ಇದ್ದಕ್ಕಿದ್ದಂತೆ ತಂಡ ಬದಲಾಯಿಸಿದ ಆರ್ಸಿಬಿ ವೇಗಿ ಯಶ್ ದಯಾಳ್
Yash Dayal team change: ಆರ್ಸಿಬಿ ಬೌಲರ್ ಯಶ್ ದಯಾಳ್ ತಮ್ಮ ದೇಶೀಯ ಕ್ರಿಕೆಟ್ ತಂಡವನ್ನು ಉತ್ತರ ಪ್ರದೇಶದಿಂದ ಛತ್ತೀಸ್ಗಢಕ್ಕೆ ಬದಲಾಯಿಸಿದ್ದಾರೆ. ಎನ್ಒಸಿ ಕೋರಿ ಅರ್ಜಿ ಸಲ್ಲಿಸಿರುವ ದಯಾಳ್, ಈಗಾಗಲೇ ಛತ್ತೀಸ್ಗಢದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಐಪಿಎಲ್ 2026ರ ಆವೃತ್ತಿಯಲ್ಲಿ ಆಡದೇ ಇರುವುದು ಮತ್ತು ಯುಪಿ ಟಿ20 ಲೀಗ್ನಲ್ಲಿ ಎದುರಾದ ಸಮಸ್ಯೆಗಳು ಈ ನಿರ್ಧಾರಕ್ಕೆ ಕಾರಣವಾಗಿವೆ ಎನ್ನಲಾಗಿದೆ.
Updated on: Jul 26, 2026 | 10:45 PM

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಭಾರತದ ಯುವ ವೇಗದ ಬೌಲರ್ ಯಶ್ ದಯಾಳ್ ಇದ್ದಕ್ಕಿದ್ದಂತೆ ತಮ್ಮ ತಂಡವನ್ನು ಬದಲಿಸಿದ್ದಾರೆ. ಅಷ್ಟಕ್ಕೂ ಯಶ್ ದಯಾಳ್ ತಮ್ಮ ತಂಡವನ್ನು ಬದಲಿಸಿರುವುದು ಐಪಿಎಲ್ನಲ್ಲಿ ಅಲ್ಲ. ಬದಲಿಗೆ, ದೇಶಿಯ ಕ್ರಿಕೆಟ್ನಲ್ಲಿ ತಾವು ಇಷ್ಟು ದಿನ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶ ತಂಡವನ್ನು(PC-PTI).

ಇಲ್ಲಿಯವರೆಗೆ ದೇಶಿಯ ಕ್ರಿಕೆಟ್ನಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದ ಯಶ್ ದಯಾಳ್ ಇದೀಗ ಛತ್ತೀಸ್ಗಢದ ಪರ ಆಡಲು ಸಜ್ಜಾಗಿದ್ದಾರೆ. ಇದಕ್ಕೆ ಪೂರಕವಾಗಿ ಕರ್ನಾಟಕದ ಆಲೂರಿನಲ್ಲಿ ನಡೆಯುತ್ತಿರುವ ಛತ್ತೀಸ್ಗಢದ ಪೂರ್ವ-ಆವೃತ್ತಿಯ ತರಬೇತಿ ಶಿಬಿರದಲ್ಲಿಯೂ ದಯಾಳ್ ಭಾಗವಹಿಸಿದ್ದಾರೆ. ಹಾಗೆಯೇ ಯಶ್ ದಯಾಳ್ ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಕೋರಿ ಅರ್ಜಿ ಸಲ್ಲಿಸಿದ್ದಾರೆ(PC-PTI).

2025 ರ ಐಪಿಎಲ್ ಫೈನಲ್ ನಂತರ ಯಶ್ ದಯಾಳ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ. 2026 ರ ಐಪಿಎಲ್ಗಿಂತ ಮೊದಲು ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಉಳಿಸಿಕೊಂಡಿದ್ದರೂ, ವೈಯಕ್ತಿಕ ಕಾರಣಗಳಿಂದಾಗಿ ಅವರು ಇಡೀ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ(PC-PTI).

ಇದರ ಜೊತೆಗೆ ಜೂನ್ 2026 ರಲ್ಲಿ ಯುಪಿ ಟಿ20 ಲೀಗ್ನಲ್ಲಿ ಯಶ್ ದಯಾಳ್ ಅವರನ್ನು ಗೋರಖ್ಪುರ ಲಯನ್ಸ್ ತಂಡವು ಉಳಿಸಿಕೊಂಡಿತ್ತು. ಅವರು ತಂಡದೊಂದಿಗೆ ಅಭ್ಯಾಸ ಮಾಡಲು ಸಹ ಪ್ರಾರಂಭಿಸಿದ್ದರು. ಆದಾಗ್ಯೂ, ಹರಾಜಿನ ನಂತರ ಫ್ರಾಂಚೈಸಿ ತನ್ನ 18 ಸದಸ್ಯರ ತಂಡವನ್ನು ಘೋಷಿಸಿದಾಗ, ಯಶ್ ದಯಾಳ್ ಅವರ ಹೆಸರು ಅದರಲ್ಲಿ ಇರಲಿಲ್ಲ. ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತ್ತು(PC-PTI).

ಯಶ್ ದಯಾಳ್ ತಮ್ಮ ದೇಶೀಯ ವೃತ್ತಿಜೀವನದಲ್ಲಿ 27 ಪ್ರಥಮ ದರ್ಜೆ ಮತ್ತು 23 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು ಪ್ರಥಮ ದರ್ಜೆ ಪಂದ್ಯಗಳಲ್ಲಿ 84 ಮತ್ತು ಲಿಸ್ಟ್ ಎ ನಲ್ಲಿ 36 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ 71 ಟಿ20 ಪಂದ್ಯಗಳಲ್ಲಿ 66 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ (PC-BCCI).

ಇದಲ್ಲದೆ, ಯಶ್ ದಯಾಳ್ ಅವರನ್ನು ಸೆಪ್ಟೆಂಬರ್ 2024 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಭಾರತೀಯ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದಾಗ್ಯೂ, ಆ ಸರಣಿಯ ಸಮಯದಲ್ಲಿ ಅವರಿಗೆ ಚೊಚ್ಚಲ ಪ್ರವೇಶ ಮಾಡುವ ಅವಕಾಶ ಸಿಗಲಿಲ್ಲ(PC-BCCI).




