IPL 2026: ಗುಜರಾತ್ ವಿರುದ್ಧ ಕಣಕ್ಕಿಳಿಯುತ್ತಾರಾ ರೋಹಿತ್ ಶರ್ಮಾ?
Rohit Sharma Injury Update: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಪ್ಲೇಆಫ್ ಪ್ರವೇಶಕ್ಕೆ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹ್ಯಾಮ್ಸ್ಟ್ರಿಂಗ್ ಗಾಯದಿಂದ ಕೊನೆಯ ಪಂದ್ಯ ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ, ಗುಜರಾತ್ ಟೈಟಾನ್ಸ್ ವಿರುದ್ಧ ಆಡುವುದು ಅನಿಶ್ಚಿತವಾಗಿದೆ. ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದರೂ, ಅವರ ಲಭ್ಯತೆ ಬಗ್ಗೆ ಅಧಿಕೃತ ನಿರ್ಧಾರವಾಗಿಲ್ಲ. ರೋಹಿತ್ ಅಲಭ್ಯತೆಯಲ್ಲಿ ಡಿ ಕಾಕ್ ಶತಕ ಸಿಡಿಸಿದರೂ ತಂಡ ಸೋತಿತ್ತು.
Updated on: Apr 20, 2026 | 5:32 PM

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೆ ಈ ಬಾರಿಯ ಐಪಿಎಲ್ ಅಂದುಕೊಂಡಂತೆ ನಡೆದಿಲ್ಲ. ಇದುವರೆಗೆ ತಂಡಕ್ಕೆ ಗೆಲ್ಲಲು ಸಾಧ್ಯವಾಗಿರುವುದು ಕೇವಲ ಒಂದು ಪಂದ್ಯ ಮಾತ್ರ. ಹೀಗಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಮುಂಬೈ ತಂಡ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಆದರೆ ತಂಡಕ್ಕೆ ದೊಡ್ಡ ಚಿಂತೆ ಎಂದರೆ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಇಂಜುರಿ.

ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ರೋಹಿತ್ ಶರ್ಮಾ ಈ ಗಾಯದಿಂದಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಆಡಿರಲಿಲ್ಲ. ಇದೀಗ ರೋಹಿತ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಾರಾ ಇಲ್ಲವಾ ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ಉತ್ತರವೆಂಬಂತೆ ಪಂದ್ಯಕ್ಕೂ ಮೊದಲು, ರೋಹಿತ್ ಶರ್ಮಾ ನೆಟ್ಸ್ನಲ್ಲಿ ಅಭ್ಯಾಸ ನಡೆಸಿರುವುದು ಅವರ ಲಭ್ಯತೆಯ ಬಗ್ಗೆ ಸುಳಿವು ನೀಡಿದೆ.

ರೋಹಿತ್ ಶರ್ಮಾ ಅಹಮದಾಬಾದ್ನಲ್ಲಿ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿರುವುದಾಗಿ ಮುಂಬೈ ಇಂಡಿಯನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮಧ್ಯೆ, ವೈದ್ಯಕೀಯ ತಂಡ ಮತ್ತು ಮುಖ್ಯ ಕೋಚ್ ಮಹೇಲಾ ಜಯವರ್ಧನೆ, ರೋಹಿತ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಆದರೆ ಹಾಗಿದ್ದರೂ, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ಆಡಲು ಸಾಧ್ಯವಾಗಲಿಲ್ಲ, ಅವರ ಅನುಪಸ್ಥಿತಿಯಲ್ಲಿ ಕ್ವಿಂಟನ್ ಡಿ ಕಾಕ್, ರಿಕಲ್ಟನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಇದು ಡಿ ಕಾಕ್ ಅವರ ಈ ಆವೃತ್ತಿಯ ಮೊದಲ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವರು 60 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 112 ರನ್ ಬಾರಿಸಿದ್ದರು. ಆದಾಗ್ಯೂ, ಕ್ವಿಂಟನ್ ಡಿ ಕಾಕ್ ಅಜೇಯ ಶತಕ ಗಳಿಸಿದರೂ, ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 195 ರನ್ಗಳ ಗುರಿಯನ್ನು ತಲುಪಲು ವಿಫಲವಾಗಿ ಸೋತಿತು.

ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ತಂಡಕ್ಕೆ ಮರಳಿದರೆ, ರಿಕಲ್ಟನ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚು. ಏಕೆಂದರೆ ರೋಹಿತ್ ಬದಲಿಯಾಗಿ ಆಡಿದ್ದ ಕ್ವಿಂಟನ್ ಡಿ ಕಾಕ್ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಹೀಗಾಗಿ ಅವರನ್ನು ತಂಡದಿಂದ ಹೊರಗಿಡುವುದು ಕಷ್ಟವೆನಿಸುತ್ತದೆ.




