ಕಾಂಗ್ರೆಸ್​ಗೆ ಐಟಿ ನೋಟಿಸ್​ ಬಿಜೆಪಿಯವರ ತೆರಿಗೆ ಭಯೋತ್ಪಾದನೆ ಎಂದ ಪ್ರಿಯಾಂಕ್​ ಖರ್ಗೆ

ತೆರಿಗೆ ವಂಚನೆ ಸಂಬಂಧ ಕಾಂಗ್ರೆಸ್ ಪಕ್ಷದ ಕೆಲ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ಕೊಂಡ ಬೆನ್ನಲ್ಲೇ ಆದಾ ಯ ತೆರಿಗೆ ಇಲಾಖೆಯು ಇದೀಗ 1823 ಕೋಟಿ ರೂ. ಪಾವತಿಸುವಂತೆ ಮತ್ತೆ ಆ ಪಕ್ಷಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಬಿಜೆಪಿ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.  

ಕಾಂಗ್ರೆಸ್​ಗೆ ಐಟಿ ನೋಟಿಸ್​ ಬಿಜೆಪಿಯವರ ತೆರಿಗೆ ಭಯೋತ್ಪಾದನೆ ಎಂದ ಪ್ರಿಯಾಂಕ್​ ಖರ್ಗೆ
ಸಚಿವ ಪ್ರಿಯಾಂಕ್​ ಖರ್ಗೆ
Follow us
| Updated By: ವಿವೇಕ ಬಿರಾದಾರ

Updated on: Mar 30, 2024 | 12:25 PM

ಕಲಬುರಗಿ, ಮಾರ್ಚ್​ 30: ಆದಾಯ ತೆರಿಗೆ ಇಲಾಖೆಯು (IT) 1823 ಕೋಟಿ ರೂ.ಪಾವತಿಸುವಂತೆ ಕಾಂಗ್ರೆಸ್​ಗೆ​ ನೋಟಿಸ್​ ನೀಡಿದೆ. ಇದು ಬಿಜೆಪಿಯವರ (BJP) ತೆರಿಗೆ ಭಯೋತ್ಪಾದನೆಯಾಗಿದ್ದು, ನಮ್ಮನ್ನು ಹೆದರಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ವಾಗ್ದಾಳಿ ಮಾಡಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ, ಇಡಿ, ಸಿಬಿಐ ಬಿಜೆಪಿಯ ಹೊಸ ಘಟಕಗಳು. ಈ ಹೊಸ ಘಟಕಗಳಿಂದ ವಿಪಕ್ಷದವರಿಗೆ ಪ್ರೇಮ ಪತ್ರಗಳು ಬರುತ್ತಿವೆ. ಯಾವ ಆಧಾರದ ಮೇಲೆ ಇಲಾಖೆ ನೋಟಿಸ್ ನೀಡಿದೆ ಎಂಬುದು ಗೊತ್ತಿಲ್ಲ. ಪಕ್ಷದ ಇತಿಹಾಸದಲ್ಲಿ ಎಂದೂ ಕೂಡಾ ಈ ರೀತಿ ಆಗಿರಲಿಲ್ಲ ಎಂದು ತಿಳಿಸಿದರು.

ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯಿತಿ ಇದೆ. 14 ಲಕ್ಷ ರೂ. ಲೋಪ ಆಗಿದೆ ಅಂತ 1,823 ಕೋಟಿ ರೂ. ಪಾವತಿಸಿ ಅಂತ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 14 ಲಕ್ಷ ರೂ. ಬಗ್ಗೆ ದಾಖಲೆ ನೀಡಿದ್ದೇವೆ, ಆದರೂ ಕೂಡ ದಂಡ ಕಟ್ಟಲು ಹೇಳಿದ್ದಾರೆ. ಬಿಜೆಪಿಯ ಅನಾಮದೇಯ 92 ಪ್ರಕರಣಗಳಿವೆ. 4.5 ಲಕ್ಷಕ್ಕೆ ದಾಖಲೆ ಇಲ್ಲ. ಬಿಜೆಪಿಗೆ 2016-17ರಲ್ಲಿ 47 ಕೋಟಿ ರೂ. 2016-17ರಲ್ಲಿ ದೇಣಿಗೆ ಬಂದಿದೆ. ಇದಕ್ಕೆ ದಾಖಲೆ ಇಲ್ಲ ಎಂದು ತಿಳಿಸಿದ್ದಾರೆ.

ಐಟಿ, ಇಡಿ, ಸಿಬಿಐ ಬಿಜೆಪಿಯ ಸ್ಟಾರ್ ಪ್ರಚಾರಕರು. ಬಿಜೆಪಿ ಪಕ್ಷಕ್ಕೆ ಕೆಲವೊಂದು ಅನಾಮಧೇಯ ಖಾತೆಯಿಂದ ದೇಣಿಗೆ ಬಂದಿದೆ. ಇದು ಐಟಿ ಇಲಾಖೆಗೆ ಕಾಣುತ್ತಿಲ್ಲ. ಪ್ರಫುಲ್ ಪಟೇಲ್ ಬಿಜೆಪಿಗೆ ಸೇರಿ ಇನ್ನು ಹತ್ತು ತಿಂಗಳಾಗಿಲ್ಲ, ಆಗಲೇ ಸಿಬಿಐ ಪ್ರಫುಲ್ ಪಟೇಲ್​ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಇದನ್ನು ಯಾಕೆ ಚುನಾವಣೆ ಆಯೋಗ ನೋಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಈ ಮೂರು ಸಂಸ್ಥೆಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಬಿಜೆಪಿಯ ಉಳಿದ ಎಲ್ಲಾ ಸೆಲ್​ಗಳು ನಿಷ್ಕ್ರಿಯಗೊಂಡಿವೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವಧಿಯಲ್ಲಿನ ಡೈರಿ ಏನಾಯ್ತು? ಸಹಾರ ಡೈರಿ ಏನಾಯ್ತು, ಜೈಲ್ ಡೈರಿ ಏನಾಯ್ತು? ಯಾರು ಬಿಜೆಪಿ ಸೇರತ್ತಾರೆ ಅವರು ದೂದ್ ಕಾ ಧುಲಾ ಆಗುತ್ತಾರೆ ಎಂದರು.

ಮನುವಾದಿಗಳು ಬೆದರಿಕೆ ಪತ್ರ ಕಳಿಸಿದ್ದಾರೆಂದು ಹೇಳಿದ್ದೇನೆ. ಆದರೆ, ಸಂಸದ ಉಮೇಶ್​ ಜಾಧವ್ ತಮ್ಮ ಮೇಲೆ ಹಾಕಿಕೊಳ್ಳುತ್ತಿದ್ದಾರೆ. ಜಾಧವ್ ಬೆದರಿಕೆ ಪತ್ರ ಕಳಿಸಿದಾರೆಂದು ನಾನು ಹೇಳಿದ್ನಾ?ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಏಕೆ ಮುಟ್ಟಿಕೊಳ್ಳುತ್ತಾರೆ? ನೀವು ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಿ ಉಮೇಶ್​ ಜಾಧವ್​ ಅವರೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ವಿವಾದ: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ

ಈ ಚುನಾವಣೆ ಪ್ರಿಯಾಂಕ್ ಖರ್ಗೆ v/s ಉಮೇಶ್ ಜಾಧವ್ ಅಲ್ಲ. ಈ ಚುನಾವಣೆ ಇರುವುದು ಇಡೀ ಕಲಬುರಗಿ ಅಭಿವೃದ್ಧಿ ಬಗ್ಗೆ. ನೀವು ಕಲಬುರಗಿ ಜನರಿಗೆ ಏನು ಕೊಡುಗೆ ನೀಡಿದ್ದಿರಿ? ಖರ್ಗೆ ಅಂತವರನ್ನು ಸೋಲಿಸಿದ ನೀವು ಕೊನೆ ಪಕ್ಷ ಅವರ ಲೇವಲ್‌ಗೆ ಆದರೂ ಇರಿ. 5-50 ಯೋಜನೆಗಳನ್ನು ತಂದಿದ್ದೇನೆಂದು ಜಾಧವ್ ಸುಳ್ಳು ಹೇಳ್ಳುತ್ತಿದ್ದಾರೆ. ವಾಜಪೇಯಿ ಸರ್ಕಾರ ಅವಧಿಯಲ್ಲಿ 371(J) ಕಲಂನ್ನು ಅಂದಿನ ಗೃಹ ಸಚಿವ ಅಡ್ವಾಣಿ ತಿರಸ್ಕರಿಸಿದ್ದರು ಎಂದು ವಾಗ್ದಾಳಿ ಮಾಡಿದರು.

ರೈಲ್ವೆ ಡಿವಿಷನ್ ಬಂದಿದ್ರೆ ಕಲಬುರಗಿಗೆ ವಂದೇ ಭಾರತ್ ಅಂತಹ ಹತ್ತಾರು ರೈಲುಗಳು ಬರುತ್ತಿದ್ದವು. ಮಾತೆತ್ತಿದರೇ ಎರಡು ರೈಲು ತಂದಿದ್ದೀನಿ ಅಂತಾರೆ. ಐದು ವರ್ಷಗಳ ಅವಧಿಯಲ್ಲಿ ಎರಡು ರೈಲು ಬಿಟ್ಟರೇ ಬೇರೆ ಎನು ಅಭಿವೃದ್ಧಿ ಕೆಲಸ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಚಿವರಿದ್ದಾಗ 28 ರೈಲುಗಳನ್ನು ತರಲಾಗಿತ್ತು. ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ‌. ನೀವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಎಂದು ಸವಾಲು ಎಸೆದರು.

ಪ್ರಧಾನಿ ಮೋದಿಯವರ ಯಾವುದೇ ಕಾರ್ಯಕ್ರಮಗಳು ಸ್ವಂತದಲ್ಲ. ನಮ್ಮ ಯೋಜನೆಗಳ ಹೆಸರು ಬದಲಾಯಿಸಿ ತಮ್ಮ ಯೋಜನೆಗಳೆಂದು ಹೇಳುತ್ತಿದ್ದಾರೆ. ಮೋದಿಜೀ ಕೀ ಗ್ಯಾರಂಟಿ ಎಂದು ಹೊಸ ಟ್ರೇಂಡ್ ಶುರು ಮಾಡಿದ್ದಾರೆ. ನಮ್ಮ ರಾಜ್ಯದ ಯೋಜನೆಗಳನ್ನೇ ಮೋದಿ ಗ್ಯಾರಂಟಿ ಯೋಜನೆಗಳೆಂದು ಬಿಂಬಿಸುತ್ತಿದ್ದಾರೆ. ನಮ್ಮ ಯೋಜನೆಗಳಿಗೆ ಬೇರೆ ಹೆಸರಿಟ್ಟು ಪ್ರಚಾರ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ