- Kannada News Photo gallery Krishna Janmashtami 2025: These are the Krishna temples that you must visit on Krishna Janmashtami
Krishna Janmashtami 2025: ಕೃಷ್ಣ ಜನ್ಮಾಷ್ಟಮಿ ದಿನ ತಪ್ಪದೇ ಭೇಟಿ ನೀಡಲೇಬೇಕಾದ ಕೃಷ್ಣ ದೇವಾಲಯಗಳಿವು
ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೂ ಈ ಹಬ್ಬದ ದಿನ ಹಲವರು ಮನೆಯಲ್ಲಿಯೇ ಕೃಷ್ಣನನ್ನು ಪೂಜಿಸಿದರೆ, ಇನ್ನೂ ಅನೇಕರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ನೀವು ಸಹ ಈ ಹಬ್ಬದ ದಿನ ದೇವಾಲಯಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ, ನಮ್ಮ ಕರ್ನಾಟಕದಲ್ಲಿರುವ ಈ ಕೆಲವು ಕೃಷ್ಣನಿಗೆ ಅರ್ಪಿತವಾದ ದೇವಾಲಯಗಳಿಗೆ ಹೋಗಲು ಮರೆಯದಿರಿ. ಶ್ರೀಕೃಷ್ಣನ ಈ ಸುಂದರ ದೇವಾಲಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Updated on: Aug 14, 2025 | 9:00 AM

ಹಿಮವತ್ ಗೋಪಾಲ ಸ್ವಾಮಿ ದೇಗುಲ: ಕರ್ನಾಟಕದಲ್ಲಿರು ಕೃಷ್ಣ ದೇವಾಲಯಗಳಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಹಿಮವತ್ ಗೋಪಾಲಸ್ವಾಮಿ ದೇಗುಲ ಕೂಡ ಒಂದು. ಈ ದೇವಾಲಯವನ್ನು 14 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

ಉಡುಪಿ ಕೃಷ್ಣ ಮಠ: ದಕ್ಷಿಣ ಭಾರತದಲ್ಲಿನ ಕೃಷ್ಣ ದೇವಾಲಯಗಳ ಪೈಕಿ ಉಡುಪಿಯ ಕೃಷ್ಣ ಮಠ ಪ್ರಮುಖವಾದುದು. 13 ನೇ ಶತಮಾನದಲ್ಲಿ ವೈಷ್ಣವ ಸಂತರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಈ ಸುಂದರ ಕಡಗೋಲು ಕೃಷ್ಣ ದೇವಾಲಯಕ್ಕೆ ಕೃಷ್ಣ ಜನ್ಮಾಷ್ಟಮಿಯ ದಿನ ನೀವು ಭೇಟಿ ನೀಡಬಹುದು.

ಇಸ್ಕಾನ್ ದೇಗುಲ ಬೆಂಗಳೂರು: ಬೆಂಗಳೂರಿನಲ್ಲಿರುವ ಇಸ್ಕಾನ್ ದೇಗುಲವು ಕರ್ನಾಟಕದಲ್ಲಿರುವ ಅತ್ಯಂತ ಜನಪ್ರಿಯ ಕೃಷ್ಣ ದೇಗುಲಗಳಲ್ಲಿ ಒಂದಾಗಿದೆ. ಈ ದೇಗುಲದಲ್ಲಿ ಕೃಷ್ಣನ ಜೊತೆಗೆ ರಾಧೆಯನ್ನೂ ಕಾಣಬಹುದು. ಸುಂದರ ಉದ್ಯಾನವನ, ಅದ್ಭುತ ವಾಸ್ತುಶಿಲ್ಪಗಳಿಂದ ಸುತ್ತುವರೆದಿರುವ ಈ ದೇವಾಲಯಕ್ಕೆ ಬೆಂಗಳೂರಿನ ಸುತ್ತಮುತ್ತಲಿರುವವರು ಕೃಷ್ಣಾಷ್ಟಮಿಯ ದಿನ ಭೇಟಿ ನೀಡಲೇಬೇಕು.

ವೇಣುಗೋಪಾಲ ಸ್ವಾಮಿ ದೇವಸ್ಥಾನ, ಮೈಸೂರು: ಕರ್ನಾಟಕದ ಪ್ರಮುಖ ಕೃಷ್ಣ ದೇಗುಲಗಳ ಪೈಕಿ ಮೈಸೂರಿನ ವೇಣು ಗೋಪಾಲ ಸ್ವಾಮಿ ದೇವಾಲಯ ಕೂಡ ಒಂದು. ಕೆಆರ್ಎಸ್ ಹಿನ್ನೀರಿನಲ್ಲಿ ನೆಲೆಗೊಂಡಿರುವ ಈ ಸುಂದರ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇದು ಮೈಸೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.

ಬಾಲಕೃಷ್ಣ ದೇವಾಲಯ, ಹಂಪಿ: ಹಂಪಿಯ ಬಾಲಕೃಷ್ಣ ಮಂದಿರ ಐತಿಹಾಸಿಕ ಮಹತ್ವವನ್ನು ಪಡೆದಿರುವ ಕರ್ನಾಟಕದ ಪ್ರಮುಖ ದೇವಾಲಯವಾಗಿದೆ. 15 ನೇ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯದ ಅರಸರ ಆಳ್ವಿಕೆಯ ಸಮಯದಲ್ಲಿ ನಿರ್ಮಾಣಗೊಂಡ ಈ ದೇವಾಲಕ್ಕೆ ಕೃಷ್ಣ ಜನ್ಮಾಷ್ಟಮಿಯ ದಿನ ನೀವು ಭೇಟಿ ನೀಡಬಹುದು. ಈ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ವಿಜಯನಗರ ಸಾಮ್ರಾಜ್ಯದ ಸಮಯದ ಕೆತ್ತನೆಗಳು, ವಾಸ್ತುಶಿಲ್ಪ ಮತ್ತು ಭವ್ಯತೆಯನ್ನು ಕಣ್ತುಂಬಿಕೊಳ್ಳಬಹುದು.

ಬೇಲೂರು ಚೆನ್ನಕೇಶವ ದೇವಾಲಯ: ಕೃಷ್ಣನ ಪುರಾತನ ದೇವಾಲಯಗಳ ಪೈಕಿ ಹಾಸನ ಜಿಲ್ಲೆಯಲ್ಲಿರುವ ಬೇಲೂರು ಚೆನ್ನಕೇಶವ ದೇಗುಲ ಕೂಡ ಒಂದು. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಅದರ ವಾಸ್ತುಶಿಲ್ಪ ಮತ್ತು ಭವ್ಯತೆಗೆ ಹೆಸರುವಾಸಿಯಾಗಿದೆ. ಕೃಷ್ಣಾಷ್ಟಮಿ ದಿನ ನೀವು ಈ ದೇಗುಲಕ್ಕೂ ಭೇಟಿ ನೀಡಬಹುದು.

ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಮಂಗಳೂರು: ಮಂಗಳೂರಿನ ಅತ್ಯಂತ ಜನಪ್ರಿಯ ಕೃಷ್ಣ ದೇಗುಲವೆಂದರೆ ಶ್ರೀ ಗೋಪಾಲ ಕೃಷ್ಣ ದೇವಾಲಯ. ಇಲ್ಲಿ ಕೃಷ್ಣಾಷ್ಟಮಿಯನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೃಷ್ಣಾಷ್ಟಮಿಯಂದು ನೀವು ಇಲ್ಲಿಗೆ ತಪ್ಪದೆ ಭೇಟಿ ನೀಡಬೇಕು.

ಅಪ್ರಮೇಯ ಅಂಬೆಗಾಲು ಕೃಷ್ಣ ದೇವಾಲಯ: ಚನ್ನಪಟ್ಟಣ ತಾಲೂಕಿನ ಮಾಳೂರು ಗ್ರಾಮದಲ್ಲಿರುವ ಅಪ್ರಮೇಯ ಅಂಬೆಗಾಲು ಕೃಷ್ಣ ದೇವಾಲಯಕ್ಕೂ ನೀವು ಕೃಷ್ಣಜನ್ಮಾಷ್ಟಮಿಯ ದಿನ ಭೇಟಿ ನೀಡಬಹುದು.




