
ಬಾಗಲಕೋಟೆ, (ಮಾರ್ಚ್ 19): ರಾಜ್ಯದ ಜನರ ಚಿತ್ತ ದಾವಣಗೆರೆ ದಕ್ಷಿಣ (Davanagere South By Election) ಹಾಗೂ ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರ ಉಪಚುನಾವಣೆಯತ್ತ ನೆಟ್ಟಿದೆ. ದಿವಂಗತ ಎಚ್.ವೈ ಮೇಟಿ ನಿಧನದ ನಂತರ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಟಿಕೆಟ್ ಗಾಗಿ ಎರಡು ಪಕ್ಷದಲ್ಲಿ ಫೈಟ್ ಮಧ್ಯೆ ಬಿಜೆಪಿ ಕೊನೆಗೂ ನಿರೀಕ್ಷೆ ಎಂಬಂತೆ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ಘೋಷಣೆ ಮಾಡಿ ಯುಗಾದಿಯ ಗಿಪ್ಟ್ ನೀಡಿದ್ದು, ಈಗಾಗಲೇ ಬಿಜೆಪಿ ಕಾರ್ಯಕರ್ತರು ಗ್ರೌಂಡ್ ಲೆವಲ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತ ಕೈ ಪಾಳೆಯದಲ್ಲಿ ಟಿಕೆಟ್ ಗೊಂದಲ ಇನ್ನು ಬಗೆಹರಿದಿಲ್ಲ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಚ್.ವೈ ಮೇಟಿ ವಿರುದ್ಧ ಕೇವಲ 5978 ಅಲ್ಪ ಮತಗಳಿಂದ ಸೋತಿರುವುದಕ್ಕೆ ಈ ಬಾರಿ ಬೈ ಎಲೆಕ್ಷನ್ ಟಿಕೆಟ್ ಚರಂತಿಮಠ ಅವರಿಗೆ ನೀಡಲು ಮುಖ್ಯ ಕಾರಣವಾಗಿದೆ. ಪ್ರಬಲ ಲಿಂಗಾಯತ ಸಮುದಾಯ.ಟಿಕೆಟ್ ಸಿಕ್ಕ ಖುಷಿಯಲ್ಲಿ ಚರಂತಿಮಠ ಟಿವಿ9 ಜೊತೆ ಮಾತಾಡಿ ಹೈಕಮಾಂಡ್ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಲ ಆಂತರಿಕ ಗೊಂದಲ ಸರಿಪಡಿಸಿಕೊಂಡು, ನಾವೇ ಗೆಲ್ಲುತ್ತೇವೆ.ಈ ಬಾರಿ ಗೆಲುವು ಖಚಿತ. ಅದು ನನ್ನ ಗೆಲುವಾಗುವುದಿಲ್ಲ ಬಿಜೆಪಿ ಹಾಗೂ ಹಿಂದುತ್ವದ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಬಾಗಲಕೋಟೆ ಕ್ಷೇತ್ರದಲ್ಲಿ ಅಖಂಡ ಲಿಂಗಾಯತ ಸಮುದಾಯ ಪ್ರಾಭಲ್ಯ ಹೊಂದಿದ್ರೆ, ಎಸ್.ಸಿ (ಎಡ/ಬಲ), ಎಸ್.ಟಿ, ಕುರುಬ ಹಗೂ ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸಿ, ಅಹಿಂದ ವರ್ಗ ಹಾಗು ಅನುಕುಂಪದ ಆಧಾರದ ಮೇಲೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ದಿವಂಗತ ಮೇಟಿ ಅವರ ಮಕ್ಕಳಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ತಯಾರಿದ್ದಾರೆ. ಆದರೆ ಮೇಟಿ ಅವರ ಮಕ್ಕಳಲ್ಲೇ ಟಿಕೆಟ್ ಗೊಂದಲ ಜೋರಾಗಿದೆ. ಮೇಟಿ ಅವರ ಕಿರಿಯ ಪುತ್ರಿ ಮಹಾದೇವಿ ಟಿಕೆಟ್ ನೀಡದಿದ್ರೆ ಬಂಡಾಯ ಅಭ್ಯರ್ಥಿ ಆಗುವ ಹೇಳಿಕೆ ನೀಡಿದ್ದರು.ಇದು ಕೈ ನಾಯಕರ ತಲೆನೋವಿಗೆ ಕಾರಣವಾಗಿದೆ.
ಶಾಂತ ಸ್ವಭಾವದ ಮೇಟಿ ಅವರ ಎರಡನೇ ಪುತ್ರ ಉಮೇಶ್ ಮೇಟಿಗೆ ಟಿಕೆಟ್ ನೀಡಲು, ಕೈ ನಾಯಕರಿಗೆ ಬಹುತೇಕ ಒಪ್ಪಿದ್ದಾರೆ.ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳಿ ಎಂದು ಉಮೇಶ್ ಮೇಟಿಗೆ ಕೈ ನಾಯಕರು ಹೇಳಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಮಹಾದೇವಿ ಮೇಟಿ ಹಾಗೂ ಹಿರಿಯ ಪುತ್ರ ಉಮೇಶ್ ಮೇಟಿ ಸಹ ನಾನು ಆಕಾಂಕ್ಷಿ ಎಂದಿರುವುದು ಹೈ ಕಮಾಂಡ್ ನಾಯಕರ ತಲೆಬಿಸಿಗೆ ಕಾರಣವಾಗಿದೆ.ಹೀಗಾಗಿ ಮೇಟಿ ಅವರ ನಾಲ್ಕು ಜನ ಮಕ್ಕಳ ಜೊತೆ ಸಭೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಹೈ ಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ. ಅವರ ಪರವಾಗಿ ಎಲ್ಲರೂ ಕೆಲಸ ಮಾಡಬೇಕು ಎಂದು ಹೇಳಿ ಕಳುಹಿಸಿದ್ದರು. ಹೀಗಾಗಿ ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಕ್ಕೆ ಕನ್ಫರ್ಮ್ ಆಗಿದ್ದು, ಆದ್ರೆ ನಾಲ್ವರಲ್ಲಿ ಯಾರಿಗೆ ಎನ್ನುವುದೇ ನಿಗೂಢವಾಗಿದೆ.
ಇನ್ನೊಂದೆಡೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಸಹ ಕಗ್ಗಂಟಾಗಿದೆ. ಮುಸ್ಲಿಮರು ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವುದರಿಂದ ಬಾಗಲಕೋಟೆ ಅಭ್ಯರ್ಥಿ ಹೆಸರು ಘೋಷಣೆಯಾಗುತ್ತಿರುವುದಕ್ಕೆ ವಿಳಂಬವಾಗುತ್ತಿದೆ.