- Kannada News Photo gallery India Pakistan Tensions War situation in Border What Happens Today between two Countries
ಪಾಕಿಸ್ತಾನಕ್ಕೆ ಭಾರತದಿಂದ ಒಂದರ ಹಿಂದೊಂದು ಶಾಕ್, ಪಹಲ್ಗಾಮ್ ಉಗ್ರ ಶ್ರೀಲಂಕಾದಲ್ಲಿ ಪತ್ತೆ; ಇಂದು ಏನೇನಾಯ್ತು?
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸುತ್ತಲೇ ಇದೆ. ಭಾರತ ಪಾಕಿಸ್ತಾನಕ್ಕೆ ಭಾರತದ ವಾಯುಮಾರ್ಗ, ಭೂ ಮಾರ್ಗ, ಸಮುದ್ರ ಮಾರ್ಗವನ್ನು ಬಂದ್ ಮಾಡಿದ್ದು, ಇಂದು ಅಂಚೆ ಸೇವೆ, ಆಮದು ವ್ಯವಹಾರವನ್ನು ಕೂಡ ರದ್ದುಗೊಳಿಸಿದೆ. ಹಾಗೇ, ಪಾಕಿಸ್ತಾನದ ಹಡಗುಗಳಿಗೆ ನಿಷೇಧ ಹೇರಿದೆ. ಈ ನಡುವೆ ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳಲ್ಲಿ ಸೇನಾ ಪ್ರಾಬಲ್ಯವನ್ನು ಪ್ರದರ್ಶಿಸುವ ಯುದ್ಧೋಪಕರಣಗಳ ತಾಲೀಮು ನಡೆಸಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಇಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲಿದೆ.
Updated on: May 03, 2025 | 8:39 PM

ಅಂಗೋಲಾ ಅಧ್ಯಕ್ಷ ಜೊವೊ ಲೊರೆಂಕೊ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ನಾವು ಸರ್ವಾನುಮತದಿಂದ ಹೇಳಿದ್ದೇವೆ” ಎಂದು ಹೇಳಿದ್ದಾರೆ. ಭಾರತ-ಪಾಕಿಸ್ತಾನ ರಾಷ್ಟ್ರಗಳು ಉದ್ವಿಗ್ನತೆಯ ನಡುವೆ ಪರಸ್ಪರರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ “ದೃಢ ಮತ್ತು ನಿರ್ಣಾಯಕ ಕ್ರಮ” ತೆಗೆದುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ.

ಪಾಕಿಸ್ತಾನದೊಂದಿಗಿನ ಹೆಚ್ಚಿದ ಉದ್ವಿಗ್ನತೆಯ ನಡುವೆಯೂ ಭಾರತೀಯ ನೌಕಾಪಡೆಯು ತನ್ನ 'ಶಕ್ತಿಯ ತ್ರಿಶೂಲ'ವನ್ನು ಪ್ರದರ್ಶಿಸಿದೆ. ಭಾರತೀಯ ನೌಕಾಪಡೆಯು ಇಂದು ಸಮುದ್ರದಲ್ಲಿ ನಿಯೋಜಿಸಲಾದ ಮೇಲ್ಮೈ ಹಡಗು, ಜಲಾಂತರ್ಗಾಮಿ ಮತ್ತು ಹೆಲಿಕಾಪ್ಟರ್ ಅನ್ನು ಒಳಗೊಂಡ ತನ್ನ ಪ್ರಬಲ ಯುದ್ಧನೌಕೆಯ ಫೋಟೋವನ್ನು ಪೋಸ್ಟ್ ಮಾಡಿದೆ. ಇವುಗಳನ್ನು "ನೌಕಾ ಶಕ್ತಿಯ ತ್ರಿಶೂಲ" ಎಂದು ವಿವರಿಸಲಾಗಿದ್ದು, ಇದರಲ್ಲಿ INS ಕೋಲ್ಕತಾ, ಸ್ಕಾರ್ಪೀನ್-ವರ್ಗದ ಜಲಾಂತರ್ಗಾಮಿ ಮತ್ತು ಧ್ರುವ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಸೇರಿವೆ. ಪಾಕಿಸ್ತಾನದೊಂದಿಗೆ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಫೋಟೋ ಭಾರೀ ವೈರಲ್ ಆಗಿದೆ.

ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ ಬಿಡಲಾಗುತ್ತಿದ್ದ ನೀರನ್ನು ಬೇರೆಡೆಗೆ ತಿರುಗಿಸಲು ಭಾರತ ನಿರ್ಮಿಸಿರುವ ಯಾವುದೇ ರಚನೆಯನ್ನು ನಾವು ನಾಶಪಡಿಸುತ್ತೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ದಶಕಗಳ ಕಾಲದ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಈ ಒಪ್ಪಂದದಡಿಯಲ್ಲಿ, ಸಿಂಧೂ ನೀರಿನ 80% ಪಾಕಿಸ್ತಾನಕ್ಕೆ ಹೋಗುತ್ತಿತ್ತು. ಉಳಿದ 20% ಭಾರತ ಬಳಸುತ್ತಿತ್ತು. ಈ ನೀರನ್ನು ಬೇರೆಡೆಗೆ ತಿರುಗಿಸುವುದನ್ನು "ಪಾಕಿಸ್ತಾನದ ವಿರುದ್ಧ ಆಕ್ರಮಣ" ಎಂದು ನೋಡಲಾಗುವುದು ಎಂದು ಖವಾಜಾ ಆಸಿಫ್ ಹೇಳಿದರು.

ಭಾರತ ಯಾವ ಸಮಯದಲ್ಲಿ ಬೇಕಾದರೂ ಯುದ್ಧ ಸಾರಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ ಯುದ್ಧಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿದೆ. ಯುದ್ಧಕ್ಕೆ ಸಜ್ಜಾಗಲು ಪಾಕಿಸ್ತಾನಿ ಸೇನೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಸ್ಥಳೀಯ ನಾಗರಿಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದೆ. ಪಾಕಿಸ್ತಾನಿ ಸೇನೆಯು ಪಿಒಕೆಯಲ್ಲಿ ತರಬೇತಿ ಶಿಬಿರಗಳನ್ನು ಸ್ಥಾಪಿಸಿದ್ದು, ಅಲ್ಲಿ ಸ್ಥಳೀಯರಿಗೆ ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ತರಬೇತಿ ನೀಡಲಾಗುತ್ತಿದೆ. ಪಾಕಿಸ್ತಾನಿ ಪಡೆಗಳು ಭಾರತದೊಂದಿಗಿನ ಯುದ್ಧದಲ್ಲಿ ಭಾಗವಹಿಸಲು ಹಿಂಜರಿಯುತ್ತಿವೆ ಮತ್ತು ಹಲವಾರು ಸೈನಿಕರು ಪಾಕಿಸ್ತಾನ ಸೇನೆಯನ್ನು ತೊರೆದಿದ್ದಾರೆ ಎಂಬ ವರದಿಗಳ ಮಧ್ಯೆ ಈ ವೀಡಿಯೊ ಬಹಿರಂಗವಾಗಿದೆ.

ಪಾಕಿಸ್ತಾನ ಇಂದು ಅಬ್ದಾಲಿ ವೆಪನ್ ಸಿಸ್ಟಮ್ ನ ಯಶಸ್ವಿ ತರಬೇತಿ ಉಡಾವಣೆಯನ್ನು ನಡೆಸಿತು. ಪಾಕಿಸ್ತಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. 450 ಕಿ.ಮೀ ವ್ಯಾಪ್ತಿಯ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಅಬ್ದಾಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿದೆ. ಪಹಲ್ಗಾಮ್ ಉಗ್ರರ ದಾಳಿ ನಂತರ ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಇದು ಎಕ್ಸ್ ಇಂಡಸ್ ನ ಭಾಗವಾಗಿ 450 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯಾಗಿದೆ.

ಭಾರತದ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಇಂದಿನಿಂದ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಹಾಗೇ, ಸುರಕ್ಷತಾ ದೃಷ್ಟಿಯಿಂದ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪಾಕಿಸ್ತಾನದ ಬಂದರುಗಳಿಗೆ ಭೇಟಿ ನೀಡುವುದನ್ನು ಕೂಡ ನಿಷೇಧಿಸಿದೆ. ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಆದೇಶದಂತೆ, ಪಾಕಿಸ್ತಾನದ ಧ್ವಜವನ್ನು ಹೊಂದಿರುವ ಹಡಗುಗಳು ಯಾವುದೇ ಭಾರತೀಯ ಬಂದರಿಗೆ ಭೇಟಿ ನೀಡಲು ಅನುಮತಿ ಇಲ್ಲ. ಹಾಗೇ, ಭಾರತೀಯ ಧ್ವಜ ಹಡಗು ಪಾಕಿಸ್ತಾನದ ಯಾವುದೇ ಬಂದರುಗಳಿಗೆ ಭೇಟಿ ನೀಡಬಾರದು.

ಪಹಲ್ಗಾಮ್ ದಾಳಿಯ ಉಗ್ರನೊಬ್ಬ ಶ್ರೀಲಂಕಾದಲ್ಲಿ ಪ್ರತ್ಯಕ್ಷನಾಗಿದ್ದಾನೆ. ತಮಿಳುನಾಡಿನ ಚೆನ್ನೈನಿಂದ ಬಂದ ವಿಮಾನವನ್ನು ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ ಶೋಧಿಸಲಾಗಿದೆ. ಈ ವಿಮಾನದಲ್ಲಿ ಪಹಲ್ಗಾಮ್ ದಾಳಿಯ ಉಗ್ರನೊಬ್ಬ ಭಾರತ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಕೊಲಂಬೋ ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಚೆನ್ನೈನಿಂದ ಬಂದ ಶ್ರೀಲಂಕಾ ಏರ್ಲೈನ್ಸ್ ವಿಮಾನವು ಇಂದು ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎ) ವಿಶೇಷ ಭದ್ರತಾ ಕಾರ್ಯಾಚರಣೆಗೆ ಒಳಗಾಯಿತು.

ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತೀಕಾರ ತೀರಿಸಿಕೊಂಡರೆ, ‘ಸೆವೆನ್ ಸಿಸ್ಟರ್ಸ್’ ಎಂದೂ ಕರೆಯಲ್ಪಡುವ ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಲು ಚೀನಾದೊಂದಿಗೆ ಕೈ ಜೋಡಿಸಬೇಕು ಎಂದು ಮಾಜಿ ಬಾಂಗ್ಲಾದೇಶದ ಮಿಲಿಟರಿ ಅಧಿಕಾರಿ ಮತ್ತು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಆಪ್ತ ಸಹಚರ ರೆಹಮಾನ್ ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದಾರೆ.

ಪಾಕಿಸ್ತಾನದಿಂದ ಬರುವ ಎಲ್ಲಾ ಆಮದುಗಳನ್ನು ಭಾರತ ನಿಷೇಧಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದು ಪಾಕಿಸ್ತಾನದಿಂದ ಸಾಗಣೆಯಲ್ಲಿರುವ ಎಲ್ಲಾ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ. ಪಾಕಿಸ್ತಾನದಿಂದ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದನ್ನು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.



















