- Kannada News Photo gallery Emotional Bonding: DK Shivakumar Seeks CM Siddaramaiah's Blessings At Breakfast Meet; Rare Photos Viral
ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆತ್ಮೀಯ ಕ್ಷಣ! ಇಲ್ಲಿವೆ ಅಪರೂಪದ ಚಿತ್ರಗಳು
ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಹೈವೋಲ್ಟೇಜ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ಇಡೀ ರಾಜ್ಯದ ಗಮನ ಸೆಳೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ‘ಉಪಾಹಾರ ಕೂಟ’ (Breakfast Meeting) ಹಲವು ಅಪರೂಪದ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಧಿಕಾರ ಹಂಚಿಕೆಯ ಬಿಕ್ಕಟ್ಟಿನ ನಡುವೆಯೂ ಉಭಯ ನಾಯಕರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂಬುದನ್ನು ಸಾರ್ವಜನಿಕ ವಲಯದಲ್ಲಿ ನಿರೂಪಿಸಲು ಮತ್ತು ಒಗ್ಗಟ್ಟಿನಲ್ಲೇ ಇದ್ದೇವೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಸಭೆಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ.
Updated on: May 28, 2026 | 10:51 AM

ಉಪಾಹಾರ ಕೂಟದಲ್ಲಿ ಭಾಗವಹಿಸಲು ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಮೂಲಕ ಇಬ್ಬರು ನಾಯಕರು ಒಟ್ಟಿಗೆ ಇರುವ ಅಪರೂಪದ ಮತ್ತು ಆತ್ಮೀಯ ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಖಾಸಗಿ ಕೊಠಡಿಯಲ್ಲಿ ಉಭಯ ನಾಯಕರ ರಹಸ್ಯ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆಯೋಜಿಸಲಾಗಿದ್ದ ಈ ಉಪಾಹಾರ ಕೂಟಕ್ಕೆ ರಾಜ್ಯ ಸಚಿವ ಸಂಪುಟದ ಬಹುತೇಕ ಎಲ್ಲಾ ಸಚಿವರು ಹಾಗೂ ಸಿಎಂ ಆಪ್ತ ಶಾಸಕರು ಹಾಜರಾಗಿದ್ದಾರೆ. ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಎನ್.ಎಸ್. ಬೋಸರಾಜು, ಡಾ. ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್, ಭೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಎನ್. ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಶಿವಾನಂದ ಪಾಟೀಲ್, ಕೆ.ಹೆಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ. ಪಾಟೀಲ್, ಡಾ. ಹೆಚ್.ಸಿ. ಮಹದೇವಪ್ಪ, ಶಿವರಾಜ ತಂಗಡಗಿ, ದಿನೇಶ್ ಗುಂಡೂರಾವ್ ಸೇರಿದಂತೆ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಬಸವರಾಜ ರಾಯರೆಡ್ಡಿ, ಅಶೋಕ್ ಪಟ್ಟಣ್ ಮತ್ತು ಪುಟ್ಟರಂಗಶೆಟ್ಟಿ ಉಪಸ್ಥಿತರಿದ್ದಾರೆ.

ಉಪಾಹಾರ ಕೂಟ ಆರಂಭವಾಗುವ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಉಳಿದೆಲ್ಲಾ ಸಚಿವರನ್ನು ಕಾನ್ಫರೆನ್ಸ್ ರೂಮ್ನಲ್ಲಿ ಕಾಯುವಂತೆ ಸೂಚಿಸಿ, ಮನೆಯೊಳಗಿನ ಪ್ರತ್ಯೇಕ ಕೊಠಡಿಯೊಂದರಲ್ಲಿ ಕೇವಲ ಇಬ್ಬರೇ ಸುದೀರ್ಘ ಮಾತುಕತೆ ನಡೆಸಿದರು. ಇಬ್ಬರು ನಾಯಕರು ಎಲ್ಲರನ್ನೂ ಹೊರಗೆ ಕಳುಹಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆಸಿದ ಈ ಒನ್-ಟು-ಒನ್ ಚರ್ಚೆ ತೀವ್ರ ರಾಜಕೀಯ ಕುತೂಹಲ ಮೂಡಿಸಿದೆ.

‘ರಾಜೀನಾಮೆ ನೀಡುವ ತನಕ ಆಟ ಮುಗಿದಿಲ್ಲ’: ಡಿಕೆಶಿ ಖಡಕ್ ಸಂದೇಶ: ಇನ್ನೊಂದೆಡೆ, ಸಿದ್ದರಾಮಯ್ಯ ಅವರು ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸುವವರೆಗೂ ರಾಜಕೀಯ ಆಟ ಮುಗಿದಿಲ್ಲ ಎಂಬುದನ್ನು ಅರಿತಿರುವ ಡಿ.ಕೆ. ಶಿವಕುಮಾರ್, ಬೆಂಬಲಿಗರು ಹಾಗೂ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ತಕ್ಷಣಕ್ಕೆ ಯಾವುದೇ ರೀತಿಯ ದುಡುಕಿನ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.

ತಮ್ಮನ್ನು ಭೇಟಿಯಾದ ಸಚಿವರು ಹಾಗೂ ಶಾಸಕರಿಗೆ ಸಂದೇಶ ರವಾನಿಸಿರುವ ಡಿಕೆಶಿ, ‘ಹೈಕಮಾಂಡ್ ನಾಯಕರು ಸದ್ಯ ನನ್ನ ಜೊತೆಗೆ ನೇರವಾಗಿ ಏನನ್ನೂ ಮಾತನಾಡಿಲ್ಲ. ಅಧಿಕಾರ ಹಂಚಿಕೆ ಕುರಿತು ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲೇ ಚರ್ಚಿಸಿದ್ದಾರೆ. ಹೀಗಾಗಿ ಸಿಎಂ ರಾಜೀನಾಮೆ ನೀಡುವ ವಿಷಯದ ಬಗ್ಗೆ ನನಗೆ ಅಧಿಕೃತವಾಗಿ ಇನ್ನೂ ಏನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ತಾವೂ ಕೂಡ ಸಿಎಂ ಹೇಳಿಕೆಗಾಗಿ ಕಾಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.
Read More




