- Kannada News Photo gallery Cricket photos IND vs SL Sairaj Bahutule to serve as interim bowling coach in India tour of Sri Lanka 2024
IND vs SL: ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾಗೆ ಹಂಗಾಮಿ ಬೌಲಿಂಗ್ ಕೋಚ್ ನೇಮಕ
IND vs SL: ಭಾರತದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಶ್ರೀಲಂಕಾ ಪ್ರವಾಸದಲ್ಲಿ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರ ಕಡಿಮೆ. ಆದ್ದರಿಂದ ಭಾರತ ತಂಡಕ್ಕೆ ತಾತ್ಕಾಲಿಕ ಬೌಲಿಂಗ್ ಕೋಚ್ ಆಯ್ಕೆ ಮಾಡಲು ಮುಂದಾಗಿರುವ ಬಿಸಿಸಿಐ, ಸಾಯಿರಾಜ್ ಬಹುತುಲೆ ಅವರನ್ನು ಹಂಗಾಮಿ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.
Updated on: Jul 21, 2024 | 6:18 PM

ಕಳೆದ ತಿಂಗಳಷ್ಟೇ ಟಿ20 ವಿಶ್ವಕಪ್ ಎತ್ತಿ ಹಿಡಿದಿರುವ ಭಾರತ ತಂಡ ಇದೀಗ ದ್ವಿಪಕ್ಷೀಯ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈಗಾಗಲೇ ಈ ಎರಡು ಸರಣಿಗಳಿಗಾಗಿ ಬಿಸಿಸಿಐ ಎರಡೂ ತಂಡಗಳನ್ನು ಪ್ರಕಟಸಿದ್ದು, ಭಾರತ ತಂಡ ಜುಲೈ 22ರಂದು ಶ್ರೀಲಂಕಾಕ್ಕೆ ತೆರಳುವ ಸಾಧ್ಯತೆಗಳಿವೆ.

ಈ ಪ್ರವಾಸದೊಂದಿಗೆ ಭಾರತ ತಂಡದ ಕೋಚಿಂಗ್ ವಿಭಾಗದಲ್ಲಿ ಹೊಸಬರ ಮುಖ ಕಾಣಿಸಿಕೊಳ್ಳಲಿದೆ. ಇಷ್ಟು ದಿನ ರಾಹುಲ್ ದ್ರಾವಿಡ್ ನಿಭಾಯಿಸಿದ ಮುಖ್ಯ ಕೋಚ್ ಹುದ್ದೆಯನ್ನು ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ನಿಭಾಯಿಸಲಿದ್ದಾರೆ. ಗಂಭೀರ್ ಹೊರತುಪಡಿಸಿ ಉಳಿದ ಸಿಬ್ಬಂದಿಗಳನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ಬಿಸಿಸಿಐ ನಿರತವಾಗಿದೆ.

ಲಂಕಾ ಪ್ರವಾಸಕ್ಕೂ ಮುನ್ನ ತಂಡಕ್ಕೆ ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ ಹಾಗೂ ಫಿಲ್ಡಿಂಗ್ ಕೋಚ್ ಆಯ್ಕೆ ಮಾಡಬೇಕಾಗಿದೆ. ಈಗಾಗಲೇ ಈ ಹುದ್ದೆಗಳಿಗೆ ಹಲವರ ಹೆಸರುಗಳು ಕೇಳಿ ಬರುತ್ತಿವೆಯಾದರೂ, ಯಾರ ಹೆಸರೂ ಇನ್ನು ಅಂತಿಮವಾಗಿಲ್ಲ. ಇದರೊಳಗೆ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಶ್ರೀಲಂಕಾ ಪ್ರವಾಸದಲ್ಲಿ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರ ಕಡಿಮೆ.

ಆದ್ದರಿಂದ ಭಾರತ ತಂಡಕ್ಕೆ ತಾತ್ಕಾಲಿಕ ಬೌಲಿಂಗ್ ಕೋಚ್ ಆಯ್ಕೆ ಮಾಡಲು ಮುಂದಾಗಿರುವ ಬಿಸಿಸಿಐ, ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಯಿರಾಜ್ ಬಹುತುಲೆ ಅವರನ್ನು ಶ್ರೀಲಂಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಕ್ರಿಕ್ಬಜ್ ವರದಿಯ ಪ್ರಕಾರ, ಬಹುತುಲೆ ಶೀಘ್ರದಲ್ಲೇ ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ಪಡೆಯನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇಲೆ ಹೇಳಿದಂತೆ ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಒಂದೆಡೆ ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ತಂಡದ ನಾಯಕರಾಗಿ ಕಾಣಿಸಿಕೊಂಡರೆ, ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಏಕದಿನ ಸರಣಿಯಲ್ಲಿ ಪುನರಾಗಮನ ಮಾಡಲಿದ್ದಾರೆ. ಟಿ20 ಸರಣಿಯೊಂದಿಗೆ ಈ ಪ್ರವಾಸ ಆರಂಭವಾಗಲಿದೆ. ಟಿ20 ಸರಣಿಯ ಮೊದಲ ಪಂದ್ಯ ಜುಲೈ 27 ರಂದು ನಡೆಯಲಿದೆ.

ರಾಹುಲ್ ದ್ರಾವಿಡ್ ನಂತರ ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದು, ಇದೀಗ ಟೀಂ ಇಂಡಿಯಾ ತನ್ನ ಮೊದಲ ಸರಣಿಯನ್ನು ಶ್ರೀಲಂಕಾ ಪ್ರವಾಸದಲ್ಲಿ ಗಂಭೀರ್ ಕೋಚಿಂಗ್ನಲ್ಲಿ ಆಡಲಿದೆ. ಗೌತಮ್ ಗಂಭೀರ್ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಗೆಲ್ಲುವ ಮೂಲಕ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸುವ ಇರಾದೆಯಲ್ಲಿದ್ದಾರೆ.




