ಹೈದರಾಬಾದ್: ದೇಶಾದ್ಯಂತ ಘೋಷಿಸಿದ ಲಾಕ್ಡೌನ್ನಿಂದ ಕಾರ್ಮಿಕರು ಮತ್ತು ರೈತರ ಜೊತೆ ಸಮಾಜದ ಹಲವಾರು ವರ್ಗದವರೂ ಸಂಕಷ್ಟ ಎದುರಿಸಬೇಕಾಯಿತು. ಆದರೆ, ಇವರಲ್ಲಿ ಒಬ್ಬರು ಸಾಫ್ಟ್ವೇರ್ ಎಂಜಿನಿಯರ್ ಸಹ ಇದ್ದಾರೆ ಎಂದರೆ ನಂಬ್ತೀರಾ? ಅರೇ, ಅವರಿಗೇನು? ಒಳ್ಳೇ ಸಂಬಳದ ಜೊತೆ ಲ್ಯಾಪ್ಟಾಪ್ ಹಾಗೂ Work From Home ನಂಥ ಅನುಕೂಲ ಕೊಟ್ಟಿರ್ತಾರೆ. ಲಾಕ್ಡೌನ್ನಿಂದ ಅವರಿಗ್ಯಾಕೆ ತೊಂದರೆ ಆಗುತ್ತೆ? ಅಂತಾ ನಿಮ್ಮ ಮನಸ್ಸಲ್ಲಿ ಪ್ರಶ್ನೆ ಎದ್ದಿದ್ರೇ ಈ ಸ್ಟೋರಿ ಓದಿ.
ಅಂದ ಹಾಗೆ, ನಾವು ಹೇಳೋಕೆ ಹೊರಟಿರೋ ಸಂಗತಿ 26 ವರ್ಷದ ಟೆಕ್ಕಿ ಉನದಾದಿ ಶಾರದಾರದ್ದು. ಕೆಲವು ತಿಂಗಳ ಹಿಂದೆ ಹೈದರಾಬಾದ್ನ ಪ್ರತಿಷ್ಠಿತ MNC ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ನೌಕರಿ ಗಿಟ್ಟಿಸಿಕೊಂಡ ಶಾರದಾ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಡ ಕುಟುಂಬದವರಾದ ಶಾರದಾಗೆ ಈಗಲಾದ್ರೂ ತಮ್ಮ ಕಷ್ಟಗಳು ತೀರಿತು ಅನ್ನೋ ಸಂತಸವಿತ್ತು.
ಆದರೆ, ಆಗಲೇ ನೋಡಿ ಕೊರೊನಾ ಮಹಾಮಾರಿ ದೇಶಕ್ಕೆ ಎಂಟ್ರಿ ಕೊಟ್ಟಿದ್ದು. ಕ್ರೂರಿ ಬಂದಿದ್ದೇ ತಡ, ಜನರನ್ನ ಬಲಿ ಪಡೆಯೋದರ ಜೊತೆಗೆ ಹಲವರ ಉದ್ಯೋಗವನ್ನೇ ನುಂಗಿಬಿಟ್ಟಿತು. ಅದರಲ್ಲಿ ಶಾರದಾ ಸಹ ಒಬ್ಬರು. ತನ್ನ ಕಂಪನಿಯ ಆರ್ಥಿಕ ಸ್ಥಿತಿ ದುಸ್ತರವಾಗಿ, ಸೇರಿದ ಕೆಲವೇ ತಿಂಗಳಲ್ಲಿ ಶಾರದಾ ನೌಕರಿ ಕಳೆದುಕೊಳ್ಳಬೇಕಾಯ್ತು.
ಶಾರದೆ ‘ಲಕ್ಷ್ಮೀ’ ಪುತ್ರಿಯಾಗಿದ್ದು.. ಟೆಕ್ಕಿ ಟು ತರಕಾರಿ ವ್ಯಾಪಾರಿ! ಒಂದು ಕಡೆ ನೌಕರಿ ಕಳೆದುಕೊಂಡ ನೋವು. ಮತ್ತೊಂದೆಡೆ ಕುಟುಂಬ ನಿರ್ವಹಣೆಯ ಚಿಂತೆ ಶಾರದಾಗೆ ಕಾಡಿತು. ಇದರಿಂದ ಒಂದು ಕ್ಷಣ ಆಕೆ ಕುಗ್ಗಿದರೂ ಧೃತಿಗೆಡದೆ ಜೀವನೋಪಾಯಕ್ಕಾಗಿ ಏನಾದರೂ ಮಾಡಲೇಬೇಕು ಅಂತಾ ಯೋಚಿಸಿದರು.
ಆಗ, ಥಟ್ ಅಂತಾ ನೆನಪಾಗಿದ್ದು ತನ್ನ ತಂದೆ ವೆಂಕಟಯ್ಯನ ಬೀದಿ ಬದಿ ತರಕಾರಿ ವ್ಯಾಪಾರ. ಈ ಹಿಂದೆಯೂ ವ್ಯಾಪಾರದಲ್ಲಿ ತನ್ನ ತಂದೆಗೆ ಸಹಾಯ ಮಾಡಿದ್ದ ಅನುಭವ ಶಾರದಾಗೆ ಇತ್ತು. ಹೀಗಾಗಿ. ಮರುಯೋಚಿಸದೆ ತರಕಾರಿ ವ್ಯಾಪಾರ ಮಾಡಲು ಮುಂದಾದರು ಶಾರದಾ. ಝಣಝಣ ಲಕ್ಷ್ಮೀ, ಟೆಕ್ಕೀ ಶಾರದೆಯ ಕೈಹಿಡಿದಳು.
ಸುಮಾರು 12 ಗಂಟೆ ಕಾಲ ತರಕಾರಿ ವ್ಯಾಪಾರ ಮಾಡುವ ಶಾರದಾಗೆ ಈ ಕೆಲಸ ತನ್ನ ಘನತೆಗೆ ತಕ್ಕಂಥದ್ದಲ್ಲ ಎಂದು ಅನ್ನಿಸಲೇ ಇಲ್ಲವಂತೆ. ಒಣ ಪ್ರತಿಷ್ಠೆಗೆ ಒಗ್ಗು ಹೋಗದೇ, ಗೌರವಯುತ ಬದುಕು ನಡೆಸಲು ಯಾವ ಕೆಲಸವಾದರೇನು ಅಂತಾ ಜೀವನ ಸಾಗಿಸುತ್ತಿದ್ದಾರೆ. ತನ್ನ ಕುಟುಂಬಕ್ಕೆ ಬೆನ್ನೆಲು‘ಬಾಗಿ’ ನಿಂತಿದ್ದಾರೆ. ಈ ಮಧ್ಯೆ, ಶಾರದಾ ಪರಿಸ್ಥಿತಿ ಸುಧಾರಿಸಿದ ಮೇಲೆ ಮತ್ತೊಮ್ಮೆ ಸಾಫ್ಟ್ವೇರ್ ಉದ್ಯೋಗಕ್ಕೆ ಮರಳಲು ನಿರ್ಧರಿಸಿದ್ದಾರೆ.