- Kannada News Photo gallery Uttarakhand Joshimath Sinking why this tragedy happening Experts opinion in Kannada
Joshimath Sinking: ಉತ್ತರಾಖಂಡದ ಜೋಶಿಮಠ ಭೂಕುಸಿತಕ್ಕೆ ಕಾರಣವೇನು? ಇಲ್ಲಿದೆ ವಿವರ
ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ಭೂಕುಸಿತದ ಆತಂಕ ಹೆಚ್ಚಾಗಿದ್ದು, ಕುಟುಂಬಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ನಾಮಾವಶೇಷ ಭೀತಿ ಎದುರಿಸುತ್ತಿರುವ ಬದರಿನಾಥದ ಹೆಬ್ಬಾಗಿಲಿನ ವಿವಿಧ ಕಡೆಗಳ ಚಿತ್ರಗಳ ಜತೆಗೆ ಈ ದುರಂತಕ್ಕೆ ಕಾರಣವೇನು ಎಂಬುದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.
Updated on:Jan 07, 2023 | 9:34 AM

ಉತ್ತರಾಖಂಡದ ಜೋಶಿಮಠದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಪರಿಣಾಮವಾಗಿ 600 ಕುಟುಂಬಗಳ ತಕ್ಷಣದ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದೆ.

ಸುಮಾರು 1890 ಮೀಟರ್ ಎತ್ತರದಲ್ಲಿರುವ ಜೋಶಿಮಠವು ಹಿಮಾಲಯದ ಘರ್ವಾಲ್ನ ಒಂದು ಪಟ್ಟಣವಾಗಿದೆ.

ಜೋಶಿಮಠವು ಪಶ್ಚಿಮ ಮತ್ತು ಪೂರ್ವದಲ್ಲಿ ಕರ್ಮನಾಸ ಮತ್ತು ಧಕನಾಳ ಹೊಳೆಗಳು ಮತ್ತು ದಕ್ಷಿಣ ಮತ್ತು ಉತ್ತರದಲ್ಲಿ ಧೌಲಿಗಂಗಾ ಮತ್ತು ಅಲಕನಂದಾ ನದಿಗಳಿಂದ ಸುತ್ತುವರಿದ ಬೆಟ್ಟದ ಮಧ್ಯದ ಇಳಿಜಾರುಗಳಲ್ಲಿ ನೆಲೆಗೊಂಡಿದೆ.

2021ರ ಫೆಬ್ರವರಿಯಲ್ಲಿ ಜೋಶಿಮಠ ಸಮೀಪದ ತಪೋವನ ವಿಷ್ಣುಗಡದಲ್ಲಿನ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಮೇಘಸ್ಫೋಟದಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಹತ್ತಾರು ಮಂದಿ ಕಣ್ಮರೆಯಾಗಿದ್ದರು. ಮೇಘಸ್ಫೋಟ, ಭೂಕುಸಿತ, ಭೂಕಂಪದಂಥ ಅವಘಡಗಳು ಹಿಮಾಲಯದ ತಪ್ಪಲಿನ ಈ ರಾಜ್ಯದಲ್ಲಿ ಆಗಾಗ ವರದಿಯಾಗುತ್ತಿರುತ್ತವೆ.

ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿರುವುದು ಕೂಡ ಜೋಶಿಮಠ ಹಾಗೂ ಉತ್ತರಾಖಂಡದ ಇತರ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಹಿಮಕರಗಿ ಬರುವ ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಮಣ್ಣು ಬಿರುಕುಬಿಡುತ್ತದೆ. ಪರಿಣಾಮವಾಗಿ ಭೂಕುಸಿತದಂಥ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.

ಪ್ರಸ್ತುತ ಜೋಶಿಮಠದ ಭೂಕುಸಿತ, ಮುಳುಗಡೆ ಬಗ್ಗೆ ತುರ್ತಾಗಿ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ತಜ್ಞರ ತಂಡವೊನ್ನು ರಚಿಸಿದ್ದು, ಅದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ತಂಡ ನೀಡುವ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಶತಮಾನಗಳ ಹಿಂದೆ ಸಂಭವಿಸಿದ್ದ ಭೂಕುಸಿತದ ಅವಶೇಷಗಳ ಮೇಲೆಯೇ ಊರು ನಿರ್ಮಾಣಗೊಂಡಿದೆ ಎನ್ನಲಾಗಿದ್ದು, ಇದು ಹೆಚ್ಚು ಪ್ರಾಕೃತಿಕ ವಿಕೋಪಗಳಿಗೆ ತೆರೆದುಕೊಳ್ಳುವಂಥ ಪ್ರದೇಶವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಭೂಕುಸಿತದಿಂದಾಗಿ ಜೋಶಿಮಠದ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಬಿರುಕುಗಳು ಉಂಟಾಗಿವೆ. ಪರಿಣಾಮವಾಗಿ ಸಂಚಾರ ಕಷ್ಟಸಾಧ್ಯವಾಗಿದೆ.

ಮನೆಗಳು ಬಿರುಕುಬಿಟ್ಟಿರುವ ಕಾರಣ ಸ್ಥಳಾಂತರ ಮಾಡಲಾಗಿರುವ ನಿವಾಸಿಗಳು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವುದು
Published On - 9:24 am, Sat, 7 January 23




