- Kannada News Photo gallery Cricket photos Ranji Trophy: Ravindra Jadeja Took 7 wickets in Saurashtra vs Tamil Nadu Match Kannada News zp
Ravindra Jadeja: ಪಂಟರ್ ಇಸ್ ಬ್ಯಾಕ್: ಜಡೇಜಾ ಸ್ಪಿನ್ ಮೋಡಿಗೆ ಎದುರಾಳಿ ತಂಡ ತತ್ತರ
Ravindra Jadeja: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡವು 324 ರನ್ ಪೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಸೌರಾಷ್ಟ್ರ ತಂಡವು 190 ರನ್ಗಳಿಗೆ ಆಲೌಟ್ ಆಗಿತ್ತು.
Updated on: Jan 26, 2023 | 10:58 PM

ಒಂದೆಡೆ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರ ಅಬ್ಬರ...ಮತ್ತೊಂದೆಡೆ ಗಾಯಗೊಂಡು ತಂಡದಿಂದ ಹೊರಗುಳಿದಿರುವ ಸ್ಟಾರ್ ಆಲ್ರೌಂಡರ್. ಹೀಗಾಗಿಯೇ ರವೀಂದ್ರ ಜಡೇಜಾ ಅವರ ಕಂಬ್ಯಾಕ್ ಅನ್ನು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ಕಾತುರಕ್ಕೆ ಕಿಚ್ಚು ಹಚ್ಚುವಂತೆ ಬಿಸಿಸಿಐ ಜಡೇಜಾ ಅವರಿಗೆ ಫಿಟ್ನೆಸ್ ಸಾಬೀತುಪಡಿಸಲು ರಣಜಿ ಟೂರ್ನಿ ಆಡುವಂತೆ ಸೂಚಿಸಿದ್ದರು.

ಅದರಂತೆ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದರು. ಆದರೆ ಮೊದಲ ಇನಿಂಗ್ಸ್ನಲ್ಲಿ ಜಡ್ಡು ಕಲೆಹಾಕಿದ್ದು ಕೇವಲ 15 ರನ್ ಮಾತ್ರ. ಇನ್ನು ಬೌಲಿಂಗ್ನಲ್ಲೂ ಮಿಂಚುವಲ್ಲಿ ವಿಫಲರಾಗಿದ್ದರು. 24 ಓವರ್ ಎಸೆದಿದ್ದ ಜಡೇಜಾ ಪಡೆದಿದ್ದು ಕೇವಲ 1 ವಿಕೆಟ್ ಮಾತ್ರ.

ಆದರೆ 2ನೇ ಇನಿಂಗ್ಸ್ ವೇಳೆಗೆ ರವೀಂದ್ರ ಜಡೇಜಾ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ಪಂಟರ್ ಸ್ಪಿನ್ನರ್ ಆಗಿ ಎಂಬುದೇ ವಿಶೇಷ. ಹೌದು, ಮೊದಲ ಇನಿಂಗ್ಸ್ನ ಮುಕ್ತಾಯದ ವೇಳೆ ಕೇಳಿ ಬಂದ ಟೀಕೆಗೆ ಜಡ್ಡು 2ನೇ ಇನಿಂಗ್ಸ್ನಲ್ಲೇ ಉತ್ತರ ನೀಡಿದ್ದಾರೆ.

ತಮಿಳುನಾಡು ತಂಡದ 2ನೇ ಇನಿಂಗ್ಸ್ನಲ್ಲಿ 17.1 ಓವರ್ ಎಸೆದ ಜಡೇಜಾ ನೀಡಿದ್ದು ಕೇವಲ 53 ರನ್ಗಳು. ಅಷ್ಟರಲ್ಲಾಗಲೇ 7 ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ಮೂಲಕ ತಮಿಳುನಾಡು ತಂಡವನ್ನು ಕೇವಲ 130 ರನ್ಗಳಿಗೆ ಆಲೌಟ್ ಮಾಡುವಲ್ಲಿ ಜಡ್ಡು ಪ್ರಮುಖ ಪಾತ್ರವಹಿಸಿದ್ದಾರೆ.

ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಕಂಬ್ಯಾಕ್ ಮಾಡುವುದು ಖಚಿತವಾಗಿದೆ. ಏಕೆಂದರೆ ಟೀಮ್ ಇಂಡಿಯಾ ಅತ್ಯುತ್ತಮ ಸ್ಪಿನ್ ಆಲ್ರೌಂಡರ್ ಅನ್ನು ಎದುರು ನೋಡುತ್ತಿದೆ. ಇದೀಗ 6 ತಿಂಗಳ ಬಳಿಕ ಕಣಕ್ಕಿಳಿದರೂ ಜಡೇಜಾ ತಮ್ಮ ಹಳೆಯ ಚಾರ್ಮ್ ಅನ್ನು ಉಳಿಸಿಕೊಂಡಿರುವುದು ಸ್ಪಷ್ಟವಾಗಿದೆ. ಹೀಗಾಗಿಯೇ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಡೇಜಾ ಕಣಕ್ಕಿಳಿಯುವುದು ಕನ್ಫರ್ಮ್ ಎನ್ನಬಹುದು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡವು 324 ರನ್ ಪೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಸೌರಾಷ್ಟ್ರ ತಂಡವು 190 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ 2ನೇ ಇನಿಂಗ್ಸ್ನಲ್ಲಿ ಜಡೇಜಾ ತೋರಿಸಿದ ಸ್ಪಿನ್ ಮೋಡಿಗೆ ತರಗೆಲೆಯಂತೆ ಉದುರಿದ ತಮಿಳುನಾಡು ತಂಡ ಕೇವಲ 133 ರನ್ಗಳಿಗೆ ಸರ್ವಪತನ ಕಂಡಿದೆ. ಇದೀಗ 2 ದಿನದಾಟದಲ್ಲಿ ಸೌರಾಷ್ಟ ತಂಡಕ್ಕೆ ಗೆಲ್ಲಲು ಕೇವಲ 262 ರನ್ಗಳ ಗುರಿಯಿದೆ. ಇತ್ತ ತಂಡದಲ್ಲಿ ರವೀಂದ್ರ ಜಡೇಜಾರಂತಹ ಅನುಭವಿ ಇರುವುದರಿಂದ ಗೆಲ್ಲುವ ವಿಶ್ವಾಸದಲ್ಲಿದೆ ಸೌರಾಷ್ಟ್ರ.



















