- Kannada News Photo gallery water logging And traffic jam for rain lashes In many parts of bengaluru On May 1st Here Is Photos
ಬೆಂಗಳೂರಿನಲ್ಲಿ ಗುಡುಗು, ಮಿಂಚಿನ ಅಬ್ಬರ…ಧಾರಾಕಾರ ಮಳೆಗೆ ಹಲವೆಡೆ ಅವಾಂತರ
Bengaluru Rain: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಏಪ್ರಿಲ್ 30) ಭಾರೀ ಮಳೆಯಾಗಿದ್ದು, ಇಂದು (ಮೇ 01) ಸಹ ಮಳೆರಾಯ ಅಬ್ಬರಿಸಿದ್ದಾನೆ. ಸಂಜೆ ವೇಳೆ ಬೆಂಗಳೂರು ನಗರದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಜೆ.ಸಿ ರಸ್ತೆ, ಟೌನ್ ಹಾಲ್, ಕಾರ್ಪೋರೇಷನ್, ವಿಧಾನಸೌಧ ಸುತ್ತಮುತ್ತ ಭರ್ಜರಿ ಮಳೆ ಆಗಿದೆ. ಪರಿಣಾಮ ರಸ್ತೆಯಲ್ಲೇ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಬೆಂಗಳೂರು ಇವತ್ತು ಏನೆಲ್ಲಾ ಅವಾಂತರವಾಗಿದೆ ಎನ್ನುವ ವಿವರ ಇಲ್ಲಿದೆ.
Updated on: May 01, 2025 | 10:12 PM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮೇ 01) ಸಂಜೆ ಹಲವಡೆ ಗುಡುಗು ಮಿಂಚಿನ ಸಹಿತ ಭಾರೀ ಮಳೆಯಾಗಿದ್ದು ,(Rain) ವಾಹನ ಸವಾರರು ಪರದಾಡಿದ್ದಾರೆ.

ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಡ್ಸನ್ ರಸ್ತೆಯಲ್ಲಿ ಮರ ಬಿದ್ದಿದೆ. ಈ ಮರಬಿದ್ದಿರುವುದರಿಂದ ದೇವಾಂಗ ಜಂಕ್ಷನ್ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಇಂದು ಸಂಜೆ ಮಳೆರಾಯ ಅಬ್ಬರಕ್ಕೆ ಬೆಂಗಳೂರಿನ ಜ್ಞಾನಭಾರತಿ ಹತ್ತಿರ ನೀರು ನಿಂತಿರುವುದರಿಂದ ಆರ್ಆರ್ನಗರ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಬೆಂಗಳೂರಿ ತಾವರೆಕೆರೆ ಹತ್ತಿರ ಮರ ಬಿದ್ದಿರುವುದರಿಂದ ನಿಮಾನ್ಸ್ ಆಸ್ಪತ್ರೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಈ ಬಗ್ಗೆ ವಾಹನ ಸವಾರರು ಗಮನಿಸಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

ಕತ್ರಿಗುಪ್ಪೆ ಬಳಿ ಭಾರೀ ಮಳೆಯಾಗಿದ್ದು, ಆಟೋ ಮೇಲೆ ಮರ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 45 ವರ್ಷದ ಮಹೇಶ್ ಮೃತ ಆಟೋ ಚಾಲಕ. ಬೆಂಗಳೂರಲ್ಲಿ ದಿಢೀರ್ ಮಳೆ ಸುರಿದಿದ್ದು ಹಲವೆಡೆ ಅವಾಂತರವನ್ನೇ ಸೃಷ್ಟಿಸಿದೆ.

ಬೆಂಗಳೂರಿನ ಗುಂಜೂರು ಕೆಎಫ್ಸಿ ರಸ್ತೆಯ ಬಳಿ ಮಳೆ ನೀರು ನಿಂತ ಕಾರಣ ವಾಹನ ಸಂಚಾರ ನಿಧಾನಗತಿಯಲ್ಲಿರುತ್ತದೆ. ಯಾವುದೇ ತುರ್ತು ಪರಿಸ್ಥಿತಿಯ ಸಮಯದಲ್ಲಿ ತಕ್ಷಣದ ಸಹಾಯಕ್ಕಾಗಿ 112 ನಂಬರಿಗೆ ಕರೆ ಮಾಡಿ ಎಂದು ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ನಗರದಲ್ಲಿ ಧಾರಾಕಾರ ಮಳೆ ಪರಿಣಾಮ ಭಾರೀ ಅವಾಂತರ ಸೃಷ್ಟಿಸಿದ್ದು, ವಿಠ್ಠಲ್ ಮಲ್ಯ ರಸ್ತೆಯಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತಿರುವ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಿಠ್ಠಲ್ ಮಲ್ಯ ರಸ್ತೆಯಿಂದ ರಿಚ್ಮಂಡ್ ಟೌನ್ ಕಡೆಗೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಹಾಗೂ ವಾಹನಗಳ ಓಡಾಟಕ್ಕೆ ಅಡಚಣೆಯಾಗಿದೆ.



















