- Kannada News Photo gallery India Pakistan Crisis What are the Developments Happens today in between two Countries check full details
ಪಹಲ್ಗಾಮ್ ದಾಳಿಯಲ್ಲಿ ಚೀನಾ ಪಾತ್ರದ ತನಿಖೆ, ಗಡಿಯಲ್ಲಿ ಯುದ್ಧಕ್ಕೆ ಪಾಕ್ ಸಿದ್ಧತೆ; ಇಂದು ಏನೇನಾಯ್ತು?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಿಂದ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪ್ರವಾಸಿಗರೇ ಆಗಿದ್ದಾರೆ. ಈ ಘಟನೆಯ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಎರಡೂ ದೇಶಗಳಿಗೆ ಪರಸ್ಪರ ವೀಸಾ ರದ್ದು ಮಾಡಲಾಗಿದೆ. ಭಾರತದಲ್ಲಿರುವ ಪಾಕಿಸ್ತಾನೀಯರು ಮತ್ತು ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳು ವಾಘಾ-ಅಟ್ಟಾರಿ ಗಡಿಯ ಮೂಲಕ ವಾಪಾಸ್ ಬಂದಿದ್ದಾರೆ. ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಏನೇನಾಯ್ತು? ಎಂಬುದರ ಸಚಿತ್ರ ಮಾಹಿತಿ ಇಲ್ಲಿದೆ.
Updated on: Apr 28, 2025 | 9:14 PM

ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಎನ್ಕ್ರಿಪ್ಟ್ ಮಾಡಲಾದ ಅಪ್ಲಿಕೇಶನ್ಗಳ ಮೂಲಕ ಉಗ್ರರೊಂದಿಗೆ ಸಂವಹನ ನಡೆಸುವ ಮೂಲಕ 10ಕ್ಕೂ ಹೆಚ್ಚು ಸ್ಥಳೀಯ ಕಾರ್ಯಕರ್ತರು ಪಹಲ್ಗಾಮ್ ದಾಳಿಕೋರರಿಗೆ ಸಹಾಯ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯು ದಾಳಿಯ ಸಮಯದಲ್ಲಿ 10ಕ್ಕೂ ಹೆಚ್ಚು ಕಾಶ್ಮೀರಿ ಭೂಗತ ಕಾರ್ಮಿಕರು (ಒಜಿಡಬ್ಲ್ಯೂಗಳು) ದಾಳಿಕೋರರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಎನ್ಐಎ ಬಹಿರಂಗಪಡಿಸಿದೆ.

ಪಹಲ್ಗಾಮ್ ದಾಳಿಯ ಬಳಿಕ ಇಂದು ಜಮ್ಮು ಕಾಶ್ಮೀರದಲ್ಲಿ ಅಧಿವೇಶನ ಆರಂಭವಾಗಿದೆ. ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ, "ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಬೇಡಲು ನಮಗೆ ಮುಖವೇ ಇಲ್ಲದಂತಾಗಿದೆ. ಪಹಲ್ಗಾಮ್ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ನಾನು ಹೇಗೆ ಕೇಳಲು ಸಾಧ್ಯ? ನಾವು ಹಿಂದೆಯೂ ರಾಜ್ಯ ಸ್ಥಾನಮಾನದ ಬಗ್ಗೆ ಮಾತನಾಡಿದ್ದೇವೆ ಮತ್ತು ಭವಿಷ್ಯದಲ್ಲಿಯೂ ಮಾತನಾಡುತ್ತೇವೆ. ಆದರೆ ನಾನು ಹೋಗಿ ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಲ್ಲಿ 26 ಜನರು ಸತ್ತಿದ್ದಾರೆ ಎಂದು ಹೇಳಿದರೆ ಅದು ನನ್ನ ಕಡೆಯಿಂದ ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ್ದಾರೆ.

ಇಂದು ಜಮ್ಮು ಕಾಶ್ಮೀರದ ವಿಧಾನಸಭಾ ಅಧಿವೇಶನದ ಬಳಿಕ ಮಾತನಾಡಿದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, "ನಮ್ಮ ನೆರೆಹೊರೆಯವರು ಇಂದಿಗೂ ಸಹ ಮಾನವೀಯತೆಯನ್ನು ಕೊಲೆ ಮಾಡಿದ್ದಾರೆಂದು ಅರ್ಥಮಾಡಿಕೊಳ್ಳದಿರುವುದು ನಮಗೆ ವಿಷಾದ ತಂದಿದೆ. ಹೀಗೆ ಮಾಡುವುದರಿಂದ ನಾವು ಪಾಕಿಸ್ತಾನದ ಜೊತೆ ಸೇರುತ್ತೇವೆ ಎಂದು ಅವರು ಭಾವಿಸಿದರೆ, ನಾವು ಅವರ ತಪ್ಪು ತಿಳುವಳಿಕೆಯನ್ನು ಅವರಿಗೆ ಅರ್ಥ ಮಾಡಿಸಬೇಕಾಗಿದೆ. 1947ರಲ್ಲಿ ನಾವು ಅವರೊಂದಿಗೆ ಹೋಗಲಿಲ್ಲ ಅಂದಮೇಲೆ ಇಂದು ಏಕೆ ಹೋಗುತ್ತೇವೆ? ಆ ಸಮಯದಲ್ಲಿ ನಾವು ಎರಡು ರಾಷ್ಟ್ರ ಸಿದ್ಧಾಂತವನ್ನು ನೀರಿಗೆ ಎಸೆದಿದ್ದೇವೆ. ಇಂದು ಕೂಡ ನಾವು ಎರಡು ರಾಷ್ಟ್ರ ಸಿದ್ಧಾಂತವನ್ನು ಸ್ವೀಕರಿಸಲು ಸಿದ್ಧರಿಲ್ಲ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ನಾವೆಲ್ಲರೂ ಒಂದೇ" ಎಂದು ಹೇಳಿದ್ದಾರೆ.

ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಎನ್ಕ್ರಿಪ್ಟ್ ಮಾಡಲಾದ ಅಪ್ಲಿಕೇಶನ್ಗಳ ಮೂಲಕ ಉಗ್ರರೊಂದಿಗೆ ಸಂವಹನ ನಡೆಸುವ ಮೂಲಕ 10ಕ್ಕೂ ಹೆಚ್ಚು ಸ್ಥಳೀಯ ಕಾರ್ಯಕರ್ತರು ಪಹಲ್ಗಾಮ್ ದಾಳಿಕೋರರಿಗೆ ಸಹಾಯ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯು ದಾಳಿಯ ಸಮಯದಲ್ಲಿ 10ಕ್ಕೂ ಹೆಚ್ಚು ಕಾಶ್ಮೀರಿ ಭೂಗತ ಕಾರ್ಮಿಕರು (ಒಜಿಡಬ್ಲ್ಯೂಗಳು) ದಾಳಿಕೋರರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಎನ್ಐಎ ಬಹಿರಂಗಪಡಿಸಿದೆ.

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಭಾರತೀಯ ರಾಯಭಾರಿ ಇಂದು ತಾಲಿಬಾನ್ ನಾಯಕತ್ವವನ್ನು ಭೇಟಿಯಾದರು. ಭಾರತೀಯ ವಿಶೇಷ ರಾಯಭಾರಿ ಆನಂದ್ ಪ್ರಕಾಶ್ ಇಂದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ (ಐಇಎ) ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿ ರಾಜಕೀಯ ಸಂಬಂಧಗಳನ್ನು ಬಲಪಡಿಸುವುದು, ವ್ಯಾಪಾರ, ಸಾರಿಗೆ ಸಹಕಾರ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚಿಸಿದರು ಎಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ವಿದೇಶಾಂಗ ಸಚಿವಾಲಯದ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಇಬ್ಬರು ನಾಯಕರ ನಡುವಿನ ಸಭೆಯು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಮತ್ತು ಆರ್ಥಿಕ ಮತ್ತು ರಾಜತಾಂತ್ರಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸುವುದರ ಮೇಲೆ ಕೇಂದ್ರೀಕರಿಸಿದೆ.

ಭಾರತ-ಪಾಕಿಸ್ತಾನದ ನಡುವೆ ಬಿಕ್ಕಟ್ಟು ಹೆಚ್ಚಾದ ನಂತರ ಪಾಕ್ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ 'ಕಾಣೆಯಾಗಿದ್ದಾರೆ' ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಜನರು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಎಲ್ಲಿದ್ದಾರೆ ಎಂದು ಪ್ರಶ್ನಿಸಲು ಪ್ರಾರಂಭಿಸಿದ್ದರು. ಏಕೆಂದರೆ, ಪಹಲ್ಗಾಮ್ ದಾಳಿ ನಂತರ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳ ನಡುವೆ, ಪಾಕಿಸ್ತಾನದ ಪ್ರಧಾನಿ ಕಚೇರಿಯು ಅಬೋಟಾಬಾದ್ನಿಂದ ಇಂದು ಒಂದು ಫೋಟೋವನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಜನರಲ್ ಮುನೀರ್ ಜೊತೆಗೆ ಕುಳಿತಿರುವ ಗ್ರೂಪ್ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದೆ.

ಪಾಕಿಸ್ತಾನದ ಪ್ರಜೆಗಳಿಗೆ ಭಾರತ ತೊರೆಯಲು ನೀಡಲಾಗಿದ್ದ ಗಡುವು ಮುಗಿದಿದೆ. ಈ ಹಿನ್ನೆಲೆಯಲ್ಲಿ ಇಂದು ಅಟ್ಟಾರಿ-ವಾಘಾ ಗಡಿಯಲ್ಲಿ ಕುಟುಂಬವೊಂದು ಭಾರತ ತೊರೆಯಲು ಹೋಗುತ್ತಿದ್ದಾಗ ಮಗು ಪಾಕಿಸ್ತಾನಿ ಪ್ರಜೆಯಾಗಿದ್ದರಿಂದ ಮಗುವಿಗೆ ಪಾಕ್ ತನ್ನ ಗಡಿಯೊಳಗೆ ಬರಲು ಅನುಮತಿ ನೀಡಿತು. ಆದರೆ, ಆ ಮಗುವಿನ ತಾಯಿ ಭಾರತೀಯ ಪಾಸ್ಪೋರ್ಟ್ ಹೊಂದಿದ್ದರಿಂದ ಆಕೆಯನ್ನು ಗಡಿಯೊಳಗೆ ಬರಲು ಬಿಡಲಿಲ್ಲ. ಇದರಿಂದ ತನ್ನ ಜೊತೆ ಬರಲಾಗದ ಅಮ್ಮನಿಗಾಗಿ ಆ ಮಗು ಅಳುತ್ತಾ ಕುಳಿತಿದ್ದ ದೃಶ್ಯ ಮನಕಲಕುವಂತಿತ್ತು.

ಭಾರತ ಯುದ್ಧ ಘೋಷಿಸುವ ಸಾಧ್ಯತೆ ಇರುವುದರಿಂದ ಪಾಕಿಸ್ತಾನವು ದೇಶದ ದಕ್ಷಿಣ ವಲಯದಲ್ಲಿ ಚೀನಾದ J-10 ಮತ್ತು JF-17 ಮಾದರಿಗಳು ಹಾಗೂ F-16ಗಳನ್ನು ಒಳಗೊಂಡಂತೆ ಹಲವಾರು ಸುಧಾರಿತ ಫೈಟರ್ ಜೆಟ್ಗಳನ್ನು ನಿಯೋಜನೆ ಮಾಡಿದೆ. ಪಾಕಿಸ್ತಾನವು ತನ್ನ ಪ್ರಮುಖ ಜೀವನಾಡಿ ಎಂದು ಪರಿಗಣಿಸುವ ಕರಾಚಿ ಬಂದರು ಸೇರಿದಂತೆ ಪ್ರಮುಖ ಕಾರ್ಯತಂತ್ರದ ಸ್ಥಳಗಳ ಮೇಲೆ ಸಂಭವನೀಯ ದಾಳಿಯ ನಿರೀಕ್ಷೆಯಲ್ಲಿ ಈ ಕ್ರಮ ಕೈಗೊಂಡಿದೆ. ಪಾಕಿಸ್ತಾನವು ಗಡಿಯಲ್ಲಿ ಸೈನಿಕರ ಚಲನೆಯನ್ನು ಹೆಚ್ಚಿಸಿದೆ, ರಕ್ಷಣಾತ್ಮಕ ಸ್ಥಾನಗಳನ್ನು ಬಲಪಡಿಸಲು ಮಿಲಿಟರಿ ಟ್ರಕ್ಗಳನ್ನು ಇರಿಸಿದೆ, ಇದು ಭಾರತದ ಮಿಲಿಟರಿ ಕ್ರಮಗಳ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ಸೂಚಿಸುತ್ತದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಜನರನ್ನು ಬಲಿ ಪಡೆದಿದ್ದರು. ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸುವ ಅನಿವಾರ್ಯತೆಯಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಪಾಕಿಸ್ತಾನದಲ್ಲಿ ದೊಡ್ಡ ಸುದ್ದಿಯಾಗಿ ಹರಿದಾಡಿತ್ತು. ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದು, 'ಕಾಂಗ್ರೆಸ್ ನಾಯಕರು ಭಾರತದೊಳಗೆ ನೀಡುತ್ತಿರುವ ಹೇಳಿಕೆಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದೆ. ಈ ನಾಯಕರ ಮೇಲೆ ಕಾಂಗ್ರೆಸ್ ಮುಖ್ಯಸ್ಥರ ಮೇಲೆ ಹಿಡಿತವಿಲ್ಲವೇ?' ಎಂದು ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ.

ಪಾಕಿಸ್ತಾನಕ್ಕೆ ಚೀನಾ ಮತ್ತು ಟರ್ಕಿ ಬೆಂಬಲ ನೀಡುತ್ತಿರುವ ಬಗ್ಗೆ ಎನ್ಐಎ ತನಿಖೆ ವೇಳೆ ಅನುಮಾನ ವ್ಯಕ್ತವಾಗಿದೆ. ಪಹಲ್ಗಾಮ್ ಭಯೋತ್ಪಾದನಾ ದಾಳಿಗೂ 5 ದಿನಗಳ ಮೊದಲು ಚೀನಾದ ಡ್ರೋನ್ಗಳ ಬಳಕೆಯಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಬೈಸರನ್ ಕಣಿವೆಯಲ್ಲಿ ಚೀನಾ ನಿರ್ಮಿತ DJI ಡ್ರೋನ್ ಹಾರಾಟ ನಡೆಸಿತ್ತು. ಡ್ರೋನ್ ಮೂಲಕ ಜನಸಂದಣಿಯ ಮಾಹಿತಿ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ. ಡ್ರೋನ್ ಮೂಲಕ ಶಸ್ತ್ರಾಸ್ತ್ರ, ಸರಕುಗಳನ್ನು ಕಾಶ್ಮೀರ ಕಣಿವೆಗೆ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಡ್ರೋನ್ ಬಳಸಿರುವ ಕುರಿತು ರೆಡಿಯೋ ಸಿಗ್ನಲ್ಗಳು ಪತ್ತೆಯಾಗಿದೆ. ಪಹಲ್ಗಾಮ್ನಲ್ಲಿ ರೇಡಿಯೋ ಸಿಗ್ನಲ್ ಬಳಸಿರುವುದು ಪತ್ತೆಯಾಗಿದೆ. ರೇಡಿಯೋ ಸಿಗ್ನಲ್ ಸಂಚಾರ ಪತ್ತೆಗೆ ಇಸ್ರೋ ಮೂಲಕ ತನಿಖೆ ನಡೆಸಲಾಗುತ್ತಿದೆ.

ಪಹಲ್ಗಾಮ್ ದಾಳಿಯ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ತಮ್ಮ ಹಿಂದಿನ ಹೇಳಿಕೆಗಳನ್ನು ರಾಬರ್ಟ್ ವಾದ್ರಾ ಇಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಉದ್ದೇಶಗಳನ್ನು "ತಪ್ಪಾಗಿ ಅರ್ಥೈಸಲಾಗಿದೆ" ಎಂದು ಹೇಳಿದ್ದಾರೆ. ಫೇಸ್ಬುಕ್ ಪೋಸ್ಟ್ನಲ್ಲಿ ರಾಬರ್ಟ್ ವಾದ್ರಾ, "ನನ್ನ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಗೌರವದಿಂದ ನನ್ನನ್ನು ಸ್ಪಷ್ಟಪಡಿಸಿಕೊಳ್ಳಲು ಬದ್ಧನಾಗಿದ್ದೇನೆ. ಮುಗ್ಧ ಮತ್ತು ನಿರಾಯುಧ ಜನರ ಮೇಲಿನ ಹಿಂಸಾಚಾರವನ್ನು ಕ್ಷಮಿಸಲು ಸಾಧ್ಯವಿಲ್ಲ" ಎಂದು ಹೇಳಿದರು. ಅಹಿಂಸೆಯನ್ನು ಅನುಸರಿಸುವ ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಎಲ್ಲರೂ ನೆನಪಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಟರ್ಕಿ ಯುದ್ಧ ಉಪಕರಣಗಳನ್ನು ಕಳುಹಿಸುವ ಮೂಲಕ ಪಾಕಿಸ್ತಾನಕ್ಕೆ ತನ್ನ ಬೆಂಬಲವನ್ನು ತೋರಿಸಿದೆ. ಈ ಕ್ರಮವು ಎರಡು ರಾಷ್ಟ್ರಗಳ ನಡುವಿನ ವಿಶಾಲ ರಕ್ಷಣಾ ಸಹಕಾರದ ಭಾಗವಾಗಿದೆ ಎಂದು ಮೂಲಗಳು ಹೇಳಿವೆ. ಕರಾಚಿಯ ಜೊತೆಗೆ, ಆರು ಟರ್ಕಿಶ್ ಸಿ -130 ವಿಮಾನಗಳು ಇಸ್ಲಾಮಾಬಾದ್ನ ಮಿಲಿಟರಿ ನೆಲೆಯಲ್ಲಿ ಬಂದಿಳಿದಿವೆ ಎಂದು ವರದಿಯಾಗಿದೆ.

ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿ ಪ್ರಸಾರ ಮಾಡಿದ್ದಕ್ಕಾಗಿ ಭಾರತವು ಇಂದು 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಿದೆ. ಗೃಹ ವ್ಯವಹಾರ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಉಗ್ರರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್ಪಿಎಫ್, ಸೇನೆ ಮತ್ತು ಇತರ ಭದ್ರತಾ ಸಿಬ್ಬಂದಿ ಭಯೋತ್ಪಾದಕರ ಮನೆಗಳನ್ನು ಹುಡುಕಿ ಧ್ವಂಸ ಮಾಡುತ್ತಲೇ ಇದೆ. ಈವರೆಗೂ 10ಕ್ಕೂ ಹೆಚ್ಚು ನರರಕ್ಕಸರ ಮನೆಗಳನ್ನು ಛಿದ್ರಛಿದ್ರ ಮಾಡಿದೆ. ವಿವಿಧ ಕಡೆಗಳಲ್ಲಿ ತನಿಖೆಯನ್ನ ಚರುಕುಗೊಳಿಸಿವೆ. ಎನ್ಐಎ ಕೂಡ ವಿಚಾರಣೆ ಪ್ರಾರಂಭಿಸಿದೆ. ಈ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಅನಿಲ್ ಚೌಹಾಣ್ ಜೊತೆ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮೂರು ಸೇನೆಗಳ ಸಾಮರ್ಥ್ಯದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚರ್ಚೆ ನಡೆಸಿ, ಪಾಕಿಸ್ತಾನದ ವಿರುದ್ಧ ಸೇನೆ ಯಾವ ರೀತಿ ಸಿದ್ಧವಾಗಿದೆ ಎಂಬ ಸಂಪೂರ್ಣ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.



















