AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕಷ್ಟಕಾಲದಲ್ಲಿ ಅಡವಿಟ್ಟ ಚಿನ್ನಾಭರಣ ಬಿಡಿಸಲು ಸಾಧ್ಯವಾಗುತ್ತಿಲ್ಲವೇ? ಈ ಸರಳ ಪರಿಹಾರ ಪ್ರಯತ್ನಿಸಿ

ಕಷ್ಟಕಾಲದಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು ಮರಳಿ ಪಡೆಯುವುದು ಸವಾಲಾಗಿ ಪರಿಣಮಿಸುತ್ತದೆ. ಶುಕ್ರವಾರದ ಬ್ರಾಹ್ಮೀ ಮುಹೂರ್ತದಲ್ಲಿ ಹಳದಿ ಬಟ್ಟೆ, ಅರಿಶಿನ ಕೊಂಬು, ಒಂದು ರೂಪಾಯಿ ನಾಣ್ಯ ಮತ್ತು ಬಿಳಿ ಸಾಸಿವೆಯನ್ನು ಬಳಸಿ ಮಾಡುವ ಈ ವಿಶಿಷ್ಟ ಪೂಜೆಯು ಆರ್ಥಿಕ ಸಂಕಷ್ಟಗಳನ್ನು ನಿವಾರಿಸಿ, ಅಡವಿಟ್ಟ ಆಭರಣಗಳನ್ನು ಯಶಸ್ವಿಯಾಗಿ ಬಿಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

Daily Devotional: ಕಷ್ಟಕಾಲದಲ್ಲಿ ಅಡವಿಟ್ಟ ಚಿನ್ನಾಭರಣ ಬಿಡಿಸಲು ಸಾಧ್ಯವಾಗುತ್ತಿಲ್ಲವೇ? ಈ ಸರಳ ಪರಿಹಾರ ಪ್ರಯತ್ನಿಸಿ
ಅಡವಿಟ್ಟ ಚಿನ್ನಾಭರಣImage Credit source: London Gold Centre
ಅಕ್ಷತಾ ವರ್ಕಾಡಿ
|

Updated on: Jun 21, 2026 | 7:47 AM

Share

ಆರ್ಥಿಕ ಸಂಕಷ್ಟದ ಸಮಯದಲ್ಲಿ, ವಿಶೇಷವಾಗಿ ದಿಕ್ಕು ತೋಚದಿದ್ದಾಗ ಅಥವಾ ಯಾವುದೇ ಸಹಾಯ ಸಿಗದಿದ್ದಾಗ, ಜನರು ತಮ್ಮ ಆಭರಣಗಳನ್ನು ಅಡವಿಡುವುದು ಸಾಮಾನ್ಯ. ಇದು ವಿದ್ಯಾರ್ಥಿಗಳ ಶುಲ್ಕ, ಮನೆಯ ಅಗತ್ಯಗಳು, ಆಸ್ಪತ್ರೆ ವೆಚ್ಚಗಳು ಅಥವಾ ಯಾವುದೇ ತುರ್ತು ಪರಿಸ್ಥಿತಿಗಳಿಗೆ ಹಣಕಾಸು ಒದಗಿಸಲು ಒಂದು ಮಾರ್ಗವಾಗಿದೆ. ಆದರೆ, ಅಡವಿಟ್ಟ ಈ ಆಭರಣಗಳನ್ನು ಮರಳಿ ಪಡೆಯುವುದು ಅನೇಕರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕೆಲವೊಮ್ಮೆ ಸಂಪೂರ್ಣ ಹಣವನ್ನು ಪಾವತಿಸಲು ಸಾಧ್ಯವಾಗದೆ ಆಭರಣಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಪರಿಸ್ಥಿತಿಗಳೂ ಇರುತ್ತವೆ.

ಇತ್ತೀಚಿನ ದಿನಗಳಲ್ಲಿ, ಆಭರಣಗಳನ್ನು ಬಿಡಿಸಿಕೊಳ್ಳಲು ಹೋದಾಗಲೂ ಪೂರ್ಣ ಪ್ರಮಾಣದ ಆಭರಣಗಳು ಮರಳಿ ಸಿಗದಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಶಾಸ್ತ್ರಗಳಲ್ಲಿ ಸೂಚಿಸಲಾದ ಒಂದು ವಿಶಿಷ್ಟ ಆಧ್ಯಾತ್ಮಿಕ ಪರಿಹಾರವಿದೆ. ಈ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಈ ವಿಧಾನವು ಹಿಂದೂ ಸನಾತನ ಸಂಸ್ಕೃತಿಯಲ್ಲಿ ಆಳವಾದ ನಂಬಿಕೆಯನ್ನು ಆಧರಿಸಿದೆ. ಅಡವಿಟ್ಟ ಆಭರಣಗಳನ್ನು ಮರಳಿ ಪಡೆಯಲು ಒಂದು ನಿರ್ದಿಷ್ಟ ಪೂಜೆ ಮತ್ತು ಪ್ರಾರ್ಥನೆಯನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ.

ಪೂಜಾ ವಿಧಾನ:

  • ಶುಕ್ರವಾರದ ಬ್ರಾಹ್ಮೀ ಮುಹೂರ್ತ: ಈ ಪೂಜೆಯನ್ನು ಶುಕ್ರವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ, ಅಂದರೆ ಸೂರ್ಯೋದಯಕ್ಕೆ ಮುನ್ನ (ಬೆಳಗ್ಗೆ 6:30ರ ಒಳಗಾಗಿ) ಮಾಡಬೇಕು. ಈ ಸಮಯವನ್ನು ಆಧ್ಯಾತ್ಮಿಕ ಕಾರ್ಯಗಳಿಗೆ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
  • ಶುಚಿತ್ವ ಮತ್ತು ಸಿದ್ಧತೆ: ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಬೇಕು.
  • ಮುಡುಪಿನ ತಯಾರಿಕೆ: ಒಂದು ಹಳದಿ ಬಟ್ಟೆಯನ್ನು ತೆಗೆದುಕೊಂಡು, ಅದರಲ್ಲಿ ಎರಡು ಅರಿಶಿನ ಕೊಂಬುಗಳು, ಒಂದು ರೂಪಾಯಿ ನಾಣ್ಯ ಮತ್ತು ಸ್ವಲ್ಪ ಬಿಳಿ ಸಾಸಿವೆಯನ್ನು ಇಟ್ಟು ಗಂಟು ಕಟ್ಟಬೇಕು. ಈ ಮುಡುಪನ್ನು ತಯಾರಿಸುವಾಗ ಯಾವುದೇ ನಿರ್ಲಕ್ಷ್ಯ ಮಾಡಬಾರದು.
  • ಪ್ರಾರ್ಥನೆ: ಮುಡುಪನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು, ನಿಮ್ಮ ಇಷ್ಟದೇವರು ಅಥವಾ ಕುಲದೇವರಿಗೆ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು.
  • ರಸೀದಿಯ ಮೇಲೆ ಇಡುವುದು: ನಂತರ, ನೀವು ಬ್ಯಾಂಕ್ ಅಥವಾ ಬೇರೆ ಯಾವುದೇ ಸಂಸ್ಥೆಯಲ್ಲಿ ಅಡವಿಟ್ಟ ಆಭರಣಗಳ ರಸೀದಿಯ (ಅಥವಾ ಅದರ ಜೆರಾಕ್ಸ್ ಪ್ರತಿಯ) ಮೇಲೆ ಈ ಮುಡುಪನ್ನು ಇಡಬೇಕು.
  • ದಿಕ್ಕು ಮತ್ತು ಪ್ರಾರ್ಥನೆ: ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳಿತು, ದೇವರನ್ನು ನೆನೆದು ನಿಮ್ಮ ಸಂಕಷ್ಟವನ್ನು ಹೇಳಿಕೊಂಡು ಪ್ರಾರ್ಥಿಸಬೇಕು. “ಈ ಆಭರಣಗಳನ್ನು ನಾನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ನನಗೆ ಶಕ್ತಿ ನೀಡಪ್ಪ. 90 ದಿನಗಳೊಳಗೆ ಇವನ್ನು ಮರಳಿ ಪಡೆಯಲು ನನಗೆ ಸಹಾಯ ಮಾಡು” ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು.
  • ಮುಡುಪಿನ ಸ್ಥಳ: ಪ್ರಾರ್ಥನೆಯ ನಂತರ, ಈ ಮುಡುಪನ್ನು ನಿಮ್ಮ ಮನೆಯ ಬೀರು ಅಥವಾ ದೇವರ ಮನೆಯಲ್ಲಿ ಭದ್ರವಾಗಿ ಇಡಬೇಕು.
  • ಪುನರಾವೃತ್ತಿ: ಪ್ರತಿ ಶುಕ್ರವಾರವೂ ಅದೇ ಮುಡುಪನ್ನು ತೆಗೆದುಕೊಂಡು, ಕೈಯಲ್ಲಿ ಹಿಡಿದು, ಅದೇ ರೀತಿ ರಸೀದಿಯ ಮೇಲೆ ಇಟ್ಟು ಪ್ರಾರ್ಥನೆ ಮಾಡಬೇಕು. ಈ ವಿಧಾನವನ್ನು ಕನಿಷ್ಠ ಮೂರು ಶುಕ್ರವಾರಗಳು ಮತ್ತು ಸಾಧ್ಯವಾದರೆ ಆರು ಶುಕ್ರವಾರಗಳ ಕಾಲ ಪುನರಾವರ್ತಿಸಬೇಕು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ದೇವತೆ ಮತ್ತು ಮಂತ್ರ:

ನಿಮಗೆ ನಿಮ್ಮ ಕುಲದೇವರು ಅಥವಾ ಇಷ್ಟದೇವರು ಯಾರು ಎಂದು ತಿಳಿಯದಿದ್ದರೆ, ಸ್ಥಿತಿಕಾರಕನಾದ ಶ್ರೀ ವಿಷ್ಣುವನ್ನು ಸ್ಮರಿಸಬಹುದು. ಕಲಿಯುಗದಲ್ಲಿ ವೆಂಕಟನಾಥನು ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ದೇವರೆಂದು ನಂಬಲಾಗಿದೆ. ಅಂತಹವರು ಓಂ ನಮೋ ವೆಂಕಟೇಶಾಯ ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us