
ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ರಸ್ತೆಗೆ ಬಿದ್ದಿದ್ದ ಭಾರಿ ಪ್ರಮಾಣದ ಮಣ್ಣು ತೆರವು ಮಾಡಿದ್ದಾರೆ. ಇದರ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಇಲ್ಲಿನ ಸಮಸ್ಯೆ ಬಗ್ಗೆಹೆದ್ದಾರಿ ಪ್ರಾಧಿಕಾರಕ್ಕೆ ಸಿಎಂರಿಂದ ಪತ್ರ ಬರೆದು ಸಮಸ್ಯೆ ಬಗೆಹರಿಸಲು ತಾಕೀತು ಮಾಡುತ್ತೇವೆ ಅಂತ ಹೇಳಿದ್ದಾರೆ.

ಇತ್ತ ಚಿಕ್ಕಮಗಳೂರಿನಲ್ಲೂ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಶೃಂಗೇರಿ ತಾಲೂಕಿನ ಆನೆಗುಂದಿ ಬಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಗುಡ್ಡ ಕುಸಿತಗಳಾಗಿವೆ. ಆನೆಗುಂದಿ ಬಳಿ 4 ಮನೆಗಳ ಮೇಲೂ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಶಿವಮೊಗ್ಗ-ಶೃಂಗೇರಿ-ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪಾಯಕಾರಿ ರಸ್ತೆಯಲ್ಲೇ ವಾಹನಗಳು ಸಂಚಾರ ಮಾಡ್ತಿವೆ.

ಪ್ರವಾಸಿ ತಾಣಗಳಲ್ಲಿ ಗುಡ್ಡ, ರಸ್ತೆಗಳ ಕುಸಿತ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತ ಕೂಡ ಆಗಸ್ಟ್ 15ರವರೆಗೆ ಪ್ರವಾಸಕ್ಕೆ ಬಾರದಂತೆ ಪ್ರವಾಸಿಗರಿಗೆ ಮನವಿ ಮಾಡಿದೆ. ಜಿಲ್ಲೆಯಾದ್ಯಂತ ಚಾರಣ ಬ್ಯಾನ್ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಮಲೆನಾಡು ಶಿವಮೊಗ್ಗದಲ್ಲಿ ಮುಂದುವರಿದ ಮಳೆಯ ಅಬ್ಬರ ಮುಂದುವರಿದಿದ್ದು, ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಕುಂದಗಲ್ಲುವಿನಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿದೆ. ಸಂಪೂರ್ಣ ಭೂಕುಸಿತವಾದರೆ ಸಂಚಾರ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಶಿರೂರು ಗುಡ್ಡ ಕುಸಿತದ ಬಳಿಕ ಸದ್ಯ ಕರ್ನಾಟಕಕ್ಕೂ ಗುಡ್ಡದ ಭೂತದ ಭಯ ಕಾಡುತ್ತಿದೆ. ವಯನಾಡಿನ ದುರಂತದ ಬಳಿಕ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿ ರಸ್ತೆ, ಹಾರ್ಲೆ ಎಸ್ಟೇಟದ ರಸ್ತೆ ಭೂಕುಸಿತ ನಂತರ ಆತಂಕ ಹೆಚ್ಚಾಗಿದೆ. ಈ ಮಧ್ಯೆ, ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.