- TV9 Kannada Photo gallery Cricket photos Hardik Pandya OUT of IND vs AFG ODI Series: Injury Blow for India Ahead of Match
IND vs AFG: ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್..!
Hardik Pandya Ruled Out Due to Injury: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಜೂನ್ 13ರಿಂದ ಆರಂಭವಾಗಲಿರುವ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಹೊರಗುಳಿದಿದ್ದಾರೆ. ಕಾಲು ಉಳುಕಿರುವ ಪಾಂಡ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ರಿಹ್ಯಾಬ್ ಪಡೆಯಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯ ನಂತರ ಇದು ಭಾರತಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಮೂರು ಪಂದ್ಯಗಳ ಸರಣಿ ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈನಲ್ಲಿ ನಡೆಯಲಿದೆ.
Updated on: Jun 10, 2026 | 3:11 PM

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಜೂನ್ 13 ರಿಂದ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಕೂಡ ತಯಾರಿಯಲ್ಲಿ ತೊಡಗಿವೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಕೊಹ್ಲಿಯ ಅನುಪಸ್ಥಿತಿ ತಂಡಕ್ಕೆ ಆಘಾತ ನೀಡಿತ್ತು. ಇದೀಗ ಕೊಹ್ಲಿ ಜೊತೆಗೆ ಹಾರ್ದಿಕ್ ಪಾಂಡ್ಯ ಕೂಡ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ (PC-PTI).

ವಾಸ್ತವವಾಗಿ 2026 ರ ಐಪಿಎಲ್ ಸಮಯದಲ್ಲೇ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಚೇತರಿಸಿಕೊಂಡು ಮತ್ತೆ ತಂಡದಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ ಮುಗಿದ ಬಳಿಕ ಇದೀಗ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಸಜ್ಜಾಗಿದ್ದ ಪಾಂಡ್ಯ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ (PC-PTI).

ಹಾರ್ದಿಕ್ ಪಾಂಡ್ಯ ಅವರ ಕಾಲು ಉಳುಕಿದ್ದು, ಈ ಕಾರಣದಿಂದಾಗಿ ಅವರು ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಏಕದಿನ ಸರಣಿಗಾಗಿ ಹಾರ್ದಿಕ್ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದರು. ಈ ಫಿಟ್ನೆಸ್ ಪರೀಕ್ಷೆಯಲ್ಲೂ ಪಾಂಡ್ಯ ಪಾಸ್ ಆಗಿದ್ದರು. ಆದರೆ ಇದರ ಹೊರತಾಗಿಯೂ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ (PC-PTI).

ಗಾಯದಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ರಿಹ್ಯಾಬ್ಗಾಗಿ ಮುಂದಿನ ಎರಡು ವಾರಗಳನ್ನು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಕಳೆಯಬೇಕಾಗಬಹುದು. ಇದಕ್ಕೆ ಪೂರಕವಾಗಿ ಪಾಂಡ್ಯ ಕೂಡ ಪ್ರಸ್ತುತ ಬೆಂಗಳೂರಿನಲ್ಲಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪಾಂಡ್ಯ ಬದಲಿಯಾಗಿ ಬಿಸಿಸಿ ಇನ್ನು ಯಾವುದೇ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ (PC-PTI).

ಇನ್ನು ಏಕದಿನ ಸರಣಿಯ ವಿಚಾರಕ್ಕೆ ಬರುವುದಾದರೆ.. ಜೂನ್ 13 ರಂದು ಮೊದಲ ಏಕದಿನ ಪಂದ್ಯವನ್ನು ಆಡಿದ ನಂತರ, ಭಾರತ ಮತ್ತು ಅಫ್ಘಾನಿಸ್ತಾನ ಜೂನ್ 17 ರಂದು ಎರಡನೇ ಏಕದಿನ ಪಂದ್ಯಕ್ಕಾಗಿ ಲಕ್ನೋಗೆ ಪ್ರಯಾಣ ಬೆಳೆಸಲಿವೆ. ಜೂನ್ 20 ರಂದು ಮೂರನೇ ಮತ್ತು ಕೊನೆಯ ಪಂದ್ಯಕ್ಕಾಗಿ ಭಾರತ ಮತ್ತು ಅಫ್ಘಾನಿಸ್ತಾನ ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ (PC-BCCI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



