
ಭಾರತ ಏಕದಿನ ತಂಡದಲ್ಲಿ ಏನೂ ಸರಿ ಇಲ್ಲ ಎಂಬ ಗಾಳಿ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅದರಲ್ಲೂ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿತ್ತು. ಹಾಗೆಯೇ ರೋಹಿತ್ ಶರ್ಮಾರನ್ನು ಏಕದಿನ ತಂಡದಿಂದ ಕೈಬಿಡಲು ಗಂಭೀರ್ ಮಸಲತ್ತು ಮಾಡಿದ್ದಾರೆ ಎಂತಲೂ ಹೇಳಲಾಗುತ್ತಿತ್ತು(PC-PTI).

ತಂಡದ ಅಭ್ಯಾಸದ ವೇಳೆ ಕೊಹ್ಲಿ ಹಾಗೂ ಗಂಭೀರ್ ನಡುವೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ವರದಿಯಾಗಿತ್ತು. ಅಲ್ಲದೆ ಎಡ್ಜ್ಬಾಸ್ಟನ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುಂಚಿನ ಅಭ್ಯಾಸದ ಸಮಯದಲ್ಲಿ ಇವರಿಬ್ಬರು ಪರಸ್ಪರ ಮಾತನಾಡದೇ ಇರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದವರು ಇಬ್ಬರು ನಡುವೆ ಏನೂ ಸರಿಯಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದರು(PC-PTI).

ಆದರೀಗ ಆ ಎಲ್ಲಾ ಊಹಾಪೋಹಗಳಿಗೆ ಇವರಿಬ್ಬರು ತೆರೆ ಎಳೆದಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಮುಗಿಯುವುದಕ್ಕೂ ಮುನ್ನ ಇಡೀ ತಂಡ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿತ್ತು. ಲಂಡನ್ನಲ್ಲಿರುವ ಭಾರತೀಯ ರಾಯಭಾರಿ ಕುಮಾರನ್ ಪೆರಿಯಸಾಮಿ ಅವರು ಭಾರತೀಯ ತಂಡವನ್ನು ಸ್ವಾಗತಿಸಿ ಗೌರವಿಸಿದರು(PC-BCCI).

ಈ ಸಮಯದಲ್ಲಿ ಅತ್ಯಂತ ಆಶ್ಚರ್ಯಕರ ಘಟನೆಯೆಂದರೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಭಾಷಣೆ. ಇಬ್ಬರೂ ಗಹಗಹಿಸಿ ನಗುತ್ತಾ ಮಾತನಾಡುತ್ತಿರುವುದು ಕಂಡುಬಂದಿತು. ಹಾಗೆಯೇ ರೋಹಿತ್ ಮತ್ತು ಗಿಲ್ ಕೂಡ ಅವರೊಂದಿಗೆ ಕುಳಿತಿರುವುದು ಕಂಡುಬಂದಿತು. ಗಂಭೀರ್ ಮತ್ತು ವಿರಾಟ್ ಅವರ ಈ ಫೋಟೋ ಈಗ ಅವರ ನಡುವೆ ಎಲ್ಲವೂ ಚೆನ್ನಾಗಿದೆ ಎಂಬುದನ್ನು ಸೂಚಿಸುತ್ತಿದೆ(PC-BCCI).

ಭಾರತೀಯ ರಾಯಭಾರ ಕಚೇರಿಯಲ್ಲಿ ಟೀಂ ಇಂಡಿಯಾ ಆಟಗಾರರೊಂದಿಗೆ ಗ್ರೂಪ್ ಫೋಟೋ ತೆಗೆದುಕೊಳ್ಳಲಾಯಿತು. ಯುಕೆಯಲ್ಲಿರುವ ಭಾರತೀಯ ರಾಯಭಾರಿ ಕುಮಾರನ್ ಪೆರಿಯಸಾಮಿ ಅವರೊಂದಿಗೆ ಟೀಂ ಇಂಡಿಯಾ ಪೋಸ್ ನೀಡಿತು. ಈ ಸಮಾರಂಭದಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಭಾಗಿಯಾಗಿದ್ದರು(PC-BCCI).