೆ ಆಗುತ್ತಿದೆ.

ಇಷ್ಟು ದಿನ ಮಳೆಯ ಅನುಭವದಲ್ಲಿದ್ದ ಜಿಲ್ಲೆಯ ಜನರಿಗೆ ಪ್ರಕೃತಿ ಕಟ್ಟಿಕೊಟ್ಟಿರುವ ಈ ಸುಂದರ ಮಂಜಿನ ಸೊಬಗು, ಚುಮುಚುಮು ಚಳಿಯ ವಾತಾವರಣ ಜನರಿಗೆ ಒಂದು ರೀತಿಯ ಕಿರಿಕಿರಿ ಅನ್ನಿಸಿದರು ಕೂಡ ಒಂದು ರೀತಿ ಹೊಸ ಅನುಭವ ನೀಡುತ್ತಿರುವುದಂತು ಸುಳ್ಳಲ್ಲ.
Published On - 4:43 pm, Mon, 1 December 25




