
ಬೆಂಗಳೂರು, ಸೆಪ್ಟೆಂಬರ್ 06: ‘ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಆದರೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ನನಗೆ ವಯಸ್ಸಾಯ್ತು ಅಂತಾ ಸ್ಪರ್ಧಿಸಲ್ಲ ಅಂತಾ ಹೇಳುತ್ತಿಲ್ಲ. ಚುನಾವಣಾ ವ್ಯವಸ್ಥೆ ಈಗ ಬಹಳ ದುಬಾರಿ ಆಗ್ತಾ ಇದೆ. ನಮ್ಮ ಚುನಾವಣಾ ವ್ಯವಸ್ಥೆ ಸುಧಾರಣೆ ಆಗಬೇಕು. ನಿಮಗೆ ಸಮಾನ ಅವಕಾಶಗಳು ಸಿಗುವವರೆಗೆ ಹಾಗೂ ಜಾತಿ ವ್ಯವಸ್ಥೆ ಹೋಗುವವರೆಗೆ ನಿಮ್ಮ ಜೊತೆಗಿದ್ದು ಹೋರಾಟ ಮಾಡುತ್ತೇನೆ, ಹೀಗಾಗಿ ನೀವ್ಯಾರೂ ಆತಂಕ ಪಡಬೇಕಾಗಿಲ್ಲ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಜತ ಮಹೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹಿಂದುಳಿದ ಜಾತಿಯವನೆಂದು ಹೇಳಿಕೊಳ್ಳಲು ಯಾವುದೇ ಮುಜುಗರವಿಲ್ಲ. ನಮ್ಮ ದೇಶದಲ್ಲಿದ್ದ ಶ್ರೇಣಿಕೃತ ಚಾತುರ್ವರ್ಣ ವ್ಯವಸ್ಥೆಯಲ್ಲಿ ನಾನು ಶೂದ್ರ ಜಾತಿಗೆ ಸೇರಿದವನು. ಲಿಂಗಾಯತರು, ಒಕ್ಕಲಿಗರು ಸೇರಿದಂತೆ ನಾವೆಲ್ಲರೂ ಶೂದ್ರರೇ ಆಗಿದ್ದೇವೆ’ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ರಜತ ಮಹೋತ್ಸವ ಮತ್ತು ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ, “ಸಮಾನತೆಯ ಸಂಕಲ್ಪ” ಹೆಸರಿನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಹಿಂದುಳಿದ ಜಾತಿಗಳ ಬಂಧುಗಳ ಪ್ರೀತಿಯ ಸನ್ಮಾನವನ್ನು ಸ್ವೀಕರಿಸಿದೆ.
ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಸಚಿವರಾದ ಬೈರತಿ ಸುರೇಶ್, ಸಂತೋಷ್… pic.twitter.com/PUYgc8jPP4
— Siddaramaiah (@siddaramaiah) September 6, 2026
ಇದನ್ನೂ ಓದಿ: “ರಾಹುಲ್ ಗಾಂಧಿ ಹೇಳಿದ್ದಂತೆ ನಾನು ನಡೆದುಕೊಂಡಿದ್ದೇನೆ”: ಸಿಎಂ ಸ್ಥಾನದ ರಾಜೀನಾಮೆ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
‘ಅಂದು ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರಿಗೆ ಮಾತ್ರ ವಿದ್ಯಾಭ್ಯಾಸದ ಅವಕಾಶವಿತ್ತು. ಶೂದ್ರರು ದಡ್ಡರೆಂದಲ್ಲ, ಬದಲಿಗೆ ಅವರಿಗೆ ಓದುವ ಅವಕಾಶಗಳೇ ಇರಲಿಲ್ಲ. ಅಂದೇ ಸಮಾನ ಅವಕಾಶಗಳನ್ನು ನೀಡಿದ್ದರೆ ಸಮಾಜದಲ್ಲಿ ಈ ಮಟ್ಟದ ಅಸಮಾನತೆ ಸೃಷ್ಟಿಯಾಗುತ್ತಿರಲಿಲ್ಲ’ ಎಂದು ಹೇಳಿದರು.
ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಈಗಾಗಲೇ ಸ್ವೀಕರಿಸಿದ್ದೇನೆ. ಆದರೆ ವರದಿ ಬಹಿರಂಗ ಮಾಡಬಾರದೆಂದು ಕೋರ್ಟ್ ಆದೇಶವಿದೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ ನಡೆಸುವಂತೆ ಸೂಚನೆ ನೀಡಲಾಗಿದೆ. ಮಧುಸೂಧನ್ ಆರ್. ನಾಯ್ಕ್ ವರದಿ ರಾಜ್ಯದಲ್ಲಿ ಕಡ್ಡಾಯವಾಗಿ ಜಾರಿಯಾಗಲೇಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮುಡಾ ಪ್ರಕರಣಕ್ಕೆ ಹೊಸ ತಿರುವು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಇಡಿ
‘ನಮ್ಮ ಪಕ್ಷ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನನ್ನ ಮಾತನ್ನು ಕೇಳುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಜಾತಿಗಣತಿ ಜಾರಿಯಾದರೆ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಕನಿಷ್ಠ ಶೇಕಡಾ 75ರಷ್ಟು ಮೀಸಲಾತಿ ಸಿಗಲೇಬೇಕು. ಜೊತೆಗೆ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಸಮರ್ಪಕ ಮೀಸಲಾತಿ ದೊರೆತಾಗ ಮಾತ್ರ ಎಲ್ಲರಿಗೂ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಸಿಗಲು ಸಾಧ್ಯ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:12 pm, Sun, 6 September 26