
ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ದಾಖಲಿಸಿತು. ಈ ಸೋಲಿನೊಂದಿಗೆ ಈ ಆವೃತ್ತಿಯಲ್ಲಿ ಸತತ ಮೂರನೇ ಪಂದ್ಯ ಸೋತ ಮುಜುಗರಕ್ಕೀಡಾಗಿದೆ. ಇದೆಲ್ಲದರ ನಡುವೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಐಸಿಸಿ ದಂಡದ ಬರೆ ಎಳೆದಿದೆ.

ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸಲು ವಿಫಲವಾದ ಕಾರಣ ಹಾರ್ದಿಕ್ ಪಾಂಡ್ಯಗೆ ದಂಡದ ರೂಪದಲ್ಲಿ ಶಿಕ್ಷೆ ವಿಧಿಸಲಾಗಿದೆ. ಐಪಿಎಲ್ ಶಿಸ್ತು ಸಂಹಿತೆಯ ಪ್ರಕಾರ, ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸದಿದ್ದರೆ ತಂಡದ ನಾಯಕನಿಗೆ ದಂಡದ ರೂಪದಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಅದರಂತೆ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಕ್ರಿಕೆಟ್ ನಿಯಮಗಳ ಪ್ರಕಾರ, ಸೀಮಿತ ಓವರ್ಗಳ ಪಂದ್ಯಗಳಲ್ಲಿ 20 ಓವರ್ಗಳನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಬೇಕು. ಆದರೆ ಈ ಪಂದ್ಯದಲ್ಲಿ ಪಾಂಡ್ಯ ಪಡೆ ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಅದಕ್ಕಾಗಿಯೇ ಹಾರ್ದಿಕ್ ಅವರ ಮೊದಲ ತಪ್ಪಿಗೆ ದಂಡ ವಿಧಿಸಲಾಗಿದೆ. ಈ ಲೀಗ್ನಲ್ಲಿ ಹಾರ್ದಿಕ್ ಮತ್ತೆ ಇದೇ ರೀತಿಯ ತಪ್ಪುಗಳನ್ನು ಪುನರಾವರ್ತಿಸಿದರೆ ಪಂದ್ಯದಿಂದ ನಿಷೇಧ ಹೇರಬಹುದು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಹಾರ್ದಿಕ್ ಅವರ ಕೆಲವು ನಿರ್ಧಾರಗಳು ಕೂಡ ಟೀಕೆಗೆ ಗುರಿಯಾಗಿವೆ. ಹತ್ತು ಓವರ್ಗಳ ನಂತರ ಅನುಭವಿ ಬೌಲರ್ ಶಾರ್ದೂಲ್ ಠಾಕೂರ್ ಅವರನ್ನು ಬೌಲಿಂಗ್ಗೆ ಕರೆತಂದಿದ್ದು ಹಾರ್ದಿಕ್ ಅವರ ಸರಿಯಾದ ನಿರ್ಧಾರವಾಗಿರಲಿಲ್ಲ ಎಂಬುದು ಪರಿಣಿತರ ವಾದವಾಗಿದೆ.

ಶಾರ್ದೂಲ್ ತಮ್ಮ ಮೊದಲ ಓವರ್ನಲ್ಲೇ ವಿಕೆಟ್ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದರೂ, ತಡವಾಗಿ ಬೌಲಿಂಗ್ ಮಾಡಿಸಿದ್ದರಿಂದ ಎದುರಾಳಿ ತಂಡಕ್ಕೆ ದೊಡ್ಡ ಸ್ಕೋರ್ ಗಳಿಸಲು ಅವಕಾಶ ಸಿಕ್ಕಿತು. ಹೀಗಾಗಿ ಹಾರ್ದಿಕ್ ಅವರ ನಾಯಕತ್ವದ ಬಗ್ಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
Published On - 8:46 pm, Mon, 13 April 26