
ಹಾಗಾದರೆ, ಸುದೀರ್ಘ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ಕೈಯಿಂದ ಬಂಗಳಾದ ಅಧಿಕಾರ ಜಾರಿದ್ಹೇಗೆ? ಬಿಜೆಪಿಗೆ ವರದಾನವಾದ ಅಂಶಗಳು ಯಾವುವು? ದೀದಿ ಹಿನ್ನಡೆಗೆ ಕಾರಣವಾದ ಪ್ರಮುಖ ಅಂಶಗಳೇನು? ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸೋಲು-ಗೆಲುವಿಗೆ ಕಾರಣವಾದ ಅಂಶಗಳನ್ನು ಹುಡುಕುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಭ್ರಷ್ಟಾಚಾರ ಮತ್ತು ನಿರುದ್ಯೋಗ: ಮಮತಾ ಸರ್ಕಾರವನ್ನು ಕಾಡಿದ್ದು ಮುಖ್ಯವಾಗಿ ಭ್ರಷ್ಟಾಚಾರದ ಆರೋಪಗಳು. ಶಿಕ್ಷಕರ ನೇಮಕಾತಿ ಹಗರಣ ಮತ್ತು ‘ಆರ್.ಜಿ ಕರ್’ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಪ್ರಕರಣ ರಾಜ್ಯದ ಜನರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಮೂಡಿಸಿತ್ತು. ಕೈಗಾರಿಕೆಗಳ ಕೊರತೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಯುವಜನತೆಯನ್ನು ಬಿಜೆಪಿಯತ್ತ ಸೆಳೆಯಿತು.

ಮುಸ್ಲಿಂ ಮತಗಳ ವಿಭಜನೆ: ಮಾಲ್ಡಾ ಮತ್ತು ಮುರ್ಷಿದಾಬಾದ್ನಂತಹ ಜಿಲ್ಲೆಗಳಲ್ಲಿ ಬಿಜೆಪಿಯ ಮುನ್ನಡೆ ಮತ್ತು ಹುಮಾಯೂನ್ ಕಬೀರ್ ಅವರ ಗೆಲುವು ಮುಸ್ಲಿಂ ಮತಗಳಲ್ಲಿನ ವಿಭಜನೆಯನ್ನು ಸ್ಪಷ್ಟವಾಗಿ ಕಾಣಿಸುವಂತೆ ಮಾಡಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಉತ್ತರ 24 ಪರಗಣಗಳು ಮತ್ತು ದಕ್ಷಿಣ 24 ಪರಗಣಗಳಂತಹ ಜಿಲ್ಲೆಗಳಲ್ಲಿ ಸಹ ಬಿಜೆಪಿ ಪರ ಅಲೆ ಕಂಡುಬಂದಿದೆ.

ಕೈಬಿಟ್ಟ ಮಹಿಳಾ ಮತದಾರರು: ಮಮತಾ ಬ್ಯಾನರ್ಜಿ ಅವರ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪ್ರತಿಯಾಗಿ ಬಿಜೆಪಿ ಘೋಷಿಸಿದ ಮಹಿಳೆಯರಿಗೆ ಮಾಸಿಕ 3,000 ರೂ. ಮತ್ತು ಉಚಿತ ಬಸ್ ಪ್ರಯಾಣದ ಭರವಸೆ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ, ದೀದಿಯ ಸಾಂಪ್ರದಾಯಿಕ ಮಹಿಳಾ ಮತಬ್ಯಾಂಕ್ ಈ ಬಾರಿ ಚದುರಿರುವುದು ಸ್ಪಷ್ಟವಾಗಿದೆ.

ದಲಿತ ಮತ್ತು ಆದಿವಾಸಿಗಳ ಬೆಂಬಲ: ಉತ್ತರ ಬಂಗಾಳ ಮತ್ತು ಜಂಗಲ್ ಮಹಲ್ ಭಾಗದ ಎಸ್ಸಿ/ಎಸ್ಟಿ ಹಾಗೂ ಮತುಮಾ ಸಮುದಾಯಗಳು ಬಿಜೆಪಿಗೆ ಬಲವಾಗಿ ಬೆಂಬಲ ನೀಡಿದ್ದು, ಟಿಎಂಸಿಯ ಕೋಟೆಯನ್ನು ಭೇದಿಸಲು ಸಹಕಾರಿಯಾಗಿದೆ.

ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮ: ಮತದಾರರ ಪಟ್ಟಿಯಿಂದ ಸುಮಾರು 91 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಿದ್ದು (SIR ಪ್ರಕ್ರಿಯೆ) ಹಾಗೂ ಕೇಂದ್ರ ಭದ್ರತಾ ಪಡೆಗಳ ನಿಯೋಜನೆಯಿಂದಾಗಿ ಮತದಾರರು ಯಾವುದೇ ಭಯವಿಲ್ಲದೆ ಮತ ಚಲಾಯಿಸಲು ಸಾಧ್ಯವಾಯಿತು. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.